Friday, January 15, 2010

ಅಪಘಾತ



ಶ್ರಾವಣಕುಮಾರ ತನ್ನ ಕೆಲಸದ ಬಗ್ಗೆ ಯೋಚಿಸುತ್ತಾ ಬೈಕಿನ ಆಕ್ಸಿಲರೇಟರ್ ಜೋರಾಗಿ ತಿರುಗಿಸಿದ. ಘಂಟೆಗೆ ನಲವತ್ತರ ವೇಗ ತೋರಿಸುತ್ತಿದ್ದ ಮುಳ್ಳು ಕ್ರಮೇಣ ಅರವತ್ತು ಕೀಲೋಮೀಟರ್ ಕಡೆಗೆ ಸಾಗಿತ್ತು. ರಾಜದೂತ್ ಬೈಕಿನ ಸ್ಪೀಡೋಮೀಟರಿನಲ್ಲಿ ನಲವತ್ತು-ಐವತ್ತು ನಡುವೆಯಿದ್ದ ಹಸುರು ಪರಿಧಿಯನ್ನು ಮುಳ್ಳು ದಾಟಿತ್ತು. ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಬೈಕ್ ಓಡಿಸುವುದು ಶ್ರಾವಣನಿಗೆ ಬಹಳ ಇಷ್ಟದ ಕೆಲಸ. ಅದಕ್ಕೆ ಕಾರಣಗಳು ಹಲವು: ಕಡೆಗೂ ಈ ಹೆದ್ದಾರಿ ತಲುಪುವುದು ಬೆಂಗಳೂರನ್ನು ಎಂಬುದು ಒಂದು ಕಾರಣ. ಜೊತೆಗೆ ಆ ಹೆದ್ದಾರಿಯ ರಸ್ತೆಗಳು ಸಮತಟ್ಟಿನಲ್ಲಿರದೇ ಅಂಕುಡೊಂಕುಗಳಿಂದ ಕೂಡಿದ್ದರಿಂದ ಬೈಕನ್ನು ಹಾಗೆ, ಹೀಗೆ ವಾಲಿಸುತ್ತಾ ಸಾಗಲು ಅನುಕೂಲ. ಜೊತೆಗೆ ಆರ್ ಅಂಡ್ ಬಿ ವಿಭಾಗದ ಕೃಪಾಕಟಾಕ್ಷ ಈಚೆಗಷ್ಟೇ ಆ ಹೆದ್ದಾರಿಯ ಮೇಲಾಗಿದ್ದು ರಸ್ತೆ ಚೆನ್ನಾಗಿಯೂ ಇತ್ತು.

ಶ್ರಾವಣನಿಗೆ ಈ ಹೆದ್ದಾರಿ ಹೊಸದೇನೂ ಅಲ್ಲ. ಪ್ರತೀ ಬಾರಿ ಜಡಚರ್ಲದಿಂದ ಮೂರು ಕಿಲೋಮೀಟರ್ ದೂರದಲ್ಲಿದ್ದ ಬೋಯಿನಪಲ್ಲಿಯ ಸಹಕಾರ ಸಂಘಕ್ಕೆ ಅವನು ತನ್ನ ಸಂಸ್ಥೆಯ ವತಿಯಿಂದ ಭೇಟಿ ಕೊಡುವುದಿತ್ತು. ಸಹಕಾರ ಸಿದ್ಧಾಂತ, ಸೂತ್ರಗಳ ಬಗ್ಗೆ ಸಣ್ಣ ಗುಂಪುಗಳಿಗೆ ಪಾಠಮಾಡುವುದೂ ಅವನ ಕೆಲಸಗಳಲ್ಲಿ ಒಂದು. ಹೀಗೆ ಆಗಾಗ ಈ ಸಹಕಾರ ಸಂಘಕ್ಕೆ ಬಂದು, ಹೋಗಿ ಮಾಡುವುದರಿಂದ - ಅವನಿಗೆ ಈ ರಸ್ತೆ ಸುಪರಿಚಿತವಾಗಿದ್ದು ಕಣ್ಣು ಮುಚ್ಚಿಕೊಂಡರೂ ಬೈಕನ್ನು ಇಲ್ಲಿ ಓಡಿಸಬಹುದು ಅನ್ನಿಸಿತ್ತು. ಪ್ರತಿಬಾರಿಯೂ ಅದೇ ಕಾರ್ಯಕ್ರಮ: ಹೈದರಾಬಾದಿನಿಂದ ಹೊರಡುವುದು, ಷಾದ್ ನಗರದಲ್ಲಿ ಚಹಾ ಕುಡಿಯುವುದು, ಬೋಯಿನಪಲ್ಲಿಯಲ್ಲಿ ಪಾಠ, ಸಂಜೆಗೆ ಮತ್ತೆ ಷಾದ್ ನಗರದಲ್ಲಿ ಚಹಾ ಕುಡಿದು - ಹೈದರಾಬಾದಿಗೆ ವಾಪಸ್.

ಅಂದೂ ಸಹ ಶ್ರಾವಣ ಇದೇ ಕಾರ್ಯಕ್ರಮದನುಸಾರ, ಇದೇ ರಸ್ತೆಯ ಮೇಲೆ ಬರುತ್ತಿದ್ದ. ಹೌದು. ಪೆಟ್ರೋಲ್ ತುಟ್ಟಿಯ ಈ ಕಾಲದಲ್ಲಿ ಸ್ಪೀಡೋಮೀಟರಿನ ಹಸುರು ಪರಿಧಿಯನ್ನು ದಾಟದ ಶ್ರಾವಣ ಅಂದು ಮಾತ್ರ ಅದನ್ನೂ ಮೀರುವಂತೆ ಆಕ್ಸಿಲರೇಟರ್ ತಿರುಗಿಸಿದ್ದ.

ಮಧ್ಯಾಹ್ನ ಬೋಯಿನಪಲ್ಲಿಯಿಂದ ಜಡಚರ್ಲಕ್ಕೆ ಬಂದು ಊಟ ಮಾಡಬೇಕಿತ್ತು. ಊಟಕ್ಕೆ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಸಹಕಾರ ಸಂಘದ ಅಧ್ಯಕ್ಷ ಪ್ರತ್ಯಕ್ಷನಾಗಿ ಶ್ರಾವಣನಿಗೆ ನಮಸ್ಕಾರ ಹೊಡೆದು ಕುಶಲ ವಿಚಾರಿಸಿದ. ಸಂಘದ ಕೆಲಸ ಹೇಗೆ ನಡೀತಿದೆ - ಸಂಘದಿಂದ ಬೇರೇವಾದರೂ ಬೇಕೇ? ಎಂದೆಲ್ಲಾ ಮಾತಾಯಿತು. ಶ್ರಾವಣ: "ಸ್ಕೂಲಿನ ರೆಡ್ಡಪ್ಪ ಮಾಸ್ತರ ಬಳಿಯಿಂದ ಪ್ರತಿಬಾರಿಯೂ ಕಪ್ಪು ಹಲಿಗೆ ಎರವಲು ತರುವುದು ಕಷ್ಟವಾಗುತ್ತೆ - ಒಂದು ಹಲಿಗೆ ಕೊಂಡುಬಿಡಿ" ಎಂದು ಸೂಚಿಸಿದ. ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿ ಮುಂದಿನ ಕಮಿಟಿ ಮೀಟಿಂಗಿನಲ್ಲಿ ಈ ಪ್ರಸ್ತಾಪ ಮಾಡುವ ಭರವಸೆ ಕೊಟ್ಟ. ಅಪ್ಪಲರೆಡ್ಡಿ ಏಳುವಷ್ಟರಲ್ಲಿ ಏನೋ ನೆನಪುಮಾಡಿಕೊಂಡು -

"ಸಾಯಂಕಾಲ ಹೈದರಾಬಾದಿಗೆ ಹೋಗ್ತೀರಾ?" ಎಂದು ಕೇಳಿದ.

"ಹೌದು, ಯಾಕೆ?"

"ಏನಿಲ್ಲ, ನನಗೆ ಹಳ್ಳಿಯಲ್ಲಿ ಸ್ವಲ್ಪ ಕೆಲಸ ಇದೆ. ಅದು ಮುಗಿಸಿಕೊಂಡು ನಾನು ಹೈದರಾಬಾದಿಗೆ ಹೋಗಬೇಕು. ಅಲ್ಲಿ ಆರೂ ನಲವತ್ತರ ಟ್ರೈವೀಕ್ಲಿಯಲ್ಲಿ ನಮ್ಮ ಪಾರ್ಟಿ ಕಾರ್ಯಕರ್ತ ಮದ್ರಾಸಿಗೆ ಹೋಗುತ್ತಿದ್ದಾನೆ. ಅವನಿಗೆ ಒಂದು ಪ್ಯಾಕೆಟ್ ಕೊಡಬೇಕು. ನಾನೂ ನಿಮ್ಮ ಜೊತೆ ಬಂದರೆ ಹೇಗೇಂತ ಯೋಚನೆ ಮಾಡುತ್ತಿದ್ದೆ... ನಾಂಪಲ್ಲಿ ಸ್ಟೇಷನ್ ನಲ್ಲಿ ನೀವು ನನ್ನನ್ನ ಇಳಿಸಿಬಿಡುತ್ತೀರಾ? ಈ ಆರ್ ಟಿ ಸಿಯ ಗೋಳು ನಿಮಗೆ ಗೊತ್ತೇ ಇದೆಯಲ್ಲಾ..."

"ಓಹೋ.. ಅದಕ್ಕೇನು... ಖಂಡಿತವಾಗಿ ಬನ್ನಿ ಪರವಾಗಿಲ್ಲ. ನಾನು ನಾಲ್ಕು ಘಂಟೆಗೆ ಸರಿಯಾಗಿ ಕ್ಲಾಸು ಮುಗಿಸುತ್ತೇನೆ. ಎರಡೂವರೆ ಘಂಟೆ ಟೈಮಿರುತ್ತದೆ.. ಎಂಬತ್ತು ಕಿಲೋಮೀಟರ್ ಆರಾಮವಾಗಿ ಹೋಗಬಹುದು."

ಶ್ರಾವಣ ಹೇಳಿದಂತೆಯೇ ಆಗಿದ್ದರೆ ಚೆನ್ನಾಗಿತ್ತು. ಆದರೆ ಅಪ್ಪಲರೆಡ್ಡಿ ಸ್ಥಳೀಯ ರಾಜಕೀಯ ಮುಗಿಸಿ ಸಹಕಾರ ಸಂಘಕ್ಕೆ ಬರುವ ವೇಳೆಗೆ ನಾಲ್ಕೂಮುಕ್ಕಾಲಾಗಿತ್ತು. ಎರಡು ಘಂಟೆ ಸಮಯದಲ್ಲಿ ಹೈದರಾಬಾದೇನೋ ತಲುಪಬಹುದಿತ್ತಾದರೂ - ನಾಂಪಲ್ಲಿ ಸೇರಬಹುದೇ? ಎಂಬ ಪ್ರಶ್ನೆಯಿತ್ತು.

"ಬನ್ನಿ ಹೊರಡೋಣ" ಅಂತ ಗಡಿಬಡಿಮಾಡಿ ಬೈಕಿನ ಕಿಕ್ ಒದ್ದ. ಸಮಯದ ಅಭಾವ ಇದ್ದುದರಿಂದ ಬೇಗ ಹೋಗಲೇ ಬೇಕಿತ್ತು. ಶ್ರಾವಣನ ಮನಸ್ಸಿನಲ್ಲಿ ಇದ್ದುದು ಇಷ್ಟೇ... "ಎಷ್ಟಾದರೂ ರಾಜಕೀಯ ವ್ಯಕ್ತಿ, ಒಂದಿಲ್ಲ ಒಂದು ದಿನ ಕೆಲಸಕ್ಕೆ ಬರುತ್ತಾನೆ. ಸಹಾಯ ಮಾಡಿದರೆ ನಷ್ಟವೇನು?" ಹೀಗೆ ಬೋಯಿನಪಲ್ಲಿಯಿಂದ ಲೆಕ್ಕಾಚಾರ ಹಾಕಿ ಹೊರಟ. ಸ್ಪೀಡೋಮೀಟರಿನ ಮುಳ್ಳು ಹಸಿರು ಪರಿಧಿಯನ್ನು ದಾಟಿತ್ತು.

ಬೈಕ್ ಓಡಿಸುವಾಗ ಶ್ರಾವಣ ಮಾತಾಡುವುದಿಲ್ಲ. ಮಾತಾಡಿದರೆ ಹಿಂದೆ ತಿರುಗಬೇಕಾಗುತ್ತೆ. ಅರಚಿದರೂ ಧ್ವನಿ ಗಾಳಿಯಲ್ಲಿ ತೇಲೀಹೋಗುತ್ತದೆ. ಹಿಂದಿರುವವರಿಗೆ ಕೇಳಿಸುವುದಿಲ್ಲ. ಅದೇ ಹಿಂದೆ ಕೂತಿರುವವರು ಇಷ್ಟಬಂದದ್ದನ್ನು ಚಾಲಕನ ಕಿವಿಯಲ್ಲಿ ಅರಚಬಹುದು. ಹೀಗಾಗಿ ಈ ವನ್-ವೇ ಮಾತುಕತೆ ಶ್ರಾವಣನಿಗೆ ಹಿಡಿಸದು. ಮಾತಾಡದಿರಲು ಮತ್ತೊಂದು ಕಾರಣವೆಂದರೆ ಬಾಯಿ ತೆರೆದ ಕೂಡಲೇ ಒಳಹೊಕ್ಕು ಬರುವ ಹುಳಗಳು. ಗೋಧೂಳಿಯ ಸಮಯ ಉಲ್ಲಾಸಕರ, ಆಹ್ಲಾದಕರ ಎಂದೆಲ್ಲಾ ಹೇಳುವಾಗ ಈ ಸಂಜೆಯ ಅನುಭವ ಶ್ರಾವಣನಿಗೆ ಯಾವಾಗಲೂ ನೆನಪಾಗುತ್ತದೆ. ಬೈಕ್ ಚಲಾಯಿಸುವಾಗ ಕಣ್ಣು ಮೂಗು ಬಾಯಿಯೆಂದು ಹೊಕ್ಕುಬಿಡುವ ಪುಟ್ಟಪುಟ್ಟ ಹಳುಗಳು. ಹೀಗಾಗಿ ಅಪ್ಪಲರೆಡ್ಡಿಯನ್ನ ಹಿಂದೆ ಕೂಡಿಸಿಕೊಂಡು ಬರುತ್ತಿದ್ದ ಶ್ರಾವಣ ಕನ್ನಡಕದೊಂದಿಗೆ ಮೌನವನ್ನೂ ಧರಿಸಿದ್ದ.

ಹೀಗೆ ಯೋಚಿಸುತ್ತಾ, ಕ್ಲಚ್ ಹಿಡಿಯುತ್ತಾ, ಬ್ರೇಕ್ ಒತ್ತುತ್ತಾ, ಗೇರ್ ಬದಲಾಯಿಸುತ್ತಾ, ಆಕ್ಸಲರೇಟರ್ ತಿರುಗಿಸುತ್ತಾ ಹೋಗುತ್ತಿರುವಾಗಲೇ ಷಾದ್ ನಗರ್ ಬಂದುಬಿಟ್ಟಿತ್ತು. ಚಹಾ ಕುಡಿಯಲು ನಿಲ್ಲಿಸಬೇಕೋ ಬೇಡವೋ ಎಂದು ಕೈಗಡಿಯಾರ ನೋಡಿಕೊಂಡ. ಸಮಯವಿಲ್ಲ ಎಂದು ನಿರ್ಧರಿಸಿ ಮುಂದೆ ಸಾಗುತ್ತಿದ್ದಂತೆ ಸ್ಪೀಡೋಮೀಟರಿನ ಮುಳ್ಳು ಮತ್ತೆ ಹಸಿರು ಪರಧಿಗೆ ಬಂದುಬಿಟ್ಟಿತ್ತು. ನಗರ ಪ್ರದೇಶಕ್ಕೆ ಬಂದದ್ದರಿಂದ ಶ್ರಾವಣ ವೇಗವನ್ನು ಇಳಿಸಿದ್ದ.

*
*

ಶ್ರಾವಣ ಎದ್ದಾಗ ಕಾಲು ನೋಯುತ್ತಿತ್ತು. ಪ್ಯಾಂಟ್ ಮೊಣಕಾಲಿನ ಬಳಿ ಹರಿದಿತ್ತು. ಬೈಕ್ ಕೆಳಗೆ ಬಿದ್ದು ಪೆಟ್ರೋಲು ಸುರಿಯುತ್ತಿತ್ತು. ಬೈಕಿನ ಹಿಂದಿನ ಚಕ್ರ ಗಿರ್ರನೆ ತಿರುಗುತ್ತಿತ್ತು. ಬೈಕು ಬುರುಬುರು ಶಬ್ದ ಮಾಡುತ್ತಿತ್ತು. ಶ್ರಾವಣ ಬಗ್ಗಿದ. ಬೈಕನ್ನು ಎತ್ತಿ ನಿಲ್ಲಿಸಿದ. ತಿರುಗುತ್ತಿದ್ದ ಚಕ್ರ ಇದ್ದಕ್ಕಿದ್ದಂತೆ ನಿಂತಾಗ ಗೇರ್ ನಲ್ಲಿದ್ದ ಬೈಕಿನ ಇಂಜನ ನಿಂತುಹೋಯಿತು. ನ್ಯೂಟ್ರಲ್ ಗೆ ಗೇರ್ ಒತ್ತುತ್ತಿದ್ದಂತೆ ಯಾರೋ "ಬೈಕ್ ಪಕ್ಕಕ್ಕೆ ನಿಲ್ಲಿಸಿ ಸ್ಟಾಂಡ್ ಹಾಕಿ" ಎಂದು ಆದೇಶವಿತ್ತರು. ಶ್ರಾವಣ ಹಾಗೆಯೇ ಮಾಡಿದ. ಬಿದ್ದಿದ್ದ ಅಪ್ಪಲರೆಡ್ಡಿಯೂ ಎದ್ದು ನಿಂತ. ಅವನಿಗೆ ಏನೂ ಆಗಿರಲಿಲ್ಲ.... ಸ್ವಲ್ಪ ಕೈ ತರಚಿತ್ತಷ್ಟೇ. ಶ್ರಾವಣನ ಮೊಣಕಾಲು ಗಾಯದಿಂದ ನೋಯುತ್ತಿತ್ತು. ಬಗ್ಗಿ ನೋಡಿಕೊಂಡ.. ಸ್ವಲ್ಪ ರಕ್ತವೂ ಒಸರುತ್ತಿತ್ತು.

"ಥತ್ತೇರಿ" ಎಂದು ಶ್ರಾವಣ ಗೊಣಗಿಕೊಂಡ. ಎದುರಿಗಿದ್ದ ಸೈಕಲ ನೋಡಿದ. ಸರಿಯಾಗಿ ಮಧ್ಯಭಾಗದಲ್ಲಿ ಸೊಟ್ಟಗಾಗಿತ್ತು. ಬಿದ್ದ ಹುಡುಗನನ್ನು ಆಗಲೇ ಅಲ್ಲಿನ "ನೇತಾ"ಗಳು ಸ್ಥಳದಿಂದ ಖಾಲಿ ಮಾಡಿಸಿದ್ದರು.

"ಇಲ್ಲೇ ನಿಂತಿರಿ" ಎಂದು ಯಾರೋ ಆದೇಶ ಕೊಟ್ಟರು. ಶ್ರಾವಣ ತನ್ನ ಗಾಯಗಳನ್ನು ನೋಡಿಕೊಂಡ. ಮೊಣಕಾಲು ತರಚಿತ್ತು. ಬಲಗಾಲಿನ ಹಿಮ್ಮಡಿಯ ಮೇಲಿನ ಚರ್ಮ ಉರಿಯತೊಡಗಿ ಪ್ಯಾಂಟಿನ ಅಂಚನ್ನು ಎತ್ತಿ ನೋಡಿದ. ಸೈಲೆನ್ಸರ್ ತಗಲಿ - ಚರ್ಮ ಎರಡಂಗುಲದಷ್ಟು ಸುಟ್ಟಿತ್ತು. ನೋಡನೋಡುತ್ತಾ ಸುತ್ತ ಜನ ನೆರೆದರು. ಅಪಘಾತ ಹೇಗಾಯಿತು? ಎಲ್ಲರಿಗೂ ತಿಳಿಯುವ ಕುತೂಹಲ.

ಶ್ರಾವಣ ತನ್ನ ಸಮಜಾಯಿಷಿ ಕೊಟ್ಟ. "ಅಲ್ಲಿ ಲಾರಿ ನಿಂತಿತ್ತು. ನಾನು ಅದನ್ನ ದಾಟಿ ಹೋಗುತ್ತಾ ಇದ್ದೆ. ಆ ಕಡೆಯಿಂದ ಸೈಕಲ್ ತಳ್ಳುತ್ತಾ ಹುಡುಗನೊಬ್ಬ ರಸ್ತಾ ದಾಟುತ್ತಿದ್ದ. ನಾನು ನಲವತ್ತರ ವೇಗದಲ್ಲಿ ಬರುತ್ತಾ ಇದ್ದೆ. ಈ ಹುಡುಗ ಇದ್ದಕ್ಕಿದ್ದ ಹಾಗೆ ಲಾರಿಯ ಹಿಂದಿನಿಂದ ಪ್ರತ್ಯಕ್ಷನಾದ.... ನಾನು ಬ್ರೇಕು, ಫ್ರಂಟ್ ಬ್ರೇಕು ಎಲ್ಲಾ ಒತ್ತಿದೆ. ಆದರೆ ನನಗು ಆ ಹುಡುಗನಿಗೂ ಇದ್ದ ಹತ್ತಡಿ ಅಂತರದೊಳಗಾಗಿ ಬೈಕನ್ನು ನಿಲ್ಲಿಸುವುದು ಅಸಾಧ್ಯವಿತ್ತು." ಶ್ರಾವಣ ಹೇಳುತ್ತಿದ್ದ. ಹಾಗೆ... ರಸ್ತೆಯ ಅಂಚಿಗೆ ಬದಲಾಗಿ ರಸ್ತೆಗಡ್ಡ ನಿಲ್ಲಸಿದ್ದ ಲಾರಿಯ ಚಾಲಕ ಸದ್ದಿಲ್ಲದೇ ಲಾರಿಯೊಂದಿಗೆ ಜಾಗ ಖಾಲಿ ಮಾಡಿದ್ದ.

"ನಿಮಗೆ ಗಾಯ ಆಯಿತೇ? ತೋರಿಸಿ...?" ಯಾರೋ ಕೇಳಿದರು. ಶ್ರಾವಣ ಗಾಯಗಳನ್ನು ಪ್ರದರ್ಶಿಸಿದ. ಜನ ಸಹಾನುಭೂತಿ ವ್ಯಕ್ತಪಡಿಸಿದರು. "ಹುಡುಗನಿಗೇನಾಯಿತು?" ದನಿಯೊಂದು ಕೇಳಿತು. "ಡಕ್ಟರ ಬಳಿ ಒಯ್ದಿದ್ದಾರೆ. ಏನೇ ಆದರೂ ಹುಡುಗನದ್ದೇ ತಪ್ಪು."

"ನೀವೂ ಡಾಕ್ಟರ ಹತ್ತಿರ ತೋರಿಸಿಕೊಂಡುಬಿಡಿ" ಉಚಿತ ಸಲಹೆ ಗುಂಪಿನಿಂದ ಬಂತು."

"ಇದು ಇತ್ಯರ್ಥವಾಗಲಿ." ಶ್ರಾವಣ ಗಡಿಯಾರ ನೋಡಿಕೊಳ್ಳುತ್ತಾ ಹೇಳಿದ. ಆಗಲೇ ಸಮಯ ಆರು ಘಂಟೆಯಾಗಿತ್ತು. ಅಪ್ಪಲರೆಡ್ಡಿಯ ಕೆಲಸವಂತೂ ಕೆಟ್ಟೇ ಕೆಟ್ಟಿತ್ತು.

ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿ ಬಂದು "ಒಂದು ಕಾಫಿ ಕುಡಿದು ಬರೋಣ ಬನ್ನಿ" ಎಂದ. "ಅದು ಸರಿ ಅವರೇನಂತಾರೆ?" ಶ್ರಾವಣ ಕುಂಟುತ್ತಾ ಕೇಳಿದ. "ಇದು ಇತ್ಯರ್ಥ ಆಗೋದಕ್ಕೆ ಸ್ವಲ್ಟ ಟೈಂ ಹಿಡಿಯುತ್ತೆ. ದುಡ್ಡು ಕೇಳುತ್ತಾರಿ. ಪರವಾಗಿಲ್ಲ ಅನ್ನಿಸೋ ಮೊತ್ತ ಆದರೆ ಕೊಟ್ಟು ಬಿಡೋದು. ಇಲ್ಲವಾದರೆ ಪೋಲೀಸ್ ಕೇಸ್ ಆಗುತ್ತೆ. ಆಗಲಿಬಿಡಿ. ಇಲ್ಲಿ ನನ್ನ ವಕೀಲ ಮಿತ್ರರಿದ್ದಾರೆ - ಅವರಿಗೂ ಹೇಳಿಕಳಿಸಿದ್ದೇನೆ. ಬೇಗನೇ ಇತ್ಯರ್ಥ ಮಾಡೋಣ.."

"ಪಾಪ ನಿಮ್ಮ ನಾಂಪಲ್ಲಿ ಕೆಲಸ ಹಾಳಾಯಿತು..."

"ಅದೆಲ್ಲಾ ನಮಗೆ ಇದ್ದದ್ದೇ ಬಿಡಿ. ನೀವು ಅದಕ್ಕಾಗಿ ಬೇಜಾರು ಮಾಡಿಕೋಬೇಡಿ."

ಕಾಫಿಗಾಗಿ ಹೋಟೇಲ್ ಪ್ರವೇಶಿಸುತ್ತಿದ್ದಂತೆ ಶ್ರಾವಣ ಹೇಳಿದ... "ಸರ್.... ನನಗನ್ನಿಸುತ್ತೆ - ಅವರು ಕೇಳಿದಷ್ಟು ದುಡ್ಡು ಕೊಟ್ಟುಬಿಡೋದು ವಾಸೀಂತ. ಯಾಕೇಂದ್ರೆ ನನ್ನ ಲೈಸೆನ್ಸು 'ಶರಣ್' ಅನ್ನೋ ಹೆಸರಿನಲ್ಲಿದೆ. ಯಾವುದೋ ಬ್ರೋಕರ್ ಕೈಲಿ ಮಾಡಿಸಿದ್ದೆ. ಅವನು ಹೆಸರು ಸರಿಯಾಗಿ ಬರಕೊಳ್ಳದೇ ಹೀಗೆ ಮಾಡಿದ್ದಾನೆ. ಕೇಸ್ ಆದರೆ ಸ್ವಲ್ಪ ತೊಂದರೆ... ಜೊತೆಗೆ ಇದು ಆಫೀಸಿನ ಗಾಡಿ.."


"ಅಯ್ಯೋ, ಏನೂ ಯೋಚನೆ ಮಾಡಬೇಡಿ. ಈ ವ್ಯವಹಾರಗಳೆಲ್ಲಾ ಸಾಮಾನ್ಯವೇ. ನಾನು ಇದನ್ನು ಇತ್ಯರ್ಥ ಮಾಡುತ್ತೇನೆ." ಅಪ್ಪಲರೆಡ್ಡಿ ಹೇಳುತ್ತಿದ್ದಂತೆ - ಪಕ್ಕದ ಟೇಬಲ್ಲಿನಲ್ಲಿ ಕೂತು ಇವರ ಮಾತು ಕೇಳಿಸಿಕೊಳ್ಳುತ್ತಿದ್ದವನೊಬ್ಬ ಗಡಿಬಿಡಿಯಿಂದ ಎದ್ದು ಹೋದ.

ಮತ್ತೆ ಸ್ಪಾಟಿಗೆ ವಾಪಸ್ಸಾಗುತ್ತಿದ್ದ ದಾರಿಯಲ್ಲಿ - ಪ್ರಥಮ ಚಿಕಿತ್ಸೆ ಮಾಡಿಸಿಕೊಂಡು ಬರಲು ಯಾರೋ ಸೂಚಿಸಿದರು. ಅಲ್ಲೇ ಯಾರದೋ ಮನೆಗೆ ಹೋಗಿ ಟಿಂಚರ್ ಹಾಕಿಸಿಕೊಂಡು ಬಂದದ್ದಾಯಿತು. ಸದ್ಯಕ್ಕೆ ತೆರೆದಿದ್ದದ್ದು ಸರಕಾರಿ ದವಾಖಾನೆ ಮಾತ್ರ ಆಗಿದ್ದರಿಂದ - ಅಲ್ಲಿಗೆ ಹೋದರೆ ಹೆಸರು ನಮೂದು ಆಗುತ್ತದೆ ಬೇಡ ಎಂದು ಶ್ರಾವಣ ನಿರ್ಧರಿಸಿದ.

ಅಪ್ಪಲರೆಡ್ಡಿ ಜನರ ಜೊತೆ ಮಾತನಾಡಿ ಚೌಕಾಶಿ ಮಾಡಿ ಹುಡುಗನಿಗೆ ಐನುರು ರೂಪಾಯಿಗಳನ್ನು ಕೊಡುವುದೆಂದು ಇತ್ಯರ್ಥ ಮಾಡಿಬಿಟ್ಟ. ಶ್ರಾವಣನಿಗೆ ಈ ಮೊತ್ತ ಹೆಚ್ಚೆನ್ನಿಸಿದರೂ ಹೇಳಲಾಗಲಿಲ್ಲು. ಆದರೂ ಪ್ರಯತ್ನ ಮಾಡಿದ..."ನೋಡಿ ತಪ್ಪು ನನ್ನದಲ್ಲ. ನೀವೂ ಅದನ್ನ ಒಪ್ಪುತ್ತೀರಿ. ಐನೂರು ಹೆಚ್ಚಲ್ಲವೇ?"

ಆದರೆ ಅಪ್ಪಲರೆಡ್ಡಿಯೊಳಗಿನ ರಾಜಕಾರಣಿ ಜಾಗೃತವಾಗಿದ್ದ. ಕಳೆದ ಬಾರಿ ಚುವಾವಣೆ ಸೋತಿದ್ದ ಈ ಭಾವೀ ಶಾಸಕ - "ಹೋಗಲಿ ಒಪ್ಪಿಕೊಂಡುಬಿಡಿ, ಹುಡುಗನಿಗೆ ಸಹಾಯ ಆದ ಹಾಗಾಗುತ್ತೆ. ಪಾಪ ಬಡವ.." ಎಂದುಬಿಟ್ಟ. ಈ ವಾಕ್ಯದೊಂದಿಗೆ ಮುಂದಿನ ಬಾರಿ ಚುನಾವಣೆಯಲ್ಲಿ ಅವನ ಠೇವಣಿ ಉಳಿಯುವ ಸಾಧ್ಯತೆ ಹೆಚ್ಚಾಗಿತ್ತು.

"ಅಪ್ಪಲರೆಡ್ಡಿಗಾರು ಹೇಳಿದ ಮೇಲೆ ಮುಗೀತು." ಎಂದರು ಜನ. ಬೋಲ್ಟ್ ಮುರಿದು ಒಂದು ಕಡೆ ಬಿಚ್ಚಿಕೊಂಡಿದ್ದ ಬಂಪರನ್ನು ಯಾರೋ ಉಚಿತವಾಗಿ ರಿಪೇರಿ ಮಾಡಿದರು.

"ಶ್ರಾವಣ್ ಹೇಗೂ ಮದರಾಸಿನ ರೈಲು ಹಿಡಿಯೋಕ್ಕೆ ಸಾಧ್ಯವಾಗೋದಿಲ್ಲ - ನಾನು ಬೋಯಿನಪಲ್ಲಿಗೆ ವಾಪಸ್ ಹೋಗುತ್ತೇನೆ. ನೀವು ಹುಷಾರಾಗಿ ಹೋಗಿ. ಪ್ಯಾಕೆಟ್ ಗೆ ನಾನು ಬೇರೆನಾದರೂ ಏರ್ಪಾಟು ಮಾಡುತ್ತೇನೆ. ಸದ್ಯಕ್ಕೆ ದುಡ್ಡು ನಾನೇ ಕೊಟ್ಟಿರುತ್ತೇನೆ. ನೀವು ಆಮೇಲೆ ನನಗೆ ಕೊಟ್ಟರಾಯಿತು. ಸರಿಯೇ?" ಎನ್ನುತ್ತಲೇ ಅಪ್ಪಲರೆಡ್ಡಿ ಹಣ ಎಣಿಸಿಕೊಟ್ಟು ಜಡಚರ್ಲದ ಕಡೆ ಹೋಗುತ್ತಿದ್ದ ಮತ್ತೊಂದು ಬೈಕ ಸವಾರನ ಬೆನ್ನು ಹತ್ತಿದ.

ಶ್ರಾವಣ ಮತ್ತೆ ಮೋಟರ್ಬೈಕಿಗೆ ಕಿಕ್ ಕೊಟ್ಟ. ಎಡ ಮೊಣಕಾಲಿನಿಂದ ರಕ್ತ ಒಸರಿ ಪ್ಯಾಂಟ್ ಚರ್ಮಕ್ಕೆ ಅಂಟಿಕೊಂಡು ಬಿಟ್ಟಿತ್ತು. ಅದನ್ನ ಬಿಡಿಸಿಕೊಂಡ. ಬಲಗಾಲನ್ನು ಒಂದೆರಡುಬಾರಿ ಆಡಿಸಿ ನೋಡಿದ. ಹೈದರಾಬಾದ್ ಸೇರಬಹುದು ಪರವಾಗಿಲ್ಲ, ಅನ್ನಿಸಿತು. ಗೇರ್ ಒತ್ತಿದ.

ರಾಜದೂತ್ ಷಾದ್ ನಗರ ಬಿಡುತ್ತಿದ್ದಂತೆ - ಅಪಘಾತದಲ್ಲಿ ಬಿದ್ದ ಹುಡುಗನ ತಾಯಿಗೆ ಯಾರೋ ಇಪ್ಪತ್ತು ರೂಪಾಯಿ ತಲುಪಿಸಿದರು. ಬಾಡಿಗೆ ಸೈಕಲ್ಲಿನ ಮಾಲೀಕನಿಗೆ ಸೈಕಲ್ ರಿಪೇರಿಗಾಗಿ ಮತ್ತೆ ಇಪ್ಪತ್ತು ರೂಪಾಯಿ ಕೊಡಲಾಯಿತು. ಆ ರಾತ್ರೆ ಮಹಾರಾಜಾ ಬಾರ್ ನಲ್ಲಿ ನೇತಾಗಳ ಸಮಾವೇಶ ಏರ್ಪಾಟಾಗಿತ್ತು.

ಅಪ್ಪಲರೆಡ್ಡಿ - ಮೂವತ್ತು ಓಟುಗಳನ್ನು ಮುಂದಿನ ಚುನಾವಣೆಗೆ ಸಂಪಾದಿಸಿದ ಖುಷಿಯಲ್ಲಿ ಹಳ್ಳಿ ಸೇರಿದ.

ಶ್ರಾವಣ ಹೈದರಾಬಾದ್ ಸೇರಿಕೊಂಡ. ಡಾಕ್ಟರ ಬಳಿ ಹೋಗಿ ಆಂಚಿ ಟೆಟನಸ್ ಸೂಜಿ ಚುಚ್ಚಿಸಿಕೊಂಡ. ಡಾಕ್ಟರಿಗೆ ಇಪ್ಪತ್ತೈದು ರೂಪಾಯಿ ತೆತ್ತು - ಐವತ್ತು ರೂಪಾಯಿಗಳ ಮಾತ್ರೆಗಳನ್ನು ತೆಗೆದುಕೊಂಡು ಮನೆಗೆ ಬಂದ. ಈ ಬಾರಿ ಫೆಸ್ಟಿವಲ್ ಅಡ್ವಾನ್ಸ್ ತೆಗೆದುಕೊಂಡು ಅಪ್ಪಲರೆಡ್ಡಿಯ ಸಾಲ ತೀರಿಸಬೇಕೆಂದು ಯೋಚಿಸುತ್ತಲೇ ಮನೆಯೊಳಕ್ಕೆ ಪ್ರವೇಶಿಸಿದ. ಅಪ್ಪಲರೆಡ್ಡಿಯ ಸಾಲ ತೀರಿಸಬೇಕೆಂದು ಯೋಚಿಸುತ್ತಲೇ ಮನೆಯೊಳಗೆ ಪ್ರವೇಶಿಸಿದ. ತುಂಬಾ ಸುಸ್ತಾಗಿತ್ತು. ಬೇಸರವಾಗಿತ್ತು. ಟಿ.ವಿ.ಯ ಸ್ವಿಚ್ ಒತ್ತಿ ಧೊಪ್ಪನೆ ಕುರ್ಚಿಯಲ್ಲಿ ಕೂತ.

ದೂರದರ್ಶನದಲ್ಲಿ ದಕ್ಷಿಣ ಮಧ್ಯ ರೇಲ್ವೆಯ ಪ್ರಕಟಣೆಗಳು ಬರುತ್ತಿದ್ದುವು. ವರಂಗಲ್ ಬಳಿ ಗುಡ್ಸ್ ಗಾಡಿಯೊಂದು ಡೀ-ರೈಲಾದ್ದರಿಂದ ರೈಲುಗಳು ತಡವಾಗಿ ಓಡುತ್ತಿದ್ದುವು. ಮದರಾಸಿಗೆ ಹೋಗಬೇಕಿದ್ದ ಟ್ರೈವೀಕ್ಲಿ ಮೂರು ಘಂಟೆ ತಡವಾಗಿ ನಾಂಪಲ್ಲಿಯಿಂದ ಹೊರಡುತ್ತದೆಂದು ಪ್ರಕಟಿಸಲಾಯಿತು. ಆ ನೋವಿನಲ್ಲೂ ಶ್ರಾವಣನಿಗೆ ನಗು ಬಂತು. ಶ್ರಾವಣ ಗಡಿಯಾರ ನೋಡಿಕೊಂಡ. ಅಪಘಾತವಾದಾಗ ನಿಂತುಹೋಗಿದ್ದ ಗಡಿಯಾರ ಇನ್ನೂ ಆರು ಘಂಟೆ ತೋರಿಸುತ್ತಿತ್ತು.

ಮೇ 1986









Saturday, January 9, 2010

ಉಳ್ಳವರು ಶಿವಾಲಯವ ಮಾಡುವರು

ಬೆಳಿಗ್ಗೆ ಎಂಟು ಘಂಟೆಗೆ ಸರಕಾರಿ ಪ್ರಾಥಮಿಕ ಶಾಲೆಯ ಬಾಗಿಲು ತೆರೆಯಲು ಬಂದ ರೆಡ್ಡಪ್ಪ ಮಾಸ್ತರಿಗೆ ಆಶ್ಚರ್ಯವಾಗಲಿತ್ತು. ಅಷ್ಟು ಹೊತ್ತಿನಲ್ಲಿ, ಅದೂ ಈ ಛಳಿಗಾಲದಲ್ಲಿ ಆಗಂತುಕನೊಬ್ಬ ಬಂದು ನಮಸ್ಕಾರ ಮಾಡಿದ್ದು - ಅವರ ಜೀವನದಲ್ಲಿ ಮೊದಲಬಾರಿ ಇದ್ದಿರಬೇಕು. ಹೌದು... ಇಲ್ಲವಾದರೆ ಈ ಹಳ್ಳಿಯವರನ್ನು ಬಿಟ್ಟು ಯಾರು ತಾನೇ ಪ್ರಾಥಮಿಕ ಶಾಲೆಯ ಮಾಸ್ತರಿಗೆ ನಮಸ್ಕಾರ ಮಾಡುತ್ತಾರೆ?

ರೆಡ್ಡಪ್ಪ ಮಾಸ್ತರು - ಎದುರಿಗೆ ನಿಂತಿದ್ದ ವ್ಯಕ್ತಿಯನ್ನು ತಲೆಯಿಂದ ಕಾಲಿನವರೆಗೆ ದಿಟ್ಟಿಸಿದರು. ಮೊಣಕಾಲಿಗೂ ಮೇಲೆ ಹೋಗಿದ್ದ - ಹಳದಿ ಕಂದು ಬಣ್ಣಕ್ಕೆ ತಿರುಗುತ್ತಿದ್ದ ಹರಕಲು ಪಂಚೆ. ಒಡೆದ ಪಾದ, ಕೊಳಕು ಉಗುರುಗಳು, ಕಾಲೀಡೀ ದುರ್ಮಾಂಸದ ಸಣ್ಣ ಸಣ್ಣ ಗಡ್ಡೆಗಳು - ಎದೆಯ ಮೇಲೆ ಖಾಕಿ ಅಂಗಿ, ಭುಜದ ಮೇಲೆ ಆಗಷ್ಟೇ ಮೈಕೈ ಮುಖ ಒರೆಸಿ ಹಸಿಯಾಗಿದ್ದ ನಸುಗೆಂಪು ವಸ್ತ್ರ... ನೀಟಾಗಿ ದಾಡಿ, ಮೀಸೆ ಹೆರೆದುಕೊಂಡಿದ್ದ ಕಪ್ಪನೆ ಮುಖ - ಮತ್ತು ಹಿಂದಕ್ಕೆ ಬಾಚಿದ್ದ ಉದ್ದನೆಯ ಕೂದಲು. ನೋಡಿದರೆ, ರಾತ್ರೆಯೆಲ್ಲಾ ನಾಟಕ ಮಾಡಿ, ಆಗಷ್ಟೇ ಮೇಕಪ್ ತೆಗೆದು ಬಂದಂತಿತ್ತು. ಏನೋ... ಏಕೋ - ಆ ಮುಖದಲ್ಲಿ ರೆಡ್ಡಪ್ಪ ಮಾಸ್ತರಿಗೆ ಒಂದು ಥರದ ದೈವತ್ವ ಕಂಡಿತು. ನೀಟಾಗಿ ವೀಭೂತಿ - ಅಥವಾ ಕುಂಕುಮ ಇಟ್ಟವರೆಂದರೆ - ಮಾಸ್ತರಿಗೆ ಯಾವಾಗಲೂ ಏನೋ ಅರಿಯದ ಭಕ್ತಿ, ಗೌರವ.

ಬಂದ ವ್ಯಕ್ತಿ ರೆಡ್ಡಪ್ಪ ಮಾಸ್ತರಿಗೆ ನಮಸ್ಕಾರ ಮಾಡಿ ಕಣ್ಣಂಚಿನಲ್ಲಿ ನೀರು ತರಿಸಿಕೊಂಡ. ಶಾಲೆ ಪ್ರಾರಂಭವಾಗಲು ಇನ್ನೂ ಹದಿನೈದಿಪ್ಪತ್ತು ನಿಮಿಷ ಸಮಯವಿತ್ತು. ಏಕ ಶಿಕ್ಷಕ ಶಾಲೆಯಾದ ಆ ಸರಕಾರಿ ಝೋಪಡಿಯಲ್ಲಿ, ರೆಡ್ಡಪ್ಪ ಮಾಸ್ತರು ಪ್ರಿನ್ಸಿಪಾಲನಿಂದ ಹಿಡಿದು ಚಪ್ರಾಸಿಯವರೆಗೂ ಎಲ್ಲ ಕೆಲಸಗಳನ್ನೂ ತಾವೇ ಮಾಡಬೇಕು. ರೆಡ್ಡಪ್ಪ ಮಾಸ್ತರಿಗೆ ಮುಖ್ಯವಾಗಿ ಅಲ್ಲಿನ ಶುಭ್ರತೆಯ ಬಗ್ಗೆ ಕಾಳಜಿಯಿತ್ತಾದ್ದರಿಂದ - ಒಂದರ್ಧ ಘಂಟೆ ಮೊದಲೇ ಬಂದು - ಒಂದಿಷ್ಟು ಹುಡುಗರನ್ನು ಕಲೆ ಹಾಕಿ, ಶಾಲೆಯ ಸುತ್ತಲ ಜಾಗವನ್ನು ಸ್ವಛ್ಛಮಾಡಿಸಿ, ನೀರು ಚಿಮುಕಿಸಿ, ರಂಗೋಲೆ ಇಡಿಸುತ್ತಿದ್ದರು. ಸಮಯಕ್ಕೆ ತಕ್ಕಂತೆ ಪ್ರಾರ್ಥನೆ ಮಾಡಿಸಿ ಶಾಲೆಯನ್ನು ಆರಂಭಿಸುತ್ತಿದ್ದರು.

ಶಾಲೆಯ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿದರೆ ಸಾಕು - ರೆಡ್ಡಪ್ಪ ಮಾಸ್ತರ ಕಾಳಜಿ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಶಾಲೆಯ ಮುಂದಿನ ಧ್ವಜಸ್ಥಂಬ ಹೊಸ ಬಣ್ಣ ಹೊತ್ತು ಲಕಲಕಿಸುತ್ತಿತ್ತು. ಗೋಡೆಯ ಮೇಲೆ ಹಳ್ಳಿಯ ಚಿತ್ರಕಾರನಿಂದ ಗಾಂಧಿ, ನೆಹರೂ, ಪಟೇಲ್, ಬೋಸರ ಚಿತ್ರಗಳನ್ನು ಬರೆಸಿ - ಸಾಲಾಗಿ ಒಂದರ ಪಕ್ಕದಲ್ಲೊಂದು ಎಂಬಂತೆ - ಸೂಕ್ತಿಗಳನ್ನು ಪೇಂಟ್ ಮಾಡಿಸಿದ್ದರು. ಶಾಲೆಯ ಬಗ್ಗೆ ಒಂದು ರೀತಿಯ ಖಾತ್ರಿಯಿದ್ದದ್ದರಿಂದಲೇ - ಹಳ್ಳಿಗೆ ಯಾರಾದರೂ - ಹೊರಗಿನ ಅಧಿಕಾರಿಗಳು ಬಂದರೆ - ಅವರಿಗೆ ತಂಗಲು ಶಾಲೆಯ ಆವರಣವನ್ನೇ ಬಿಟ್ಟುಕೊಡಬೇಕೆಂದು ಪಂಚಾಯ್ತಿ, ಸಹಕಾರ ಸಂಘಗಳವರು ಆದೇಶ ನೀಡುತ್ತಿದ್ದರು. ಪಕ್ಕದಲ್ಲೇ ಇದ್ದ ಸಾರ್ವಜನಿಕ ಹ್ಯಾಂಡ್ ಪಂಪನ್ನೂ ಶುಭ್ರವಾಗಿ ಇರಿಸುವುದರಲ್ಲಿ ರೆಡ್ಡಪ್ಪ ಮಾಸ್ತರ ಪಾತ್ರ ಹಿರಿದಾಗಿತ್ತು.

ಹೀಗೆ ಆವರಣವನ್ನು ಶುಭ್ರವಾಗಿರಿಸಲೆಂದೇ ಅರ್ಧಘಂಟೆ ಮೊದಲೇ ಶಾಲೆಗೆ ಹಾಜರಾಗುತ್ತಿದ್ದ ರೆಡ್ಡಪ್ಪ ಮಾಸ್ತರಿಗೆ, ತಾವು ಬರುವ ವೇಳೆಗಾಗಲೇ ಶಾಲೆಯ ಸ್ನಾನ ಸಂಧ್ಯಾವಂದನಾದಿಗಳು ಆಗಿಬಿಟ್ಟಿರುವುದು ಕಂಡು ಆಶ್ಚರ್ಯವಾಯಿತು. ಅವರು ಏನೂ ತಿಳಿಯದವರಾಗಿ - ಹೊಸ ಅತಿಥಿಯತ್ತ ನೋಡಿದರು:

"ನಾನು ಮೋಹನ ಪ್ರಭುದಾಸ ಅಂತ - ಬಹಳ ದೂರದ ಹಳ್ಳಿಯಿಂದ ಬಂದವನು. ದೂರದ ಹಳ್ಳಿಯೆಂದಾಕ್ಷಣಕ್ಕೆ - ನಾನು ಆ ಹಳ್ಳಿಯವನೆಂದು ನೀವು ತಪ್ಪು ತಿಳಿಯಬಾರದು. ಏಕೆಂದರೆ - ಸಾಧುಸಂತರಿಗೆ, ಭಕ್ತರಿಗೆ, ದೇವರಿರುವ ಸ್ಥಳವೇ ಮನೆ. ಈಗಿತ್ತಲಾಗಿ, ಕೆಲದಿನಗಳ ಹಿಂದೆ ದೇವಸ್ಥಾನವೊಂದರ ಜೀರ್ಣೋದ್ಧಾರ ಮಾಡಬೇಕೆಂದು ನನ್ನ ಕನಸಿನಲ್ಲಿ ಪ್ರಭುವಿನ ಆಜ್ಞೆಯಾಗಿದೆ. ಹೀಗಾಗಿ ಪ್ರಭುವು ತೋರಿದ ದಾರಿಯಲ್ಲಿ ಹೊರಟುಬಂದು - ನಿನ್ನೆ ಸಂಜೆ ಈ ಊರು ತಲುಪಿದೆ. ಬಂದ ಕೂಡಲೇ ಇತ್ತ - ಶಾಲೆಯತ್ತ ಬರಲು ಪ್ರಭುವಿನ ಆದೇಶವಾಯಿತು. ಇಲ್ಲಿ ಬಂದು ನೋಡಿದರೆ - ಜೀರ್ಣವಾಗಿರುವ ಶಿವಾಲಯವು ಕಂಡಿತು. ಹೀಗಾಗಿ ನಾನು - ಇದೇ ಪ್ರಶಸ್ಥ ಸ್ಥಳವೆಂದು ರಾತ್ರೆ ಇಲ್ಲೇ ಜಗಲಿಯ ಮೇಲೆ ತಂಗಿದೆ. ಮುಂಜಾನೆ ಎದ್ದು - ಹ್ಯಾಂಡ್ ಪಂಪಿನಲ್ಲಿ ಮಿಂದು, ಸ್ಥಳ ಶುಭ್ರಮಾಡಿದೆ. ನಿಮ್ಮ ಅನುಮತಿ ಸಿಗುವುದಾದರೆ ಇಲ್ಲಿಯೇ ತಂಗಿ ಪ್ರಭುವಿನ ಕಾರ್ಯವನ್ನು ಪೂರ್ಣಗೊಳಿಸುವ ಇರಾದೆಯಿದೆ."

ಮೋಹನ ಪ್ರಭುದಾಸ - ಮಾತನಾಡುವ ಭಾಷೆಯಲ್ಲೂ, ರೀತಿಯಲ್ಲೂ ಅಭಿನಯ ತುಂಬಿಸುತ್ತಿದ್ದನಾದ್ದರಿಂದ - ಅವನೆದುರಿಗೆ ನಿಂತು ಈ ಎಲ್ಲವನ್ನೂ ಕೇಳಿದ ರೆಡ್ಡಪ್ಪ ಮಾಸ್ತರರಿಗೆ ಕೂಚಿಪುಡಿ ನೃತ್ಯ ನೋಡಿದಂತಾಯಿತು. ದೇಹದ ಅಂಗಾಂಗಗಳನ್ನೆಲ್ಲ ಅಲ್ಲಾಡಿಸುತ್ತಾ ತಮ್ಮೆದುರು ಪ್ರಭುದಾಸ ಇಟ್ಟ ಈ ವಿಚಿತ್ರ ಕೋರಿಕೆಗೆ ಪ್ರತಿಕ್ರಿಯಿಸುವುದು ಹೇಗೆಂದು ಮಾಸ್ತರರಿಗೆ ತಿಳಿಯಲಿಲ್ಲ. ಕಡೆಗೂ ಏನೋ ಮನಸ್ಸಿಗೆ ಬಂದಂತಾಗಿ ರೆಡ್ಡಪ್ಪ ಮಾಸ್ತರು ಹೇಳಿದರು:

"ಇದು ಸ್ಕೂಲು. ಸರಕಾರಕ್ಕೆ ಸೇರಿದ್ದು. ನಾನೇನೂ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಕ್ಲಾಸುಗಳು ಶುರುವಾಗೋ ಹೊತ್ತು. ಮಧ್ಯಾಹ್ನ - ಸ್ಕೂಲು ಮುಚ್ಚಿದ ಮೇಲೆ ಮಾತಾಡೋಣ. ಜತೆಗೆ ಈ ವಿಷಯಕ್ಕೆ ಸರಪಂಚರ ಅಭಿಪ್ರಾಯ ಕೇಳೋದೂ ಒಳ್ಳೆಯದು."

"ಇದು ದೇವರ ಕಾರ್ಯ. ಇದಕ್ಕಾಗಿ ನಾನು ಯಾರನ್ನು ಕೇಳಲೂ ಹಿಂಜರಿಯುವವನಲ್ಲ. ಹೆದರುವವನೂ ಅಲ್ಲ. ಹಾಗೆಂದು ನಮ್ಮ ಕೆಲಸಕ್ಕೆ ಅಡ್ಡಿಯಾಗಬಹುದಾದ ಯಾರನ್ನೂ ನಾನು ಲೆಕ್ಕಕ್ಕೆ ತೆಗೆದುಕೊಳ್ಳುವವನಲ್ಲ. ನಿಮ್ಮ ಸರಪಂಚರೂ ಅಷ್ಟೇ. ಹೀಗಾಗಿ, ನೀವು ಹೇಳಿದಂತೆ ಮಧ್ಯಾಹ್ನದವರೆಗೂ - ಮಧ್ಯಾಹ್ನವೇನು - ಸಂಜೆಯವರೆಗೂ ನಾನು ಕಾಯಲು ಸಿದ್ಧ." ಪ್ರಭುದಾಸ ತನ್ನ ಮಾತುಗಳನ್ನು ಹೇಳು ಅಲ್ಲಿಂದ ಮುಂದಕ್ಕೆ ಹೋದ.

ತಕ್ಷಣಕ್ಕೆ ರೆಡ್ಡಪ್ಪ ಮಾಸ್ತರಿಗೆ ಏನೂ ತೋಚಲಿಲ್ಲ. ಏನೂ ತಿಳಿಯದವರಾಗಿ ಸುತ್ತಲಿನ ಗೋಡೆ ನೋಡಿದರು - "ಮನುಷ್ಯನ ಉದ್ದೇಶ - ಆಲೋಚನೆಗಳಿಗೆ ತಕ್ಕಂತೆ ಫಲ ಸಿಗುವುದು." ರಾಮಕೃಷ್ಣ ಪರಮಹಂಸರ ಸೂಕ್ತಿ ಕಾಣಿಸಿತು. ಮಾಸ್ತರು ತಮ್ಮಲ್ಲೇ ತಲೆ ಆಡಿಸಿಕೊಂಡರು. ಏನೂ ತೋಚದಿದ್ದಾಗ ರೆಡ್ಡಪ್ಪ ಮಾಸ್ತರು ಮಾರ್ಗದರ್ಶನಕ್ಕಾಗಿ ಗೋಡೆಯ ಮೇಲಿನ ಸೂಕ್ತಿಗಳ ಮೊರೆ ಹೋಗುವರು. ಸಮಯಕ್ಕೆ ಸರಿಯಾಗಿ, ಅವರೇ ಬರೆಸಿದ ಯಾವುದಾದರೂ ಸೂಕ್ತಿ ಕಣ್ಣಿಗೆ ಬೀಳುತ್ತಿತ್ತು.

ಅಂದು ಪ್ರಾರ್ಥನೆಯ ನಂತರ ಕ್ಲಾಸುಗಳನ್ನು ಪ್ರಾರಂಭಿಸಿದರೂ ಯಾಕೋ ಗಮನ ಪ್ರಭುದಾಸನತ್ತೇ ಇತ್ತಾದ್ದರಿಂದ - ಏನು ಮಾಡಲೂ ತೋರದೇ ಮಾಸ್ತರು ಮಕ್ಕಳಿಗೆ ರಜಾ ಘೋಷಿಸಿಬಿಟ್ಟರು. ಎಷ್ಟೇ ಪ್ರಯತ್ನಪಟ್ಟು ಬೇರೆ ಯೋಚನೆ ಮಾಡುಲು ಪ್ರಯತ್ನಪಟ್ಟರೂ ಪ್ರಭುದಾಸ, ಮತ್ತು ಜೀರ್ಣ ಶಿವಾಲಯ ರೆಡ್ಡಪ್ಪ ಮಾಸ್ತರ ಮನಸ್ಸನ್ನು ಕ್ರಮಕ್ರಮೇಣ ಆಕ್ರಮಿಸಿಕೊಳ್ಳತೊಡಗಿತ್ತು.

ರೆಡ್ಡಪ್ಪ ಮಾಸ್ತರು ಸರಪಂಚರನ್ನು ಕಾಣಲು ಹೊರಡುವುದಕ್ಕೆ ಮೊದಲು ಮತ್ತೊಮ್ಮೆ ಪ್ರಭುದಾಸನನ್ನು ಕಂಡರು:

"ಮನುಷ್ಯ ಜನ್ಮ ಬರುವುದು ಒಂದ ಲಕ್ಷ ಎಂಭತ್ತನಾಲ್ಕುಸಾವಿರ ಜನ್ಮಗಳಲ್ಲಿ ಒಂದು ಬಾರಿ, ಹಾಗೂ ಮನುಷ್ಯನಿಗೆ ಒಳ್ಳೆಯ ಕ್ರಿಯಾಕರ್ಮಗಳನ್ನು ಮಾಡುವ ಅವಕಾಶ ಸಿಗುವುದು ಈ ಒಂದು ಜನ್ಮದಲ್ಲಿ ಮಾತ್ರ. ಓದಿ-ಬರೆದು ಮಾಡಿರುವ, ಪಾಠ ಕಲಿಸುವ ಶಾಲಾ ಮಾಸ್ತರಿಗೆ ನಾನು ಇದನ್ನು ಹೇಳುವ ಅವಶ್ಯಕತೆಯಿಲ್ಲ. ಈಗ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಪ್ರಭುವಿನಿಂದ ಅಪ್ಪಣೆ ಬಂದಿರುವುದು. ಹೀಗಾಗಿ ನಾನು ಇಲ್ಲಿಗೆ ಬಂದಿರುವೆ. ಹಾಗೂ ಜೀರ್ಣೋದ್ಧಾರದ ಕೆಲಸ ಮುಗಿಯುವವರೆಗೂ ಇಲ್ಲಿಯೇ ಇರುವವನು ಎಂದು ಈಗಲೇ ಹೇಳಿಬಿಡುವೆ. ನಿಮ್ಮ ಹಳ್ಳಿಯ ಚಿಲ್ಲರೆ ಜನರು ನನ್ನ ಪೂರ್ವೋತ್ತರಗಳನ್ನು ಕೇಳುವರೆಂದು ನಾನು ಅರಿತಿರುವೆ. ಹೀಗಾಗಿ ನನ್ನ ಬಗ್ಗೆ ನನಗೆ ತಿಳಿದಿರುವುದನ್ನು ಮೊದಲೇ ನಿಮಗೆ ಹೇಳಲು ಇಷ್ಟಪಡುವವನು ನಾನು. ನನ್ನ ಪೂರ್ತಿ ಹೆಸರು: ಮೋಹನ ಪ್ರಭುದಾಸ ಭಜಂತ್ರಿ ಎಂದು. ನಾನು ಹಜಾಮರ ಜಾತಿಗೆ ಸೇರಿದವನು. ಆದರೆ ಬಹಳ ವರ್ಷಗಳ ಹಿಂದೆಯೇ ನನ್ನ ಅಪ್ಪ ಹಜಾಮತಿ ಬಿಟ್ಟು ಅಡುಗೆ ಕೆಲಸಕ್ಕೆ ಇಳಿದಿದ್ದ. ನಾನೂ ಅದೇ ಕೆಲಸ ಮಾಡುತ್ತಾ, ಊರೂರು ಅಲೆಯುತ್ತಾ, ಚಹಾದಂಗಡಿ ನಡೆಸುತ್ತಾ ಜೀವನ ಮಾಡಿದವನು. ಅದೇ ಸಮಯಕ್ಕೆ ದೇವರ ಬಗ್ಗೆ ಭಕ್ತಿ ಶ್ರದ್ಧೆ ಉಳ್ಳವನಾಗಿ, ಬ್ರಾಹ್ಮಣರ ಸಂಗದಲ್ಲಿದ್ದು ಒಂದಿಷ್ಟು ಶ್ಲೋಕ, ಮಂತ್ರ ಕಲಿತವನು. ಈಗ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆಂದು ಎರಡು ವರುಷ ಸಮಯ ತೆಗೆದಿಟ್ಟಿರುವೆ. ಎರಡು ವರುಷಗಳ ನಂತರ ನೀವು ಇರು ಎಂದು ಕೇಳಿಕೊಂಡರೂ ಇಲ್ಲಿ ಉಳಿಯುವವನಲ್ಲ. ಆ ನಂತರ ಪ್ರಭುವು ಆದೇಶ ಕೊಟ್ಟ ದಿಕ್ಕಿನಲ್ಲಿ ಹೊರಟುಬಿಡುವೆ. ಈಗ ನೀವು ಸರಪಂಚರನ್ನು ಕೇಳುತ್ತೀರೋ, ಸರಕಾರವನ್ನು ಕೇಳುತ್ತೀರೋ ನನಗೆ ತಿಳಿಯದು. ಇಲ್ಲಿ ಉಳಿಯಲು ಅಪ್ಪಣೆ ಕೊಟ್ಚಿರೋ ಸರಿ. ಇಲ್ಲವಾದರೆ ಇಡೀ ಊರಿಗೇ ಶಾಪ ಹಾಕಿ ಹೊರಟುಬಿಡುವೆ. ಅಷ್ಟೇ."

ಈ ಅಸ್ಖಲಿತ ಭಾಷಣ ಕೇಳಿ ಏನು ಮಾಡಬೇಕೋ - ರೆಡ್ಡಪ್ಪ ಮಾಸ್ತರಿಗೆ ತೋಚದಾಯಿತು. ಹಿಂದೆ ನಿರ್ಧಾರ ಮಾಡಿದಂತೆ - ಊರ ಹಿರಿಯರನ್ನೊಮ್ಮೆ ಕೇಳುವುದು ಒಳ್ಳೆಯದೆನ್ನಿಸಿತು. ಸರಪಂಚರ ಬಳಿ ಹೋಗುವುದಕ್ಕೆ ಮುಂಚೆ ಗೋಡೆಯತ್ತ ಮಾಸ್ತರು ನೋಡಿದರು:

"ನೆನಪಿಡು, ಅವಕಾಶಗಳು ಎಂದೆಂದೂ ನಿನ್ನ ಬಾಗಿಲನ್ನು ಎರಡೆರಡು ಬಾರಿ ತಟ್ಟುವುದಿಲ್ಲ." ಎಂಬ ಸೂಕ್ತಿ ಕಾಣಿಸಿತು. ಸರಪಂಚರ ಮನೆಯತ್ತ ನಡೆಯುತ್ತಿದ್ದಂತೆ ಮಿಕ್ಕೆಲ್ಲ ತರ್ಕವೂ ಅದ್ಭುತವಾಗಿ ಆಲೋಚನಾಲಹರಿಗೆ ಸೇರಿಕೊಂಡಿತು.

ಬಹಳ ದಿನಗಳಿಂದಲೂ ಅನಾಥವಾಗಿ ಶಾಲಾ ಆವರಣದಲ್ಲಿದ್ದ ಆ ಶಿವಲಿಂಗಕ್ಕೊಂದು ನೆರಳಿನ ಅವಶ್ಯಕತೆಯಿತ್ತು. ಹಾಗೂ ಈ ಮನುಷ್ಯ ಹೇಳುತ್ತಿದ್ದದ್ದು ಎಷ್ಟಾದರೂ ಒಳ್ಳೆಯ ಕಾರ್ಯದ ಬಗ್ಗೆ - ದೇವರ ಕೆಲಸದ ಬಗ್ಗೆ - ಮೂರು ವರ್ಷಗಳಿಂದ ಬರಪೀಡಿತವಾಗಿರುವ ಈ ಹಳ್ಳಿಗೆ ಇದೊಂದು ಮುಕ್ತಿಮಾರ್ಗವಿದ್ದರೂ ಇರಬಹುದು. ಊರಿಗೆ ಒಳ್ಳೆಯದಾಗುವ ಕೇಲಸ ಮಾಡುತ್ತೇನೆಂದರೆ ಯಾರು ತಾನೇ ಬೇಡವೆನ್ನುವರು? ಮೇಲಾಗಿ, ಸಂಜೆಯ ವೇಳೆಗೆ ಖಾಲಿಯಾಗಿಯೇ ಉಳಿಯುವ ಶಾಲೆಯ ಆವರಣದಲ್ಲೊಬ್ಬ ವ್ಯಕ್ತಿ ಇರುವುದೂ ಒಳ್ಳೆಯದೇ ಎಂದೆಲ್ಲಾ ಯೋಚಿಸುತ್ತಾ ರೆಡ್ಡಪ್ಪ ಮಾಸ್ತರು ಸರಪಂಚರ ಮನೆಯತ್ತ ಹೆಜ್ಜೆ ಹಾಕಿದರು.

ರೆಡ್ಡಪ್ಪ ಮಾಸ್ತರು ಸರಪಂಚರಾದ ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಯ ಮನೆಗೆ ಬಂದಾಗ - ಸರಪಂಚರು - ಬರಲಿರುವ ಪಂಚಾಯತ್ ಚುನಾವಣೆಯ ಸ್ಟ್ರಾಟಜಿಯ ಬಗ್ಗೆ ಊರಿನ ಶ್ರೀಮಂತರಾದ ಶ್ರೀಪ್ರಕಾಶಚಂದ್ ಶ್ರೀಮಲ್ ಜೊತೆಗೆ ಗುಫ್ತಗೂ ನಡೆಸುತ್ತಿದ್ದರು. ಮೋಹನ ಪ್ರಭುದಾಸ ಭಜಂತ್ರಿಯ ಸಕಲ ಪೂರ್ವೋತ್ತರಗಳನ್ನೂ ಕೇಳಿದ ಸರಪಂಚರು - ಪ್ರಸನ್ನಚಿತ್ತರಾಗಿ "ಹೌದು - ಇದರಿಂದ ಒಂದು ಥರದ ಫಾಯಿದೆಯಿದೆ" ಎಂದು ಯೋಚಿಸಿದರು.

"ಮಾಸ್ತರೇ ಶಾಲೆಯ ಆವರಣದಲ್ಲಿ ಯಾರಿರಬೇಕು, ಇರಬಾರದು ಅಂತ ಹೇಳೋಕ್ಕೆ ನಾನು ಯಾರು? ಈ ಶಾಲೆಯನ್ನ ತುಂಬಾ ವರ್ಷಗಳಿಂದ ನೀವು ನಡೆಸಿಕೊಂಡು ಬರುತ್ತಿದ್ದೀರಿ. ಜನರ ಚುನಾಯಿತ ಪ್ರತಿನಿಧಿಯಾಗಿ, ನಿಮಗೆ ಬೇಕಾದ ಹೆಲ್ಪು ಮಾಡೋದಷ್ಟೇ ನನ್ನ ಕೆಲಸ. ಈಗ ಈ ವಿಷಯದಲ್ಲಿ ನಾನು ಡಿಸೈಡ್ ಮಾಡುವುದು ಏನೂ ಇಲ್ಲ. ನೀವು ಕಲಿತವರು. ತಿಳಿದವರು. ಮಕ್ಕಳಿಗೆ ಬುದ್ಧಿ ಹೇಳುವ ಹಿರಿಯರು. ನಿಮಗೆ ಸರಿ ಅನಿಸಿದ್ದನ್ನು ಮಾಡಿ."

"ನಿಜ ದೊರೆ. ಈ ಪ್ರಭುದಾಸ ಅಡುಗೆ ಇತ್ಯದಿ ಮಾಡುವುದನ್ನು ಕಲಿತಿದ್ದಾನೆಂದು ಹೇಳಿದ. ನಿಮಗೆ ಗೊತ್ತಿರೋ ಹಾಗೆ ಊರಲ್ಲಿ ಯಾರೆ ಅಧಿಕಾರಿಗಳು ಉಳಿದುಕೊಳ್ಳಬೇಕಾದರೂ - ಸ್ಕೂಲಿಗೇ ಬರುತ್ತಾರೆ. ಹೀಗಾಗಿ - ಇಂಥ ಏರ್ಪಾಟಿನಿಂದ ಉಪಯೋಗವೇ ಹೆಚ್ಚೂಂತ ಅನ್ನಿಸುತ್ತದೆ. ಪ್ರಭುದಾಸನಿಗೆ ಆಶ್ರಯ ಕೊಟ್ಟರೆ ಸ್ಕೂಲಿಗೂ ಒಂದು ದಿಕ್ಕೂಂತ ಆಗುತ್ತೆ. ಜತೆಗೆ ದೇವರ ಕೆಲಸಕ್ಕೆ ಅಡ್ಡಯಾಗೋದಕ್ಕೆ ನಾವ್ಯಾರು? ಏನಂತೀರಿ?"

"ಸರಿ ಮಾಸ್ತರೇ.... ಹಾಗಾದರೆ ಇರಲಿ ಬಿಡಿ. ನೀವು ಡಿಸೈಡ್ ಮಾಡಿದಮೇಲೆ ಬೇರೆ ಮಾತು ಯಾಕೆ."

ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಯವರು ಇಷ್ಟರ ಮಟ್ಟಿಗೆ ತಲೆಯಾಡಿಸಿದ್ದೇ ಸಾಕೆನ್ನುವಂತೆ ರೆಡ್ಡಪ್ಪ ಮಾಸ್ತರು ಅಲ್ಲಿಂದ ಅದೃಶ್ಯರಾಗಿಬಿಟ್ಟರು.

ರೆಡ್ಡಪ್ಪ ಮಾಸ್ತರು ಅತ್ತ ಹೋದದ್ದೇ - ಆ ವರೆಗೆ ಎಲ್ಲವನ್ನೂ ನೋಡಿ ಮೌನವಾಗಿದ್ದ ಶ್ರೀಪ್ರಕಾಶ್ ಚಂದ್ ಶ್ರೀಮಲ್ ಅಪ್ಪಲರೆಡ್ಡಿಯನ್ನು ನೋಡಿ ಅನುಮಾನದಿಂದ ಗೊಣಗಿದರು:

"ಸರಪಂಚರು ಬಹಳ ಧಾರಾಳಿ... ಆ ಮನುಷ್ಯನ ಪೂರ್ವೋತ್ತರ ತಿಳಿದುಕೊಳ್ಳದೆಯೇ ಊರಲ್ಲಿ ಇರಲು ಪರ್ಮಿಟ್ ಮಾಡಿಬಿಟ್ಟಿರಲ್ಲಾ... ಆ ಮುಖವನ್ನು ಒಂದು ಸಾರೆ ನೋಡಿ ಆಮೇಲಾದರೂ ಡಿಸೈಡ್ ಮಾಡಬಹುದಿತ್ತು ಅಂತ ಈ ಬಡವನ ಅಭಿಪ್ರಾಯ. ಯಾಕೆಂದರೆ, ಈ ಮಧ್ಯ ಸುತ್ತಮುತ್ತ ವಿಪರೀತವಾಗಿ ನಕ್ಸಲ್ ಗಳ ಹಾವಳಿಯಿರೋದು ನಿಮಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ - ಈತ ಬಂದು ಇನ್ನ ಶಾಲಾಮಕ್ಕಳ ತಲೆಯನ್ನೂ, ಊರಿಗೆ ಹಿರಿಯರಾದ ನಮ್ಮಗಳ ನಿದ್ದೆಯನ್ನೂ ಹಾಳುಮಾಡಿದರೆ ಏನು ಗತಿ?"

ಈ ಮಾತುಗಳನ್ನು ಕೇಳಿ ಸರಪಂಚರು ತಲೆಯಾಡಿಸಿದರು:
"ಬಹುಶಃ ನೀವು ಹೇಳೋದು ನಿಜ ಇರಬಹುದು. ಆದರೆ ನಕ್ಸಲ್ ಗಳೂ ದೇವಸ್ಥಾನದ ಅಜೆಂಡಾ ಹಿಡಿದು ಹಳ್ಳಿಗಳಿಗೆ ಪ್ರವೇಶ ಮಾಡಿದರೆ - ಆ ದೇಶಕ್ಕೆ 'ಹೋಪ್' ಇಲ್ಲದ ಹಾಗಾಗುತ್ತದೆ. ಜತೆಗೆ ದಿವಂಗತ ಮಾವೋ ಈ ಬಗ್ಗೆ ಏನೆಂದಾನು? ನಕ್ಸಲ್ ಗಳು ನಾಸ್ತಿಕರಲ್ಲದಿದ್ದರೂ - ನಾಸ್ತಿಕವಾದಿಗಳಲ್ಲವೇ? ಒಂದಿಷ್ಟು ದಿನ ಪ್ರಭುದಾಸನನ್ನು ಗಮನಿಸಿ ನೋಡೋಣ. ಹೇಗೂ ಮುಖ ನೋಡಿ ಅವನು ನಕ್ಸಲ್ ವಾದಿಯೇ ಅಂತ ಡಿಸೈಡ್ ಮಾಡುವುದು ಸಾಧ್ಯವಿತ್ತಿಲ್ಲ ಅಲ್ಲವೇ?"

"ಕರೆಕ್ಟೇ... ನೀವು ಅಂದಹಾಗೆ ಆ ವ್ಯಕ್ತಿಯಮೇಲೆ ಒಂದಿಷ್ಟು ಕಣ್ಣಿಟ್ಟಿರೋದು ಒಳ್ಳೇದು. ಒಂದು ಮಾತ್ರ ಇದರಲ್ಲಿ ಫಾಯಿದೆಯ ವಿಷಯವಿದೆ: ಅವನು ತಂದಿರೋ ಈ ಶಿವಾಲಯದ ಅಜೆಂಡಾ ಕೈಗೆತ್ತಿಕೊಳ್ಳುವುದೇ ಆದರೆ - ನಿಮ್ಮ ಎಲೆಕ್ಷನ್ನಿಗೂ ಸಹಕಾರಿಯಾದೀತು. ಬರೆ ಪಂಚಾಯ್ತಿಯೇನು - ಈ ಖ್ಯಾತಿ ನಿಮ್ಮನ್ನು ಜೆಡ್.ಪಿ, ಅಸೆಂಬ್ಲಿಯವರೆಗೂ ಕರಕೊಂಡು ಹೋಗಬಹುದು... ಅಂತ ಈ ಬಡವನ ಅಭಿಪ್ರಾಯ."

ಶ್ರೀಪ್ರಕಾಶಚಂದ್ ಶ್ರೀಮಲ್ ಗೆ ಮೋಹನ ಪ್ರಭುದಾಸನ ಸುದ್ದಿ ಹೇಗೆ ಸ್ವೀಕರಿಸಬೇಕೋ ತಿಳಿಯದಾಯಿತು. ಈಗಿತ್ತಲಾಗಿ ಅನೇಕ ವಿಧಗಳಲ್ಲಿ ಶ್ರೀಮಲ್ ನ ಧಂಧೆ ಏಟು ತಿಂದಿತ್ತು. ಒಂದುಕಡೆ - ಅಪ್ಪಲರೆಡ್ಡಿಯ ಅದ್ಭುತ ನೇತೃತ್ವದಲ್ಲಿ ಊರಿನ ಸಹಕಾರ ಸಂಘ ಚೆನ್ನಾಗಿ ನಡೆಯುತ್ತಿದ್ದಾದ್ದರಿಂದ ಶ್ರೀಮಲ್ ಬಳಿ ಸಾಲ ಕೇಳಲು ಬರುವ ಜನ ಸಂಖ್ಯೆಯಲ್ಲಿ ಬಹಳವೇ ಕಡಿಮೆಯಾಗಿದ್ದರು. ಅದೂ ಸಾಲದೆಂಬಂತೆ ಶ್ರೀಮಲ್ ಗೆ ಧಾರಾಳವಾಗಿ ಸಾಲ ಕೊಡುವ ಧೈರ್ಯವೂ ಇರಲಿಲ್ಲ. ಅದಕ್ಕೆ ಕಾರಣ: ಈಗಿತ್ತಲಾಗಿ ಈ ಪ್ರಾಂತದಲ್ಲಿ ನಕ್ಸಲ್ ಗಳ ಹಾವಳಿ ವಿಪರೀತವಾಗಿತ್ತು. ಅವರುಗಳು ಊರ 'ಷಾವುಕಾರು'ವನ್ನು ತಮ್ಮ ಮೊದಲ ಗುರಿ ಮಾಡಿಕೊಂಡು - ಸಾಲ ಪತ್ರ ನಾಶ ಮಾಡುವುದು ಲೂಟಿ ಮಾಡುವುದು.. ಇತ್ಯಾದಿ ಮಾಡುತ್ತಿದ್ದರು. ಹೆಚ್ಚು ಸಾಲಕೊಟ್ಟು ಹೈ ಪ್ರೊಫೈಲ್ ಆದರೆ ಅವರ ಗಮನವನ್ನು ಸೆಳೆಯುವುದರಲ್ಲಿ ಅನುಮಾನವೇ ಇರಲಿಲ್ಲ. ಅದರ ಫಲವಾಗಿ ಕೊಟ್ಟ ಹಣ ಕಳೆದುಕೊಳ್ಳುವುದೇ ಅಲ್ಲದೇ ಜೀವಕ್ಕೂ ಅಪಾಯವಿತ್ತು! ಈ ಭಯದಿಂದಾಗಿಯೇ ಈಗಿತ್ತಲಾಗಿ ಶ್ರೀಮಲ್ ಎರಡು ಮೂರು ವರ್ಷಗಳಲ್ಲಿ ಇದ್ದ ಹೆಚ್ಚುವರಿ ಹಣವನ್ನೆಲ್ಲ ಷೇರು ಧಂಧೆಯಲ್ಲಿ ಹಾಕಿದ್ದ. ಆದರೆ ಅಲ್ಲೂ ಸ್ಕ್ಯಾಮ್ ಸಮಯದ ಲೆಕ್ಕಾಚಾರ ಸರಿಹೋಗದೇ - ವಿಪರೀತ ಹಣ ಕೈಕಚ್ಚಿತ್ತು. ಮತ್ತೇನಾದರೂ ಮಾಡೋಣವೆಂದರೆ ತನ್ನ ಹಣವನ್ನು ಕಬಳಿಸಿದ್ದ ದರಿದ್ರದ ಷೇರು ಬಜಾರು ಆ ನಂತರ ಸರಿಯಾಗಿ ಮೇಲೇಳಲೇ ಇಲ್ಲು.

ಪೈಪೈಗೂ ಲೆಕ್ಕ ಇಡುವ ಬಡ್ಡಿ ಲೆಕ್ಕ ಹಾಕುವ ಶ್ರೀಮಲ್ ಗೆ ಹೀಗೆ ಡಬಲ್ ದುಃಖ ಆಗುವುದು ಸಹಜವೇ ಇತ್ತು. ಒಂದು ಕಡೆ ಹೂಡಿದ ಹಣ ದುಡಿಯದೇ ನಷ್ಟವಾಗುತ್ತಿದೆ ಎಂಬ ದುಃಖವಾದರೆ - ಮತ್ತೊಂದು ಕಡೆಯಿಂದ ಇದೇ ಹಣವನ್ನು ಬೇರೆಲ್ಲಾದರೂ ಹಾಕಿದ್ದಿದ್ದರೆ ಬರಬಹುದಾಗಿದ್ದ ಊಹಾಪೋಹದ ಲಾಭದ ಲೆಕ್ಕಾಚಾರ ಹಾಕಿ ದುಃಖಿಯಾಗಿದ್ದ ಶ್ರೀಮಲ್. ಇಷ್ಟಾದರೂ ತನ್ನ ಧಂಧೆಯ ಕಚ್ಚಾಮಾಲೇ ಹಣವಾದ ಶ್ರೀಮಲ್ ಹಣದ ವ್ಯಾಪಾರ ಬಿಟ್ಟು ಬೇರೆಲ್ಲಿಗೆ ಹೋಗಲು ತಯಾರಿರಲಿಲ್ಲ.

ಪ್ರಧಾನ ಮಂತ್ರಿ ಕೆಮ್ಮಿದರೆ ಷೇರು ಬಜಾರು ಏರುಪೇರಾಗುವಂತೆ - ಹಣದ ಧಂಧೆ ಮಾಡುವ ಶ್ರೀಮಲ್ ಗೆ ಹೊರಗೆ ಏನೇ ಆದರೂ... ಅದರ ಪ್ರಭಾವ ತನ್ನ ಧಂಧೆಯ ಮೇಲೆ ಹೇಗಾದೀತು ಎಂದು ನೋಡುವ ತವಕ. ಈಗ ಬಹುಶಃ ತನ್ನ ಧಂಧೆ ಪಿಕಪ್ ಆಗುವುದಕ್ಕೆ ಒಳ್ಳೆಯ ಸಮಯವಿರಬಹುದು. ಪಂಚಾಯ್ತಿ ಚುನಾವಣೆ ಹತ್ತಿರದಲ್ಲೇ ಇರೋದರಿಂದ ಸಹಕಾರ ಸಂಘದ ಸಾಲ ವಾಪಸ್ ಮಾಡೀಂತ ಅಪ್ಪಲರೆಡ್ಡಿ ರೈತರನ್ನ ಬಲವಂತ ಮಾಡುವುದಿಲ್ಲ. ಎರಡು ವರುಷಗಳ ಹಿಂದಷ್ಟೇ ನಡೆದ ಸಾಲಮನ್ನಾ ಕಾರ್ಯಕ್ರಮದಿಂದಾಗಿ ರೈತರೂ ಆ ಬಗ್ಗೆ ಉತ್ಸಾಹ ತೋರಿಸುವುದಿಲ್ಲ. ಈ ಎಲ್ಲದರ ನಡುವೆ, ಹಳ್ಳಿಗೆ ಬಂದಿಳಿದಿರುವ ಮೋಹನ ಪ್ರಭುದಾಸನಿಂದ ತನ್ನ ಧಂಧೆಗೆ ಯಾವರೀತಿಯ ಪ್ರಭಾವ ಆಗಬಹುದು? ಅಕಸ್ಮಾತ್ ಅಪ್ಪಲರೆಡ್ಡಿ ದೇವಸ್ಥಾನದ ಅಜೆಂಡಾ ಹಿಡಿದರೆ, ಸಹಕಾರ ಸಂಘದ ಸಾಲದ ಬಗ್ಗೆ ಏನು ನಿಲುವು ತೆಗೆದುಕೊಳ್ಳಬಹುದು? ಹಾಗೂ ಹಳ್ಳಿಗೆ ಹೊಸದಾಗಿ ಬಂದಿರುವ ಈ ಹೊಸ ವ್ಯಕ್ತಿ ಎಷ್ಟು ಪವರ್ ಫುಲ್ ಆಗುವ ಸಾಧ್ಯತೆ ಇದೆ?

ಶ್ರೀಪ್ರಕಾಶ್ ಚಂದ್ ಶ್ರೀಮಲ್ ಈ ಎಲ್ಲ ವಿಷಯಗಳನ್ನು ಯೋಚಿಸುವುದರ ಬದಿಬದಿಗೇ ದೇವರ ಬಗೆಗೂ ಯೋಚಿಸಿದ: ಏನೇ ಇರಲಿ, ಈ ಪ್ರಭುದಾಸ ದೇವರ ಕೆಲಸಕ್ಕೆಂದು ಬಂದಿದ್ದಾನೆ. ದೇವರ ಕೆಲಸಕ್ಕ ಯಾರೂ ಅಡ್ಡಯಾಗಬಾರದು... ಸಾಧ್ಯವಾದರೆ ಒಂದಿಷ್ಟು ಸಹಾಯವನ್ನೂ ಮಾಡಬೇಕು.

ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಯೋನೋ ಪ್ರಭುದಾಸನನ್ನು ತನ್ನ ಹಳ್ಳಿಯೊಳಕ್ಕೆ ಸುಲಭವಾಗಿ ಸೇರಿಸಿಕೊಂಡುಬಿಟ್ಟ. ಸೇರಿಸಿಕೊಂಡಮೇಲೆ ಅಪ್ಪಲರೆಡ್ಡಿಗೆ ಎಲ್ಲ ರೀತಿಯ ಭಯಗಳೂ ಶುರುವಾಯಿತು. ಶ್ರೀಮಲ್ ಹೇಳಿದಂತೆ, ಒಮ್ಮೆ ಅವನ ಮುಖವನ್ನಾದರೂ ನೋಡಬೇಕಿತ್ತು ಅನ್ನಿಸಿತು. ಹೊರಗಿನಿಂದ ಹೀಗೆ ಏಕಾಏಕಿ ಬರುವವರು ಹಳ್ಳಿಯ ಬ್ಯಾಲೆನ್ಸನ್ನು ಹಾಳು ಮಾಡಿ, ಶಾಂತಿಗೆ ಭಂಗ ತರುವ ಸಾಧ್ಯತೆಯಿದೆ. ಅದರಲ್ಲೂ ಇದು ಎಲೆಕ್ಷನ್ ವರ್ಷ....

ಅಪ್ಪಲರೆಡ್ಡಿಗೆ ಎಲ್ಲಕ್ಕಿಂತ ಹೆಚ್ಚು ಭಯ ಹುಟ್ಟಿಸಿದ ಸಂಗತಿಯೆಂದರೆ ಕೋಮು ಸೌಹಾರ್ದದ್ದು. ಆರುನೂರು ಮನೆಗಳಿರುವ ಈ ಹಳ್ಳಿಯಲ್ಲಿ ಸುಮಾರು ಒಂದುನೂರು ಮನೆಗಳು ಮುಸಲ್ಮಾನರದ್ದಾಗಿತ್ತು. ಈಗ ಇದ್ದಕ್ಕಿದ್ದಂತೆ ಹೊರಗಿನವನೊಬ್ಬ ಬಂದು ಆಲಯವನ್ನು ಹಳ್ಳಿಯ ಮುಖ್ಯ ಅಜೆಂಡಾ ಮಾಡಿದರೆ - ಅವರುಗಳೆಲ್ಲ ತಲ್ಲಣಗೊಳ್ಳಬಹುದೇ? ಬಹಳವೇ ವರ್ಷದಿಂದ ಸಿದ್ಧಾಂತದ ರಾಜಕೀಯ ಮಾಡಿಕೊಂಡು ಬಂದ ಅಪ್ಪಲರೆಡ್ಡಿಗೆ ಈ ಆಲಯದ ರಾಜಕೀಯ ಹಿಡಿಸಲಿಲ್ಲ. ಇದರಿಂದಾಗಿ ತಾನು ಎಲ್ಲೂ ಸಲ್ಲದವನಾಗಿಬಿಡಬಹುದಾದ್ದು ಸುಲಭ! ಒಂದು ಕ್ಷಣದ ಮಟ್ಟಿಗೆ - ಗ್ರಾಮ ಪಂಚಾಯ್ತಿಯಾಚೆಗೆ ತಾನು ಸಫಲನಾಗದ್ದಕ್ಕೆ ಇಂಥ ಅವಕಾಶಗಳನ್ನು ಉಪಯೋಗಿಸಿಕೊಳ್ಳದಿದ್ದದ್ದೇ ಕಾರಣ ಅಂತ ಅನ್ನಿಸಿದರೂ - ಲೋಹಿಯಾ, ಜಾರ್ಜ್ ಎಂದು ಅವರ ಹಿಂದೆಯೇ ಒಡಾಡಿದ್ದ ರೆಡ್ಡಿ ಈಗ ಸಿದ್ಧಾಂತವೋ, ಸಫಲತೆಯೋ ಎಂದು ತುಲನೆ ಮಾಡುವ ಸ್ಥಿತಿಗೆ ಬಂದುಬಿಟ್ಟ. ಹೀಗಾಗಿ ಈ ಆಲಯದ ಅಜೆಂಡಾದ ಬಗ್ಗೆ ತನ್ನ ನಿಲುವೇನೆಂದು ನಿರ್ಧರಿಸಲಾಗದೇ ತಬ್ಬಿಬ್ಬಾದ.

ನಮ್ಮ ಊರು, ನಮ್ಮ ಜನ, ನಮ್ಮ ಜೀವನ, ನಮ್ಮ ಆಲಯ - ಇದರಲ್ಲಿ ಈ ಹೊರಗಿನ ಪ್ರಭುದಾಸನ ಮೂಗು ತೂರುವುದೇನು? ಎಂಬ ಪ್ರಶ್ನೆಯೂ ಅವನನ್ನು ಆವರಿಸಿತು. ಜತೆಜತೆಗೆ ಇದ್ದಕ್ಕಿದ್ದಹಾಗೆ ಹೊರಗಿನ ವ್ಯಕ್ತಿಯೊಬ್ಬ ಬೃಹದಾಕಾರವಾಗಿ ನಿಂತು ತನ್ನ ನಾಯಕತ್ವಕ್ಕೇ ಸವಾಲು ಹಾಕುತ್ತಿದ್ದಂತಿತ್ತು. ಸಹಜನಾಯಕನಾಗಿ ಇಷ್ಟು ವರ್ಷ ಮೆರೆದು - ಈಗ ಇದ್ದಕ್ಕಿದ್ದಂತೆ ಅದಕ್ಕಾಗಿ ಹೋರಾಡಬೇಕಾದ ಸ್ಥಿತಿ ಸಂತೋಷಜನಕವಾದದ್ದೇನೂ ಆಗಿರಲಿಲ್ಲ.

ಇಷ್ಟಾದರೂ ಈ ಮಂದಿರದ ಬಗ್ಗೆ ತಾನು ತೆಳೆಯಬೇಕಾದ ನಿಲುವು ಏನೆಂದು ನಿರ್ಧರಿಸಲಾಗದೇ ರೆಡ್ಡಿ ಕೈಚೆಲ್ಲಿದ. ಈಗ ಹೀಗೆ ಧುತ್ತೆಂದು ಎದ್ದುನಿಂತ ಧೃವತಾರೆ - ಮೋಹನ ಪ್ರಭುದಾಸನ ಪೂರ್ವೋತ್ತರಗಳನ್ನಾದರೂ ಅರಿತು ಅವನು ತ್ರಿವಿಕ್ರಮಾವತಾರ ತಾಳದಂತೆ ನೋಡಿಕೊಳ್ಳಬೇಕು - ಎಂದು ರೆಡ್ಡಿಗನ್ನಿಸಿದ ಕೂಡಲೇ ಮನೆಕೆಲಸದ ಪೆಂಟಯ್ಯನನ್ನು ಕರೆದ:

"ಸ್ಕೂಲಿನ ಹತ್ತಿರ ಪ್ರಭುದಾಸ ಅಂತ ಒಬ್ಬ ಹೊಸಬ ಬಂದಿದ್ದಾನೆ. ಅವನಿಗೆ ನನ್ನನ್ನ ಬಂದು ನೋಡಲು ಹೇಳು."

*
*
*
*

ಕೆಲವೇ ದಿನಗಳಲ್ಲಿ ಮೋಹನ ಪ್ರಭುದಾಸ ಭಜಂತ್ರಿ.. ಪ್ರಭುದಾಸನೆಂಬ ಹೆಸರು ಬಿಟ್ಟುಕೊಟ್ಟು ಹಳ್ಳಿಯ ಪ್ರಿಯ ಮೋಹನ ಕಾಕಾ ಆಗಿಬಿಟ್ಟ. ಕಾಕಾ ಪ್ರತಿನಿತ್ಯ ಮುಂಜಾನೆ ಅಷ್ಟು ಹೊತ್ತಿಗೇ ಎದ್ದು ಜೋರಾಗಿ ಮಂತ್ರಗೊಣಗುತ್ತಾ ಶಾಲೆಯ ಆವರಣದಲ್ಲಿದ್ದ ಎಲ್ಲ ತರಗೆಲೆಗಳನ್ನೂ ಕೈಯಾರೆ ಆಯ್ದು ನೆಲ ಗುಡಿಸುವನು. ನಂತರ ಪಕ್ಕದ ಹ್ಯಾಂಡ್ ಪಂಪನಲ್ಲಿ ಮಿಂದು ಜೀರ್ಣವಾದ ದೇವಾಲಯದ ಶಿವಲಿಂಗದೆದುರು ನಿಂತು ಪ್ರಾರ್ಥನೆ, ಪೂಜೆ ಮಾಡುವನು. ಹಾಗೂ ಬಂದು ಹೋದ ಎಲ್ಲ ಜನರೊಂದಿಗೂ ಪ್ರಭುವು ತನಗೆ ಕೊಟ್ಟಿರುವ ಆಲಯದ ಜೀರ್ಣೋದ್ಧಾರದ ಕೆಲಸದ ಬಗ್ಗೆ ಮಾತನಾಡುವನು. ಮಕ್ಕಳ ಆಟದ ಸಮಯದಲ್ಲಿ ಅವರನ್ನು ಕೂಡ್ರಿಸಿಕೊಂಡು ತನ್ನ ಪ್ರತಾಪದ ಬಗ್ಗೆ ಕಟ್ಟು ಕಥೆಗಳನ್ನು ಹೇಳುವನು. ಮಂತ್ರಮುಗ್ಧರಾದ ಕೆಲ ಮಕ್ಕಳನ್ನು ಸಣ್ಣ ಪುಟ್ಟ ಕೆಲಸಗಳಿಗೆ ಹಚ್ಚುವನು - ಹೂವು ಬಿಲ್ವಪತ್ರೆ ಆಯುವುದು, ಶಿವಲಿಂಗದ ಜಳಕಕ್ಕೆ ಹ್ಯಂಡ್ ಪಂಪಿನಿಂದ ನೀರು ತರುವುದು.. ಹೀಗೆಲ್ಲಾ ಆ ಬರಪೀಡಿತ ಪ್ರದೇಶದಲ್ಲಿ ಅಕಸ್ಮಾತ್ ಎಂದಾದರೂ ಮಳೆಬಂದರೆ ಖುಷಿಯಿಂದ ಕುಣಿದಾಡುವನು. ತರಗತಿಯ ಒಂದು ಮೂಲೆಗೆ ತನ್ನ ಅಗ್ಗಿಷ್ಟಿಕೆ ಇಟ್ಟುಕೊಂಡಿದ್ದು - ಶಾಲೆ ಪ್ರಾರಂಭವಾಗುವುದಕ್ಕೆ ಮೊದಲೇ ಅಡುಗೆ ಮಾಡಿಕೊಳ್ಳುವುದು - ಶಾಲೆ ಮುಗಿದ ನಂತರ ನಿದ್ರೆಮಾಡುವುದು ಇಂಥ ದಿನಚರಿಯನ್ನು ಕಾಕಾ ಪಾಲಿಸುವನು.

ಕಾಕಾ ಬಂದದ್ದೇ ಬಂದದ್ದು - ಜಗತ್ತಿನ ಒಂದು ಮೂಲೆಯಲ್ಲಿ ಮಲಗಿ ಕೂತಿದ್ದ ಹಳ್ಳಿಗೆ ಇದ್ದಕ್ಕಿದ್ದಂತೆ ಜೀವ ಬಂದಂತಾಯಿತು. ಸುತ್ತಲಿನ ನಾಲ್ಕಾರು ಹಳ್ಳಿಗಳಲ್ಲಿ ಕಾಕಾನ ಅವತಾರದ ಚರ್ಚೆಯಾಗಿ, ಅವರೆಲ್ಲಾ ಹಳ್ಳಿಯ ಜೀರ್ಣ ಆಲಯವನ್ನು ಕಂಡುಹೋಗಲು ಬರುತ್ತಿದ್ದರು. ಬಂದವರು - ಅಲ್ಲಿನ ಆಲಯದಷ್ಟೇ ಜೀರ್ಣವಾಗಿದ್ದ ಹುಂಡಿಗೆ ಚಿಲ್ಲರೆಕಾಸು ತೂರಿಸಿ ಹೋಗುತ್ತಿದ್ದರು. ಮಲಗಿ ನಿದ್ರಿಸುತ್ತದ್ದ ಶಾಲೆಯ ಆವರಣಕ್ಕೆ ಹೀಗೆ ಇದ್ದಕ್ಕಿದ್ದಂತೆ ಸಂಭ್ರಮದ ವಾತಾವರಣ ಬಂದುಬಿಟ್ಟಿತ್ತು.

ಕಾಕಾನನ್ನು ಮೊದಲ ಬಾರಿಗೆ ನೋಡಿದಾಗಲೇ ಅಪ್ಪಲರೆಡ್ಡಿಗೆ ಒಂದು ವಿಷಯ ಖಾತ್ರಿಯಾಯಿತು. ಈ ವ್ಯಕ್ತಿಯಿಂದ ತನ್ನ ನಾಯಕತ್ವಕ್ಕೆ ನೇರವಾದ ತೊಂದರೆ ಆಗುವುದು ಸಾಧ್ಯವಿರಲಿಲ್ಲ. ಕಾಕಾನಿಂದ ನಾಯಕತ್ವಕ್ಕೆ ಸವಾಲ್ ಬರದಿದ್ದರೂ, ಕಾಕಾ ತಂದ ಅಜೆಂಡಾದಿಂದ ತೊಂದರೆ ಉಂಟಾಗುವ ಸಾಧ್ಯತೆಯಿತ್ತು. ಹೀಗಾಗಿ, ಒಂದು ಥರದಲ್ಲಿ 'ಕಾಕಾ' ರಾಜಕೀಯವಾಗಿ ಮುಖ್ಯವಾಗದೆಯೇ, ಒಂದು ಮುಖ್ಯ ಸವಾಲಾಗಿ ಅವತರಿಸಿಬಿಟ್ಟ. ಸೈದ್ಧಾಂತಿಕವಾಗಿ ಅಪ್ಪಲರೆಡ್ಡಿಗೆ ಇದರಲ್ಲೆಲ್ಲಾ ತನ್ನ ಮೂಗು ತೂರಿಸುವ ಇಷ್ಟವಿರಲಿಲ್ಲ. ಬಹುಶಃ ಚುನಾವಣೆಯ ಸಮಯಕ್ಕೆ ಇದರ ಬಗ್ಗೆ ಜನರ ಗಮನವನ್ನ ಸಳೆದರೆ ಅತ್ತ ಸಹಕಾರ ಸಂಘದ ಸಾಲ ವಸೂಲಿಗೆ ಕರಣಂ ವಿಶ್ವನಾಥಂನನ್ನು ಛೂ ಬಿಟ್ಟು 'ಸಾಲಮನ್ನಾ' ಒಂದು ಅಜೆಂಡಾ ಆಗದಂತೆ ನೋಡಿಕೊಳ್ಳಬಹುದು - ಎಂದು ಕೆಲಕ್ಷಣಗಳ ಮಟ್ಟಿಗೆ ಅನ್ನಿಸಿತು.
ಶ್ರೀಪ್ರಕಾಶ್ ಚಂದ್ ಶ್ರೀಮಲ್ ಕಾಕಾನನ್ನು ನೋಡಿದಾಕ್ಷಣಕ್ಕೆ ಖುಷಿಗೊಂಡ. ಅವನಿಗಂತೂ ಈ ದೇವಸ್ಥಾನದ ಅಜೆಂಡಾ ಒಂದು ಸುವರ್ಣಾವಕಾಶವೆಂಬಂತೆ ಕಂಡಿತು. ಈ ವಿಷಯ ಕೈಗೆತ್ತಕೊಂಡರೆ ಎರಡು ರೀತಿಯಿಂದ ಉಪಯೋಗವಾಗಲಿತ್ತು: ಒಂದು - ಜನರಿಗೆ ಪವಿತ್ರವೆನ್ನಿಸುವ ಈ ಕೆಲಸದ ನಾಯಕತ್ವವನ್ನು ಕೈಗೆತ್ತಿಕೊಳ್ಳುವುದರಿಂದ ಜನರ ನಡುವೆ ಅವನ ಪ್ರತಿಷ್ಠೆ, ಸ್ವೀಕಾರ ಹೆಚ್ಚಲಿತ್ತು. ಎರಡು - ನಾಲ್ಕಾರು ವರುಷಗಳಿಂದ ಇಲ್ಲದ್ದ ದೇವರ ಕೃಪೆ ಈ ಪುಣ್ಯಕಾರ್ಯದಿಂದಾದರೂ ದಕ್ಕಬಹುದಿತ್ತು. ಒಟ್ಟಾರೆ - ಆಲಯವನ್ನು ಕಟ್ಟುವ ಹುಮ್ಮಸ್ಸಿನಲ್ಲಿ ಜನ ಸಹಕಾರ ಸಂಘದ ಸಾಲದ ಬಗ್ಗೆ ಸ್ವಲ್ಪ ಸಡಿಲಾದರೆ ತನ್ನ ವ್ಯಾಪಾರವೂ ಕುದುರುವುದು ಎಂದಲ್ಲಾ ಶ್ರೀಮಲ್ ದೂರಾಲೋಚನೆ ಮಾಡಿದ. ಒಂದು ಹಂತದಲ್ಲಿ ಬೆಳೆ ಬರುವ ವೇಳೆಗೆ ಸರಿಯಾಗಿ ಮಂದಿರ ನಿರ್ಮಾಣದ ಕಾರ್ಯಕ್ರಮವನ್ನು ಜೋರಾಗಿ ಕೈಗೊಂಡರೆ - ಸಾಲದ ಹಣವನ್ನು ಚಂದಾವನ್ನಾಗಿ ಪರಿವರ್ತಿಸಬಹುದು ಎಂಬ ಆಲೋಚನೆಯೂ ಅವನ ಮನಸ್ಸನ್ನು ಹಾಯ್ದು ಹೋಯಿತು. ಈ ಎಲ್ಲ ಯೋಚಿಸುತ್ತರುವಾಗಲೇ ಅವನ ಬಡ್ಡೀ ಮನಸ್ಸು ಖರ್ಚಿಲ್ಲದೆಯೇ ಪುಣ್ಯವಂತನೂ, ಒಳ್ಳೆಯವನೂ ಆಗುವ ತನ್ನ ಡಬಲ್ ಫಾಯಿದೆಯನ್ನು ಚಕ್ರ ಬಡ್ಢಿ ಸಮೇತ ಲೆಕ್ಕಹಾಕುತ್ತಿತ್ತು.

ಕಾಕಾ ಬಂದು ಇಪ್ಪತ್ತು ದಿನಗಳಾಗುವ ವೇಳೆಗೆ ಹಳ್ಳಿಯಲ್ಲೆಲ್ಲಾ ಶಿವಾಲಯದ ಮಾತು ಮನೆಮಾತಾಗಿತ್ತು. ಜನರ ಗಮನವೆಲ್ಲಾ ಕಾಕಾನ ಅಜೆಂಡಾದತ್ತ ಕೇಂದ್ರೀಕೃತವಾದಾಗ, ತಾನು ಸುಮ್ಮನಿರುವುದು ಸರಿಕಾಣುವುದಿಲ್ಲ ಎಂದು ಅಪ್ಪಲರೆಡ್ಡಿಗೆ ಅನ್ನಿಸಿತು. ಇದಕ್ಕೆ ಒಳ್ಳೆಯ ಉಪಾಯವೆಂದರೆ ಒಂದು ಆಲಯ ಪುನರ್ನಿರಮಾಣ ಸಮಿತಿಯನ್ನು ಏರ್ಪಾಟು ಮಾಡುವುದಾಗಿತ್ತು. ಈ ಎಲ್ಲವೂ ಹೇಗೆ ಮುಂದುವರೆಯಬೇಕು ಎಂಬುದರ ಬಗೆಗೆ ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಗೆ ಒಂದು ಹಂತದಲ್ಲಿ ಆಸಕ್ತಿಯಿತ್ತು. ಜತೆಗೆ ಈ ಎಲ್ಲದರ ಮೇಲೂ ತನ್ನ ಉಸ್ತುವಾರಿಕೆ ಇರಲೇಬೇಕಿತ್ತು. ಅದೇ ಸಮಯಕ್ಕೆ ಈ ಸಮಿತಿಯಲ್ಲಿ ಸ್ವತಃ ತಾನಿರುವುದು ಅಪ್ಪಲರೆಡ್ಡಿಗೆ ಇಷ್ಟವಿರಲಿಲ್ಲ. ಮೇಲಾಗಿ ಈ ಸಮಿತಿಗೆ ರಾಜಕೀಯ ಬಣ್ಣ ಕೊಟ್ಟರೆ ಆಗುವ ಪ್ರಯೋಜನಕ್ಕಿಂತ ನಷ್ಟವೇ ಹಚ್ಚೆಂದು ಅಪ್ಪಲರೆಡ್ಡಿಗೆ ಖಾತ್ರಿಯಿತ್ತು. ಪುನರ್ನಿರ್ಮಾಣ ಸಮಿತಿಯಲ್ಲಿ ತಾನಿರದೆಯೇ, ಅದು ತನ್ನ ಕಂಟ್ರೋಲಿನಂದಾಚೆ ಹೋಗದಂತಹ ದಾರಿಯನ್ನು ಅಪ್ಪಲರೆಡ್ಡಿ ಹುಡುಕುತ್ತಿದ್ದ. ಒಂದು ಸರಳ ಉಪಾಯವೆಂದರೆ ಶ್ರೀಪ್ರಕಾಶ್ ಚಂದ್ ಶ್ರೀಮಲ್ ನನ್ನು ಸಮಿತಿಯ ಅಧ್ಯಕ್ಷನನ್ನಾಗಿ ಮಾಡುವುದು. ಶ್ರೀಮಲ್ ಜೊತೆ ಇದನ್ನು ಚರ್ಚಿಸಿದಾಗ ಅವನೂ ಇದನ್ನು ಇಷ್ಟದಿಂದ ಒಪ್ಪಿಕೊಂಡಂತಾಯಿತು. ರೆಡ್ಡಪ್ಪ ಮಾಸ್ತರನ್ನೂ ಸಮಿತಿಗೆ ಸೇರಿಸಿಕೊಳ್ಳುವುದೆಂದು ಇಬ್ಬರೂ ನಿರ್ಧರಿಸಿದರು. ಜೊತೆಜೊತೆಗೆ ಹಳ್ಳಿಯ ಇತರ ಪ್ರಮುಖರ ಹೆಸರೂ ಸೇರಿಕೊಂಡಿತು. ಒಟ್ಟಾರೆ ಸಮಿತಿ ಕೈ ತಪ್ಪಿಹೋಗದಿರಲೆಂದು ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿ ಸಮಿತಿಯ ಮುಂದೆ ಒಂದು ಆಸೆಯನ್ನು ನೇತುಬಿಟ್ಟ - "ಆಲಯಕ್ಕೆ ಜವಾಹರ್ ರೋಜ್ ಗಾರ್ ಯೋಜನಾದಿಂದ ಒಂದಿಷ್ಟು ಹಣವನ್ನು ಪಂಚಾಯ್ತಿಯ ವತಿಯಿಂದ ಮಂಜೂರು ಮಾಡಿಸುವುದು ಸಾಧ್ಯವೇನೋ..."

ಸಮಿತಿ ಏರ್ಪಾಟು ಮಾಡಿದಾಗಲೇ ರೆಡ್ಡಪ್ಪ ಮಾಸ್ತರು ಸ್ವಲ್ಪ ಬೇಸರದಿಂದ ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಯವರ ಬಳಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು:

"ನೋಡಿ ದೊರೆ, ಸಮಿತಿಯೇನೋ ಮಾಡಿದ್ದೀರಿ... ಆದರೆ ಈ ಎಲ್ಲ ಯೋಚನೆಗಳಿಗೂ ಮೂಲ ಕಾರಣ ಕಾಕಾ... ದಿನ ನಿತ್ಯ ಆ ಜಾಗವನ್ನು ಕ್ಲೀನಾಗಿರಿಸಿ, ಪೂಜೆ ಮಾಡುತ್ತಿರುವವನೂ ಕಾಕಾನೇ. ಈಗ ಸಮಿತಿಯಲ್ಲಿ ಕಾಕಾ ಇಲ್ಲದಿರೋದು ವಿಚಿತ್ರ ಅಲ್ಲವೇ?"

"ಹೌದು ಮಾಸ್ತರೇ ಈ ವಿಷಯ ನಾವು ಬಹಳ ಯೋಚಿಸಿದೆವು. ಆದರೆ ಕಾಕಾನಂಥವರು ಸಮಿತಿಯಲ್ಲಿರೋದರಿಂದ ಫಾಯಿದೆಯೇನೂ ಇಲ್ಲ. ನಿಮಗೇ ಗೊತ್ತಿರೋ ಹಾಗೆ ಆ ಭಗವಂತನನ್ನು ಮುಟ್ಟುವುದಕ್ಕೆ ಎರಡು ಮಾರ್ಗಗಳಿವೆ - ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗ. ಕಾಕಾ ಭಕ್ತಿಮಾರ್ಗಕ್ಕೆ ಸೇರಿದವನು. ಅವನು ಯೋಚಿಸಲಾರ. ಅವನನ್ನು ಕೆಲಸ ಸಾಧಿಸುವ ಉಸ್ತುವಾರಿಕೆಗೆ ಉಪಯೋಗಿಸಿಕೊಳ್ಳೋಣ. ಸಮಿತಿಯಲ್ಲಿ ಇರುವವರೆಲ್ಲಾ ಜ್ಞಾನಮಾರ್ಗಕ್ಕೆ ಸೇರಿದವರು. ಒಟ್ಟಾರೆ ಹೇಗಾದರೂ ಆಲಯ ನಿರ್ಮಾಣ ಆಗಬೇಕಾದ ರೀತಿಯ ಬಗ್ಗೆ ಆಲೋಚನೆ ಮಾಡುವವರು." ಅಪ್ಪಲರೆಡ್ಡಿಯವರು ಹೀಗೆಲ್ಲಾ ಮಾತನಾಡಿ, ರೆಡ್ಡಪ್ಪ ಮಾಸ್ತರರ ಬಾಯಿ ಮುಚ್ಚಿಸಿದ್ದರು.

ಸಮಿತಿಯ ರಚನೆಯ ಬಗ್ಗೆ ಕೇಳಿದ ಕಾಕಾ ಮಾತ್ರ ವಿಚಿತ್ರ "ಕರ್ಮಣ್ಯೇವಾಧಿಕಾರಸ್ತೇ" ಮೂಡಿನಲ್ಲಿದ್ದ. "ಸಮಿತಿ ಮಾಡಿ, ಸರಕಾರದ ಹಣ ತನ್ನಿ, ಚಂದಾ ಎತ್ತಿ, ಇಟ್ಟಿಗೆ ಕೊಡಿ, ಏನಾದರೂ ಮಾಡಿ... ಒಟ್ಟಾರೆ ಎರಡು ವರ್ಷಗಳಲ್ಲಿ ಆಲಯ ನಿರ್ಮಾಣ ಮುಗಿಯಬೇಕು. ಅಷ್ಟೇ."
ಈ ಚರ್ಚೆ ಮುಗಿಸಿಕೊಂಡು ಶಾಲೆಗೆ ಬಂದ ರೆಡ್ಡಪ್ಪ ಮಾಸ್ತರಿಗೆ ಯಾಕೋ ಸಮಾಧಾನವಾದಂತಿರಲಿಲ್ಲ. ಏನೂ ತೋರದೇ ಅವರು ಗೋಡೆಯತ್ತ ನೋಡಿದರು:"ಜೀವನ ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ನಡುವಿನ ನಿರಂತರ ಹೋರಾಟ" ಎಂಬ ಜರತುಷ್ಟ್ರನ ಸೂಕ್ತಿ ಕಣ್ಣಿಗೆ ಬಿತ್ತು.

ಸಮಿತಿಯ ರಚನೆಯಾದ ಕೆಲದಿನಗಳಲ್ಲೇ ಹಳ್ಳಿಯಲ್ಲಿ ಸಂಭ್ರಮದಿಂದ ಚಟುವಟಿಕೆ ಪ್ರಾರಂಭವಾಯಿತು. ಶ್ರೀಪ್ರಕಾಶ್ ಚಂದ್ ಶ್ರೀಮಲ ಮೊದಲ ಕಾಣಿಕೆ ನೀಡಿ ಒಂದು ಗಾಡಿ ಇಟ್ಟಿಗೆ ತರಿಸಿದರು. ರೆಡ್ಡಪ್ಪ ಮಾಸ್ತರು - ಮೋಹನ ಕಾಕಾರ ಉಸ್ತುವಾರಿಕೆಯಲ್ಲಿ ಶಾಲಾ ಆವರಣ 'ಸಾಫು' ಕಾರ್ಯಕ್ರಮದಲ್ಲಿ ಆಲಯವೂ ಸೇರಿಕೊಂಡಿತು. ಶಾಲಾ ಮಕ್ಕಳು ಸಂಭ್ರಮದಿಂದ ಆಲಯದತ್ತಲೂ ಕಣ್ಣು ಹಾಯಿಸಿದರು. ಪ್ರತಿನಿತ್ಯದ ಶಾಲಾ ಪ್ರಾರ್ಥನೆ ಕೂಡಾ ಬದಲಾಯಿತು. ದಿನವೂ ಧ್ವಜಸ್ಥಂಬದೆದುರು ನಿಸತು ಹಾಡುತ್ತಿದ್ದ ದೇಶಭಕ್ತಿಗೀತೆಯನ್ನು ಕೈಬಿಟ್ಟು ಮಕ್ಕಳೆಲ್ಲಾ 'ಬಾಯೇ ಮೋಡ್' ಮಾಡಿ ಎಡಬದಿಗೆ ತಿರುಗಿದರು. ದೇವಾಲಯದ ಎದುರಿಗೆ ನಿಂತು - "ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ" ಹಾಡಲು ಪ್ರಾರಂಭಿಸಿದರು.

ರೆಡ್ಡಪ್ಪ ಮಾಸ್ತರು ಈ ಎಲ್ಲ ಬದಲಾವಣೆಗಳನ್ನೂ ಸಂಭ್ರಮದಿಂದ ಕೈಗೊಂಡರು. ದೇವರ ಕೆಲಸ ಯಾವತ್ತಿದ್ದರೂ ಪುಣ್ಯದ ಕೆಲಸ, ಇದಕ್ಕೆ ಅಡ್ಡಬರಲು ನಾವು ತಾನೇ ಯಾರು??

ಆದರೆ ಶ್ರೀಪ್ರಕಾಶ್ ಚಂದ್ ಶ್ರೀಮಲ್ ಈ ಕೆಲಸದಲ್ಲಿ ಎಂದಿಗಿಂತ ಹೆಚ್ಚಿನ ಮುತುವರ್ಜಿ ವಹಿಸಿದ್ದು ಸುಮಾರಷ್ಟು ಜನಕ್ಕೆ ಆಶ್ಯರ್ಯದ, ಕುತೂಹಲದ ವಿಷಯವಾಗಿತ್ತು. ಶ್ರೀಮಲ್ ಮನಸ್ಸಿನಲ್ಲಿ ಏನಿತ್ತು ಎಂದು ಊಹಿಸುವುದು ಎಲ್ಲರಿಗೂ ಕಷ್ಟದ ಕೆಲಸವಾಗಿತ್ತು. ಏಕೆಂದರೆ ಶ್ರೀಮಲ್ ಎಂದಿಗೂ ರಾಜಕೀಯ ಉದ್ದೇಶಗಳನ್ನು ವ್ಯಕ್ತಪಡಿಸಿಯೇ ಇರಲಿಲ್ಲ. ಎಂದೂ ಯಾರ ಪಕ್ಷವಾಗಿಯೂ ನಿಂತವನಲ್ಲ. ಯಾರೇ ಪಂಚಾಯ್ತಿಯಲ್ಲಿದ್ದರೂ - ಶ್ರೀಮಲ್ ರ ಅಭಯ ಹಸ್ತ ಅವರತ್ತ ಇರುತ್ತಿತ್ತು. ಮಹಾಜುಗ್ಗನೆಂದು ಪ್ರಸಿದ್ಧಿ ಹೊಂದಿದ್ದ ಶ್ರೀಮಲ್ ವ್ಯಕ್ತಿತ್ವದಲ್ಲಿ ಇಷ್ಟೊಂದು ಬದಲಾವಣೆಯಾದದ್ದು ಜನರಿಗೆ ಆಶ್ಚರ್ಯದ ವಿಷಯವಾಗಿತ್ತು. ದೇವರ ವಿಷಯಕ್ಕೆ ಬಂದಾಗ ಯಾರು ಹೇಗೆ ವರ್ತಿಸುವರೆಂದು ದೇವರೇ ಬಲ್ಲ!

ಶ್ರೀಮಲ್ ಕೊಟ್ಟ ಮೊದಲ ಚಂದಾ, ಅದರ ಜೊತೆಗೆ ಹಳ್ಳಿಯ ಮಿಕ್ಕ ಪ್ರಮುಖರು ಕೊಟ್ಟ ಸಣ್ಣ ಪುಟ್ಟ ಚಂದಾ ಹಣದಿಂದ ಆಲಯದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಮೊದಲಿಗೆ ಶಿವಲಿಂಗದ ಸುತ್ತಲೂ ಗೋಡೆ ಎಬ್ಬಿಸಿದರು. ಗೋಡೆ ಹಾಕುವುದಕ್ಕೆ ಬೇಕಾಗಿದ್ದ ಕೂಲಿಯವರ ಕೂಲಿಯನ್ನು 'ಜವಾಹರ್ ರೋಜ್ ಗಾರ್ ಯೋಜನಾ'ದಡಿ ಮಂಜೂರು ಮಾಡಬೇಕೆಂದು ಆಲಯ ನಿರ್ಮಾಣ ಸಮಿತಿ ಪಂಚಾಯ್ತಿಯನ್ನು ಕೇಳಿಕೊಂಡಿತು. ಈ ವಿಷಯದ ಬಗ್ಗೆ ಪಂಚಾಯ್ತಿ ಬಹಳವೇ ಅಳೆದೂ ಸುರಿದೂ - ಕಡೆಗೆ ಒಪ್ಪಿಕೊಂಡಿತು. ಒಪ್ಪಿಕೊಳ್ಳಲು ಕಾರಣ: ಹೇಗೂ ಯೋಜನಾದ ಹಣ ಬೇರೆಲ್ಲೂ ಉಪಯೋಗವಾಗುವುದಿಲ್ಲ - ಎಂದು. "ಸಮುದಾಯ ಭವನ" ನಿರ್ಮಾಣಕ್ಕೆಂದು ಹಣ ತೆಗೆದಂತೆ ಠರಾವು ಪಾಸುಮಾಡಿದ್ದೂ ಆಯಿತು. ಗೋಡೆ ಎದ್ದಕೂಡಲೇ ಮೋಹನಕಾಕಾ - ಸೂರಿಗೆ ಆರ್.ಸಿ.ಸಿ ಆಗಲೇ ಬೇಕೆಂದ. ಆದರೆ ಮಳೆಗಾಲದ ಸೂಚನೆಯೂ ಇದ್ದು, ಹಣವೂ ಮುಗಿದದ್ದರಿಂದ - ಸದ್ಯಕ್ಕೆ ತಡಿಕೆಗಳನ್ನು ಹಾಕಿ ಸೂರು ಮುಚ್ಚುವುದು - ಹಾಗೂ ಮುಂದಿನ ಘಟ್ಟದಲ್ಲಿ ಸೂರು, ಸ್ಥೂಪ, ಪ್ರಹರಿಗಳ ವಿಷಯ ಯೋಚಿಸುವುದು ಎಂದು ಆಲಯ ಸಮಿತಿ ನಿರ್ಧರಿಸಿತು.

ಮೋಹನ ಕಾಕಾ ಎಂದಿನಂತೆ ತನ್ನ ಪೂಜೆಗಳನ್ನು ಮಾಡಿಕೊಳ್ಳುತ್ತಾ ಸಿಕ್ಕ ಜನರ ಬಳಿಯೆಲ್ಲಾ ಆಲಯ ನಿರ್ಮಾಣದ ಕನಸನ್ನು ಹಂಚಿಕೊಳ್ಳುತ್ತಾ ಶಾಲೆಯ ಮಕ್ಕಳ ಬಳಿ ಪ್ರತಾಪ ಕೊಚ್ಚಿಕೊಳ್ಳುತ್ತಾ ಮುಂದುವರೆದ. ಸಿಕ್ಕ ಸಮಯದಲ್ಲಿ ರೆಡ್ಡಪ್ಪ ಮಾಸ್ತರಿಗೂ ಸಾಕಷ್ಟು ಸಹಾಯ ಮಾಡುತ್ತಿದ್ದ.

ಆಲಯ ಇಷ್ಟರ ಮಟ್ಟಿಗೆ ನಿರ್ಮಾಣವಾದದ್ದೇ - ಮೂರು ವರ್ಷಗಳಿಂದ ಬರಪೀಡಿತವಾಗಿದ್ದ ಊರಿಗೆ ಇದ್ದಕ್ಕಿದ್ದಂತೆ ಮಳೆ ಹನಿ ಬಿತ್ತು. ಈ ಬಾರಿ ಮಳೆ ಚೆನ್ನಾಗಿಯೇ ಆಗುವ ನಿರೀಕ್ಷೆ ಜನರಿಗಿತ್ತು. ಮಳೆ ಪ್ರಾರಂಭವಾದದ್ದೇ ತಡ - ಮೋಹನ ಕಾಕಾ ಖುಷಿಯಿಂದ ಕುಣಿದಾಡಿದ. ಶಾಲಾ ಮಕ್ಕಳ ಮುಂದೆಲ್ಲಾ ಸಂತೋಷದ ಭಾಷಣ ಬಿಗಿದ:

"ನೋಡಿದಿರಾ, ನಿಮ್ಮ ಹಳ್ಳಿಗಿದ್ದ ಶಾಪವನ್ನು ಹೇಗೆ ದೂರಮಾಡಿದೆ.... ಈ ಆಲಯವನ್ನು ನೀವು ಇಷ್ಟುದಿನ ಮರೆತಿದ್ದರಿಂದಲೇ ನಿಮ್ಮ ಹಳ್ಳಿಗೆ ಸಕಲ ಕಷ್ಟಗಳು ಬಂದುವು. ಈಗ ಸುವರ್ಣಯುಗಿ ಪ್ರಾರಂಭವಾಗಲಿದೆ. ಮಳೆಗಾಲದ ನಂತರ ಇದಕ್ಕೆ ಸೀಮೆಂಟಿನ ಸೂರು ಹಾಕಿಸಿಬಿಟ್ಟರೆ - ದೇವರಿಗೂ ಅವನ ದಾಸನಾದ ನನಗೂ ಖುಷಿಯಾಗುವುದು."

ಮಳೆ ಚೆನ್ನಾಗಿ ಬಂದ ಸುದ್ದಿಯನ್ನು ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿ ಖುಷಿಯಿಂದ ಸ್ವೀಕರಿಸಿದ. ಸದ್ಯ ಈ ವರ್ಷವೊಂದ ಸುಗಮವಾಗಿ ಮುಗಿದುಬಿಟ್ಟರೆ ಸಾಕು. ಆ ನಂತರ, ಊರ ಆಡಳಿತ ಇತ್ಯಾದಿಗಳನ್ನು ಹದಕ್ಕೆ ತರಲು ಮತ್ತಷ್ಟು ಸಮಯ ಸಿಗಬಹುದು. ಆಲಯದಿಂದ ಇದ ಆಯಿತೆಂದು ಜನ ನಂಬಿದರೆ ಅದರಿಂದ ತೊಂದರೆಯೇನೂ ಇಲ್ಲ... ತಾನೂ ಎಂದೂ ನಿರ್ಮಾಣ ಕಾರ್ಯವನ್ನು ವಿರೋಧಿಸಿಲ್ಲವಲ್ಲ.....

ಶ್ರೀಪ್ರಕಾಶ್ ಚಂದ್ ಶ್ರೀಮಲ್ ಗೆ ಈ ಸುದ್ದಿಯನ್ನು ಹೇಗೆ ಸ್ವೀಕರಿಸಬೇಕೋ ತಿಳಿಯದಾಯಿತು. ಒಂದು ಕಡೆ ಆಲಯ ಸಮಿತಿಯ ಅಧ್ಯಕ್ಷನಾಗಿ, ಈ ಕೆಲಸ ಮಾಡಿದ್ದರಿಂದ - ಹಾಗೂ ತಕ್ಷಣ ಮಳೆ ಬಂದದ್ದರಿಂದ ತನ್ನ ಪ್ರಾಮುಖ್ಯತೆ ಹೆಚ್ಚಾಗಬಹುದು. ಜನರು ಹೆಚ್ಚಿನ ಗೌರವ ಕೊಡಬಹುದು, ಅನ್ನಿಸಿದರೆ - ಮತ್ತೊಂದು ಕಡೆ - ಒಳ್ಳೆಯ ಬೆಳೆ ಬಂದ ವರ್ಷ ಜನ ತನ್ನ ಬಳಿ ಸಾಲಕ್ಕೆ ಬರುವುದಿಲ್ಲವಲ್ಲ ಎಂದೂ ದುಃಖವಾಯಿತು. ಈ ಎಲ್ಲಕ್ಕೂ ಒಂದೇ ಉಪಾಯವೆಂದರೆ ಕುಯಿಲಿನ ಸಮಯಕ್ಕೆ ನಿರ್ಮಾಣವನ್ನು ಅಗ್ರೆಸಿವ್ ಆಗಿ ಕೈಗೊಂಡು ಜನರ ಹೆಚ್ಚುವರಿ ಹಣ ಆಲಯಕ್ಕೆ ಬರುವಂತೆ ನೋಡಿಕೊಳ್ಳುವುದಾಗಿತ್ತು.

ಇತ್ತ ಆಲಯದ ಖ್ಯಾತಿ ಸುತ್ತಮುತ್ತಲಿನ ನಾಲ್ಕಾರು ಹಳ್ಳಿಗಳಿಗೆ ಹಬ್ಬಿತು. ಮಳೆ ಬಂದ ಖುಷಿಗೆ ಜನ ಹೊಸದಾಗಿ ಕಂಡುಹಿಡಿದ ಶಿವಾಲಯದ ಫಾರ್ಮುಲಾ ಬಳಸಿ ಅಲ್ಲಿಯೇ ಪೂಜೆ ಮಾಡಿಸಲು ಪ್ರಾರಂಭಿಸಿದರು. ಆಲಯ ನಿರ್ಮಾಣ ಸಮಿತಿ ಇದನ್ನು ಗಮನಿಸಿ ಕೂಡಲೇ ಒಂದು ಹೊಸ ಕಾಣಿಕೆಯ ಪೇಟಿಯನ್ನು ಪ್ರತಿಷ್ಠಾಪನೆ ಮಾಡುವುದೆಂದು ನಿರ್ಧರಿಸಿತು. ಮೊದಲಿಗೆ ಆ ಕೆಲಸ ಮಾಡಿದರೂ - ಸಮಿತಿಯೆದುರು ಮತ್ತೊಂದು ಸಮಸ್ಯೆ ಎದ್ದು ನಿಂತಿತು.

ಬರೇ ಶಿವಲಿಂಗ ತೊಳೆದು ನಾಲ್ಕಾರು ಹೂವುಗಳನ್ನಿಟ್ಟು ಐದಾರು ಸಂಸ್ಕೃತ ಶ್ಲೋಕ ಗೊಣಗುತ್ತಿದ್ದ ಮೋಹನ ಕಾಕಾ - ಆರತಿ, ಸಹಸ್ರನಾಮಾರ್ಚನೆ ಇತ್ಯಾದಿಗಳನ್ನು ಮಾಡಲಾರದವನಾಗಿದ್ದ. ಬೇರೆ ಹಳ್ಳಿಯ ಜನರೂ ಬರತೊಡಗಿ ಅವರ ಕೋರಿಕೆಗಳೂ ಕಾಂಪ್ಲಕೇಟ್ ಆಗುತ್ತಾ ಹೋದದ್ದನ್ನು ಗಮನಿಸಿದ ಸಮಿತಿ ಈ ಬಗ್ಗೆ ಏನಾದರೂ ಮಾಡಲೇ ಬೇಕಿತ್ತು.

ಶ್ರೀಪ್ರಕಾಶ್ ಚಂದ್ ಶ್ರೀಮಲ್ ಜಡಚರ್ಲದ ರಾಮ ಮಂದಿರದ ಪೂಜಾರಪ್ಪನನ್ನು ಇಲ್ಲಿಗೆ ಕರೆಸಿ ಪೂಜೆ ಮಾಡಿಕೊಳ್ಳಲು ಕೇಳಿಕೊಳ್ಳಬೇಕೆಂಬ ಪ್ರಸ್ತಾವನೆಯನ್ನು ಸಮಿತಿಯ ಮುಂದಿಟ್ಟರು. ಸಮಿತಿಯ ಮಿಕ್ಕ ಸದಸ್ಯರೆಲ್ಲಾ ಈ ಬಗ್ಗೆ ಒಮ್ಮತದಿಂದ ಒಪ್ಪಗೆ ನೀಡಿದರೂ - ರೆಡ್ಡಪ್ಪ ಮಾಸ್ತರರಿಗೆ ಏಕೋ ಯಾವುದೂ ಸರಿಯಾಗಿ ಮುಂದುವರೆಯುತ್ತಿದೆ ಅನ್ನಿಸಲಿಲ್ಲ.

"ನಮ್ಮ ಕಾಕಾ ಇಷ್ಟು ದಿನದಿಂದ ಪೂಜೆ ಮಾಡಿಕೊಂಡು ಬರುತ್ತಾ ಇದ್ದಾನೆ. ಅವನ ಪೂಜೆಯ ಫಲವಾಗಿಯೇ ಊರಲ್ಲಿ ಮಳೆ ಬೆಳೆ ಆಗಿದೆ. ಈಗ ಇದ್ದಕ್ಕಿದ್ದ ಹಾಗೆ ಹೂರಗಿನ ಪೂಜಾರಿಯನ್ನು ಕರೆತಂದರೆ ಅವನಿಗೆ ಬೇಜಾರಾಗೋದಿಲ್ಲವೇ.. ಪಾಪ ಆಲಯ ನಿರ್ಮಾಣದ ಮೊದಲ ಮಾತನಾಡಿದವನೇ ಅವನು..."

"ಹೌದು ನೀವು ಹೇಳುವುದೇನೋ ನಿಜ. ಆದರೆ ಅದರ ಪ್ರಾಕ್ಟಿಕಲ್ ಅಂಶಗಳನ್ನ ನೋಡಿ. ಆಲಯದಲ್ಲಿ ಒಬ್ಬ ಬ್ರಾಹ್ಮಣ ನಿಂತು ಸರಿಯಾಗಿ ಪೂಜೆ ಮಾಡುತ್ತಿದ್ದಾನೆ ಅಂದ ಮೇಲೆ - ಬೇರೆ ಊರಿನವರೂ ಪೂಜೆಗೆ ಇಲ್ಲಿಗೆ ಬರುತ್ತಾರೆ.... ಒಂದಿಷ್ಟು ಚಂದಾ, ಮಂಗಳಾರತಿ ಅಂತ ಹಣ ಸೇರುತ್ತೆ. ನಿರ್ಮಾಣ ಕಾರ್ಯ ಸುಗಮವಾಗಿ ಮುಂದುವರೆಯುತ್ತದೆ." ಸಮಿತಿಯ ಇತರ ಸದಸ್ಯರ ಅಭಿಪ್ರಾಯ ಹೀಗಿತ್ತು. ಮಾಸ್ತರು ಯೋಚಿಸಿ ನೋಡಿದರು. ಎರಡು ವಿಚಾರಗಳೂ ತಮ್ಮತಮ್ಮಲ್ಲೇ ಸರಿಯಿದ್ದುವು. ಕಾಕಾನ ಕಡೆಗೂ ವಾಲದೇ -ದೇವಾಲಯದ ಕಡೆಗೂ ವಾಲದೇ ಸುಮ್ಮನೆ ಗೋಡೆಯತ್ತ ನೋಡಿದರು.

"ಧರ್ಮವೂ ಸಂತೋಷವೂ ಸಾಕಾರಗೊಳ್ಳುವುದರ ಆಧಾರ ದ್ರವ್ಯಪ್ರಾಪ್ತಿಯನ್ನೇ ಅವಲಂಬಿಸಿರುವುದು" ಎಂಬ ಕೌಟಿಲ್ಯನ ಸೂಕ್ತಿ ಕಂಡಿತು. ರೆಡ್ಡಪ್ಪ ಮಾಸ್ತರು ತಲೆಯಾಡಿಸಿದ್ದೇ ರಾಮಮಂದಿರದ ಪೂಜಾರಪ್ಪನನ್ನು ಇಲ್ಲಿ ಪೂಜೆ ಮಾಡಲು ಹಳ್ಳಿಯ ಮುಖ್ಯಸ್ಥರು ಹೋಗಿ ಕೇಳಿಕೊಂಡರು.

ಆದರೆ ಜಡಚರ್ಲದ ಪೂಜಾರಪ್ಪನದ್ದು ಒಂದೆರಡು ಸಣ್ಣ ಷರತ್ತುಗಳಿದ್ದುವು: "ನೋಡಿ, ನಾನು ಪವಿತ್ರ ಬ್ರಾಹ್ಮಣ. ನನ್ನನ್ನು ನೀವು ಪೂಜೆಗೆ ಕರೆಯುತ್ತಿದ್ದೀರಿ. ಒಳ್ಳೆಯದು - ನಿಮ್ಮ ಹಾಗೆ ನಾನು ಸಮಸಮಾಜದಲ್ಲಿ ನಂಬಿಕೆಯಿಟ್ಟವನಲ್ಲ. ಗರ್ಭಗುಡಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಬೇರೆ ಯಾರೂ ಪ್ರವೇಶಿಸಬಾರದು. ಇದಕ್ಕೆ ಒಪ್ಪಿಗೆಯಾಗುವುದಾದರೆ ನಾನು ಅಲ್ಲಿ ಪೂಜೆ ಮಾಡಲು ಸಿದ್ಧ."

"ಒಪ್ಪಿಗೆ ಶಾಸ್ತ್ರಿಗಳೇ... ಆದರೆ ನಮ್ಮ ಮೋಹನ ಪ್ರಭುದಾಸ ಮುಂಚಿನಿಂದಲೂ ಆಲಯವನ್ನು ನೋಡಿಕೊಂಡವನು. ಅವನು ನಿಮಗೆ ಒಳ ಆವರಣವನ್ನು ಶುದ್ಧವಾಗಿಟ್ಟಿರಲು ಸಹಾಯ ಮಾಡುತ್ತಾನೆ. ಅವನಿಗೆ ಮಾತ್ರ ಪ್ರವೇಶಕ್ಕೆ ನೀವು ಪರ್ಮಿಟ್ ಮಾಡಬೇಕು." ಸರಪಂಚರಂದರು.

"ಏನು ಚೌಕಾಸಿ ವ್ಯಾಪಾರ ಮಾಡ್ತಾ ಇದ್ದೀರಾ? ನಾನು ಒಂದು ಮಾತು ಹೇಳಿದರೆ ಮುಗೀತು. ಹಜಾಮರನ್ನೆಲ್ಲ ಒಳಸೇರಿಸಿಕೊಳ್ಳೋ ಸ್ಥಿತಿಗೆ ನಾನಿನ್ನೂ ಇಳಿದಿಲ್ಲ. ನಿಮಗೆ ಬೇಕಿದ್ದರೆ ನನ್ನ ಷರತ್ತಿನ ಮೇಲೆ ಬರುತ್ತೇನೆ. ಇಲ್ಲವಾದರೆ, ನನಗೆ ಸಾಕಷ್ಟು ಬೇರೆ ಕೆಲಸಗಳಿವೆ....."

"ಅಲ್ಲ ಶಾಸ್ತ್ರಿಗಳೇ, ಹಿಂದಿನಿಂದಲೂ ಭಜಂತ್ರಿಗಳಿಗೆ ಆಲಯಪ್ರವೇಶ ಇದ್ದೇ ಇತ್ತಲ್ಲ....."

"ನೋಡಿ, ಗರ್ಭಗುಡಿಗೆ ಎಂದೂ ಪ್ರವೇಶವಿರಲಿಲ್ಲ... ಏನಾದರಾಗಲಿ ನಿಮ್ಮ ಜೊತೆ ಚರ್ಚೆ ಯಾಕೆ? ಇದೇ ನನ್ನ ಕಡೆಯ ಮಾತು."

ಕೆಲವೇ ತಿಂಗಳ ಹಿಂದೆ ಹರಿಜನರು, ಗಿರಿಜನರು, ಪಶು, ಪಕ್ಷಿ, ನಾಯಿ, ನರಿಗಳೆಲ್ಲಾ ಆರಾಮವಾಗಿ ಓಡಾಡುತ್ತಿದ್ದ ಜಾಗ ಈಗ ಇದ್ದಕ್ಕಿದ್ದಂತೆ ಪವಿತ್ರವಾಗಿಬಿಟ್ಟಿತ್ತು! ಮೋಹನ ಕಾಕಾ ಈ ಅರೇಂಜ್ಮೆಂಟಿನಿಂದಾಗಿ ಆಲಯ ನಿರ್ಮಾಣದ ಕೆಲಸ ಬೇಗ ಆಗುವುದಾದರೆ ಯಾಕಾಗಬಾರದು - "ಎಷ್ಟಾದರೂ ನಾನು ಇಲ್ಲಿ ಕೆಲವೇ ದಿನಗಳ ಅತಿಥಿ. ಇಲ್ಲಿಂದ ಮುಂದಕ್ಕೆ ಪ್ರಭುವು ಆದೇಶ ಕೊಟ್ಟಲ್ಲಿಗೆ ನಾನು ಹೊರಡುವವನು. ಇಲ್ಲಿಗೆ ಖಾಯಂ ಆಗಿ ಪೂಜಾರಪ್ಪ ಬೇಕು. ಆತ ಒಪ್ಪಿದರೆ ಸರಿಯೇ ಸರಿ...." ಎನ್ನುತ್ತಾ ನಕ್ಕುಬಿಟ್ಟ.

ಇದೇ ಸಮಯ ಉಪಯೋಗಿಸಿ ಶ್ರೀಪ್ರಕಾಶ್ ಚಂದ್ ಶ್ರೀಮಲ್ ಮತ್ತು ಇತರೇ ಸಮಿತಿಯವರು ಸೂರು ಚಂದಾ ವಸೂಲಿ ಕಾರ್ಯಕ್ರಮ ಹಾಕಿಕೊಂಡರು. "ಈ ಊರಿನಲ್ಲಿ ಎಲ್ಲರಿಗೂ ಸೂರು ಕೊಡುವ ದೇವರಿಗೊಂದು ಸೂರಿಲ್ಲದ್ದಕ್ಕಿಂತ ಕೆಟ್ಟ ದುರ್ಗತಿ ಮನುಷ್ಯನಿಗೆ ಬರಲು ಸಾಧ್ಯವೇ?" ಎಂಬ ಪ್ರಶ್ನೆಯನ್ನೆತ್ತಿ ಹಣ ವಸೂಲಿ ಮಾಡಲು ಪ್ರಯತ್ನಿಸಿದರು. ಅದೇ ಸಮಯಕ್ಕೆ ಫಸಲು ಬರುವವರೆಗೂ ಸೂರು ಕಾರ್ಯಕ್ರಮವನ್ನು ಮುಂದೂಡಿ ಆಲಯವನ್ನು ಇದ್ದ ಸ್ಥಿತಿಯಲ್ಲೇ ಮೇಂಟೇನ್ ಮಾಡುವುದು ಎಂದು ಸಮಿತಿ ಠರಾವು ಮಾಡಿತು.

ಹೀಗಾದರೂ ಸಮಿತಿ ಎಡಬಿಡದ ತ್ರಿವಿಕ್ರಮನಂತೆ ಹಣ ಸಂಗ್ರಹಕ್ಕಾಗಿ ಪ್ರಯತ್ನ ಪಡುತ್ತಲೇ ಇತ್ತು. ಮುಖ್ಯವಾಗಿ ಹಣ ಸಂಗ್ರಹವಾದಷ್ಟು ಸಂಗ್ರಹ ಮಾಡಿಟ್ಟಿದ್ದರೆ - ಸೂರಿಗೆ ಬೇಕಾಗಬಹುದಾದ ದೊಡ್ಡ ರಖಮಿನ ಏರ್ಪಾಟು ಒಂದೇ ಸಮಯಕ್ಕೆ ಕಚ್ಚಲಾರದು ಎಂದು ಸಮಿತಿಯ ಯೋಚನೆಯಾಗಿತ್ತು. ಹೀಗೆ ಹೆಚ್ಚಿನ ಚಟುವಟಿಕೆ ಇಲ್ಲದಾಗ್ಯೂ ಒಂದಿಷ್ಟು ಚಿಲ್ಲರೆ ಹಣವನ್ನು ಸಮಿತಿ ಸೂರಿಗೆಂದು ಸಂಗ್ರಹಮಾಡಿಟ್ಟಿತ್ತು.


*
*
*
*

ಕೆಲದಿನಗಳಮಟ್ಟಿಗೆ ಈ ವಿಷಯದಲ್ಲಿ ವಿಚಿತ್ರ ಮೌನ ಆವರಿಸಿತ್ತು. ಊರಿನವರೆಲ್ಲಾ ಈ ಬಾರಿ ಬಂದ ಮೊದಲ ಮಳೆಯಿಂದಾಗಿ ಖುಷಿಗೊಂಡು ಶೇಂಗಾ ಬಿತ್ತುವ ಕೆಲಸದಲ್ಲಿ ನಿರತರಾದರು. ಈ ಬಾರಿ ಮಳೆ ಸರಿಯಾಗಿ ಬರುವ ಲಕ್ಷಣ ಕಾಣುತ್ತಿದ್ದಂತೆ ಆಲಯದಲ್ಲಿ ಜೋರು ಪೂಜೆಗಳೂ ನಡೆದುವು. ಮಳೆ ಸ್ವಲ್ಪ ಹೆಚ್ಚಾಗಿ ಸುರಿದ ದಿನ ಹೇಗೂ ಭಕ್ತರು ಬರುವುದಿಲ್ಲವೆಂದು ಆಲಯದ ಪೂಜಾರಪ್ಪ ರಜೆ ಒಗೆಯುತ್ತಿದ್ದರು. ಆದರೆ ಒಂದು ಮಾತನ್ನಂತೂ ಪೂಜಾರಪ್ಪ ಆಲಯ ನಿರ್ಮಾಣ ಸಮಿತಿಯವರಿಗೆ ಖಂಡಿತವಾಗಿ ಹೇಳಿಬಿಟ್ಟರು: "ಈ ಸಾರಿ, ಮಳೆಗಾಲದ ನಂತರ, ನೀವು ಆಲಯಕ್ಕೆ ಆರ್.ಸಿ.ಸಿ ಮಾಡಿಸದಿದ್ದರೆ ಪೂಜೆಯ ಕಾರ್ಯ ನಡೆಯುವುದು ಕಷ್ಟ. ಹೀಗೆ ನೀರು ಸೋರಿ ಒಳಗೆಲ್ಲಾ ರಾಡಿಯಾಗುವುದಾದರೆ ನನಗೆ ಸಂಭಾಳಿಸಲು ಆಗುವುದಿಲ್ಲ." ಇದೇ ಒಳ್ಳೆಯ ಸಮಯವೆಂದು ರೆಡ್ಡಪ್ಪ ಮಾಸ್ತರು ತಮ್ಮ ವಿಚಾರವನ್ನು ಛೂ ಬಿಟ್ಟು ನೋಡಿದರು: "ನಮ್ಮ ಕಾಕಾಲಿಗೆ ಒಳಹೋಗಲು ಅನುಮತಿಯಿತ್ತರೆ, ಅವನು ಎಲ್ಲವನ್ನೂ ಶುಭ್ರವಾಗಿ ಇಡುತ್ತಾನೆ." ಆದರೆ ಇದಕ್ಕೆ ರಾಮಮಂದಿರದ ಪೂಜಾರಪ್ಪ ಸುತರಾಂ ಒಪ್ಪಲಿಲ್ಲ.

ಬೆಳೆಯ ಕುಯಿಲು ಪ್ರಾರಂಭವಾಗುವುದಕ್ಕೆ ಎರಡು ಮೂರುವಾರಗಳ ಮುಂಚೆ ಒಂದು ದಿನ ರಾಮಮಂದಿರದ ಪೂಜಾರಪ್ಪ ಇಬ್ಬರು ಹೊಸಬರನ್ನು ಕರಕೂಂಡು ಸರಪಂಚರ ಮನೆಗೆ ಬಂದರು. ಸರಪಂಚರು ಅಂದು ಯಾವುದೋ ಕಾರವಾಗಿ ಬಹಳ ಪ್ರಸನ್ನಚಿತ್ತರಾಗಿದ್ದರು. ಎಲ್ಲವೂ ತಮ್ಮ ಲೆಕ್ಕಾಚಾರದಂತೆ ನಡೆಯುತ್ತಿರುವ ಹಾಗೆ ಸರಪಂಚರಿಗನ್ನಿಸಿತ್ತು. ಅದರಲ್ಲೂ ಮುಖ್ಯವಾಗಿ ಆಲಯದ ವಿಷಯದಿಂದಾಗಿ ಊರಲ್ಲಿ ಸ್ವಲ್ಟ ತಲ್ಲಣವಾಗಬಹುದೆಂದು ಎಣಿಸಿದ್ದ ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಯವರಿಗೆ ಏನೂ ಆಗದೆ ಎಲ್ಲ ಶಾಂತವಾಗಿದ್ದದ್ದು ವಿಶೇಷ ಖುಷಿ ತಂದಿತ್ತು.

ಇದೀಗ ರಾಮಮಂದಿರದ ಪೂಜಾರಪ್ಪ ಕರೆತಂದ ವ್ಯಕ್ತಿಗಳನ್ನು ಹಿಂದೆ ನೋಡಿದ್ದುಂಟೇ ಎಂದು ನೆನಪುಮಾಡಿಕೊಳ್ಳಲೆತ್ನಿಸಿ, ಪರಪರ ತಲೆಕೆರೆದುಕೊಂಡರು. ಆದರೆ ಏನೂ ನೆನಪಾಗಲಿಲ್ಲ.

"ಇವರು ರಾಮಮಂದಿರ ಪುನರ್ನಿರ್ಮಾಣ ಸಮಿತಿಯವರು. ನಿಮ್ಮ ಜತೆ ಕೆಲ ವಿಷಯ ಮಾತಾಡಲು ಬಂದಿದ್ದಾರೆ." ಎಂದೂ ಪೂಜಾರಪ್ಪ ಪರಿಚಯಿಸಿದರು.

"ಏನು ಶಾಸ್ತ್ರಿಗಳೇ ನಿಮ್ಮ ಮಂದಿರ ಚೆನ್ನಾಗಿಯೇ ಇದೆಯಲ್ಲಾ.. ಪುನರ್ನಿರ್ಮಾಣದ ಪ್ರಶ್ನೆ ಎಲ್ಲಿಂದ ಬಂತು? ಇದೇನು ಇದ್ದಕ್ಕಿದ್ದಂತೆ ... ಎಲ್ಲೆಲ್ಲೂ ಮಂದಿರದ ಮಾತೇನು?"

"ಅಲ್ಲಲ್ಲ ಸರಪಂಚರೇ ಇವರು ಪ್ರತಿನಿಧಿಸುತ್ತಿರುವುದು ಅಯೋಧ್ಯೆಯ ರಾಮಮಂದಿರದ ಪುನರ್ನಿರ್ಮಣ ಸಮಿತಿಯನ್ನ."

"ಓಹೋ, ಹಾಗೇನು? ಹೇಳಿ ಸ್ವಾಮಿ... ಎಲ್ಲ ಬಿಟ್ಟು ನಮ್ಮ ಹಳ್ಳಿಗೆ - ಅದೂ ನನ್ನ ಹತ್ತಿರ ಯಾಕೆ ಬಂದಿದ್ದೀರಿ? ನನಗೂ ನಿಮ್ಮ ರಾಜಕೀಯ ಐಡಿಯಾಲಜಿಗೂ ಯಾವುದೇ ದೂರದ ಸಂಬಂಧವೂ ಇಲ್ಲ... ಹೀಗಂತ ಗೊತ್ತಿದ್ದೂ ನನ್ನ ಹತ್ತಿರ ಬಂದಿದ್ದೀರಿ ಅಂದರೆ, ನನಗೆ ಆಶ್ಚರ್ಯ ಆಗ್ತಾ ಇದೆ." ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿ ಹುಬ್ಬುಗಂಟುಕ್ಕಿಯೇ ಹೇಳಿದರು.

"ನಿಮ್ಮ ಹತ್ತಿರ ಬರೋದಕ್ಕೆ ಕಾರಣವಿದೆ ಸರ್... ನೀವು ಊರಲ್ಲಿ ನಡೆಸುತ್ತಿರೋ ಆಲಯ ಪುನರ್ನಿರ್ಮಾಣದ ಕೆಲಸ ಸುತ್ತಮುತ್ತಲ ಏರಿಯಾದಲ್ಲೆಲ್ಲ ಪ್ರಸಿದ್ಧಿಯಾಗಿದೆ. ಹೀಗಾಗಿ ಅಯೋಧ್ಯೆಯ ಮಾತು ಬಂದಾಗ ಅಲ್ಲಿಗೆ ಕೊಡೋದರಲ್ಲೂ ನಿಮ್ಮ ಹಳ್ಳಿ ಮುಂಚೂಣಿಯಲ್ಲಿದ್ದರೆ, ನಿಮಗೂ, ನೀವು ನಾಯಕರಾಗಿರುವ ಹಳ್ಳಿಗೂ ಕೀರ್ತಿ ಬರುವುದಿಲ್ಲವೇ?"

"ಓಹೋ..... ಹೀಗೆ ಯೋಚನೆ ಮಾಡುತ್ತಿದ್ದೀರೋ?... ಹಾಗಾದರೆ ಎರಡು ವಿಷಯ ನೇರವಾಗಿ ಹೇಳಿಬಿಡುವೆ. ಒಂದು: ಆಲಯ ಪುನರ್ನಿರ್ಮಾಣಕ್ಕೆ ಒಂದು ಬೇರೆಯೇ ಸಮಿತಿಯಿದೆ. ಅದರಲ್ಲಿ ನಾನು ಯಾವ ಪಾತ್ರವನ್ನೂ ವಹಿಸಿಲ್ಲ. ಎರಡು: ನಾವುಗಳು ನಮ್ಮ ಹಳ್ಳಿಯ ಆಲಯ ಪುನರ್ನಿರ್ಮಾಣವನ್ನು ದೂಡ್ಡ ಇಷ್ಯೂ ಮಾಡಿಲ್ಲ. ಅಯೋಧ್ಯೆಗೂ ನಮ್ಮ ಹಳ್ಳಿಗೂ ಬೆಸುಗೆ ಹಾಕಬೇಡಿ. ರಾಜಕೀಯವಾಗಿ ನೀವು ಮಾಡಹೊರಟಿರೋ ಕೆಲಸಕ್ಕೆ ನನ್ನ ಸಿದ್ಧಾಂತ ಒಪ್ಪುವುದಿಲ್ಲ. ಹೀಗಾಗಿ ಈ ರಾಡಿಯಲ್ಲಿ ನನ್ನನ್ನ ಎಳೆದುಕೊಳ್ಳೋ ದುಷ್ಟತನವನ್ನ ಮಾತ್ರ ಮಾಡಬೇಡಿ. ಈ ವಿಷಯ ಚರ್ಚಿಸಬೇಕಾದರೆ - ನೀವು ಶ್ರೀಪ್ರಕಾಶ್ ಚಂದ್ ಶ್ರೀಮಲ್ ಅವರನ್ನೂ ಕಾಣಬಹುದು. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ."

ಅಪ್ಪಲರೆಡ್ಡಿ ಸ್ವಲ್ಪ ರೇಗಾಡಿ, ಒಳಗಒಳಗೇ ಬೇಯುತ್ತಾ ಬಂದವರನ್ನು ಓಡಿಸಿಬಿಟ್ಟ. ಅವರುಗಳು ಸರಪಂಚರ ಮಾತನ್ನು ಸ್ವಲ್ಪ ಗಂಭೀರವಾಗಿಯೇ ತೆಗೆದುಕೊಂಡು ಶ್ರೀಮಲ್ ನನ್ನು ನೋಡಲು ಹೋದರೆಂದು ನಂತರ ತಿಳಿದುಬಂತು. ಆದರೆ ಆ ನಂತರ ತಿಳಿದ ಅದಕ್ಕಿಂತ ಮುಖ್ಯವಾದ ವಿಷಯವೆಂದರೆ ಜಡಚರ್ಲದ ರಾಮಮಂದಿರದ ಪೂಜಾರಪ್ಪ ಕಾರ್ ಸೇವಾಕ್ಕೆಂದು ಅಯೋಧ್ಯೆಗೆ ಹೊರಟುನಿಂತಿದ್ದಾರೆಂಬ ವಿಷಯ.

ರಾಮಮಂದಿರದ ಪೂಜಾರಪ್ಪ ಅಯೋಧ್ಯೆಗೆ ಹೊರಟುನಿಂತದ್ದು ಅಪ್ಪಲರೆಡ್ಡಿ ಕಾಶಿವಿಶ್ವನಾಥರೆಡ್ಡಿಗೆ ಬಿಸಿ ತುಪ್ಪದಂತಹ ವಿಷಯವಾಯಿತು. ಒಂದು ರೀತಿಯಲ್ಲಿ ಅಡ್ಡಗೋಡೆಯಮೇಲೆ ಕೂತಿದ್ದ ಅಪ್ಪಲರೆಡ್ಡಿಗೆ ಯಾವುದಾದರೊಂದು ನಿಲುವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಲಿತ್ತು. ಎರಡೇ ದಿನಗಳಲ್ಲಿ ಹಳ್ಳಿಯಲ್ಲಿ ಇದು ಮನೆಮಾತಾಗಿಬಿಟ್ಟಿತ್ತು. ಒಂದು ಥರದಲ್ಲಿ ಪೂಜಾರಪ್ಪ ತಮ್ಮ ಊರಿನವನೇ ಆಗಿದ್ದರಿಂದ ಇದು ಹಳ್ಳಿಯ ಹೆಮ್ಮೆಯ ಸವಾಲಾಯಿತು. ಹೀಗಾಗಿ ಆ ಯುವಕರು ಹೇಳಿದ್ದನ್ನು ವಿರೋಧಿಸಿದೇ ಕೈಲಾದಷ್ಟು ಸಹಾಯ ಮಾಡುವುದು ಸರಿ ಎಂದೂ ಒಂದು ಹಂತದಲ್ಲಿ ಅನ್ನಿಸಿತ್ತು.

ವಿಷಯ ಹೀಗಿರುವಾಗ, ಈ ಬಗ್ಗೆ ಶ್ರೀಪ್ರಕಾಶ್ ಚಂದ್ ಶ್ರೀಮಲ್ ಏನು ಅಭಿಪ್ರಾಯ ಹೊಂದಿರುವನೋ ಎಂಬ ಕುತೂಹಲವುಂಟಾಗಿ, ಅಪ್ಪಲರೆಡ್ಡಿಯವರು ಆತನನ್ನು ಕರೆಸಿದರು.

"ನೋಡಿ, ನಮ್ಮ ಪೂಜಾರಪ್ಪನೇ ಈ ಕೆಲಸಕ್ಕೆ ಸ್ವತಃ ಹೋಗಬೇಕೆಂದು ನಿಂತಿರುವಾಗ ನಾವು ಮಾಡುವುದಾದರೂ ಏನು? ನಾವು ಬೇಡ ಅನ್ನೋದರಲ್ಲಿ ಅರ್ಥವಿಲ್ಲ.... ಕುಯಿಲಿನ ಸಮಯಕ್ಕೆ ಹೇಗೂ ಆಲಯವನ್ನು ಮುಚ್ಚಲೇ ಬೇಕಾಗುತ್ತೆ. ಈ ಮಧ್ಯೆ ಭಜಂತ್ರಿ ಪೂಜೆ ಮಾಡುತ್ತಾನೆಂದರೆ ಯಾರೂ ಒಪ್ಪೋದೂ ಇಲ್ಲ. ಇದನ್ನೆಲ್ಲ ನೋಡಿದರೆ ನಾವು ಈ ವರ್ಷ ನಮ್ಮ ಪ್ರೋಗ್ರಾಮನ್ನ ಕೈಬಿಟ್ಟು ಪೂಜಾರಪ್ಪನ ಗುಡ್ ವಿಲ್ ಪಡೆಯೋದೇ ಒಳ್ಳೇದು. ಲಾಂಗ್ ಟರ್ಮ್ ದೃಷ್ಟಿಯಿಂದ ನಮ್ಮ ಹಳ್ಳಿಗೆ ಪೂಜಾರಪ್ಪ ಮುಖ್ಯ ಆಗುತ್ತಾನೆ. ಈ ಭಜಂತ್ರಿ ಅನ್ನುವ ಭೈರಾಗಿಯ ಭರವಸೆಯಲ್ಲಿ ನಾವು ಜೀವಿಸುವುದಕ್ಕಾಗುವುದಿಲ್ಲ ಅಂತ ಈ ಬಡವನ ಅಭಿಪ್ರಾಯ."

ರಾಮಮಂದಿರದ ಪೂಜಾರಪ್ಪನನ್ನು ತಡೆಯುವುದು ಹೇಗೂ ಸಾಧ್ಯವಿರಲಿಲ್ಲ. ಹೀಗಾಗಿ ಕಳಿಸಿಕೊಟ್ಟಂತೆ ಮಾಡುವುದೇ ಸರಿ ಅಂತ ಅಪ್ಪಲರೆಡ್ಡಿಗೂ ಅನ್ನಿಸಿತು. ಜತೆಗೆ ಚುನಾವಣೆ ಹತ್ತಿರದಲ್ಲೇ ಇದ್ದುದರಿಂದ ಪೂಜಾರಪ್ಪನನ್ನು ಇಲ್ಲಿ ಉಳಿಸಿಕೊಂಡರೆ, ಅಯೋಧ್ಯೆಯ ಅಜೆಂಡಾ ಸಹ ಹಳ್ಳಿಯ ರಾಜಕೀಯಕ್ಕೆ ಸೇರಿಕೊಳ್ಳುವ ಸಾಧ್ಯತೆಯಿತ್ತು. ಅದಕ್ಕೂ ಇಲ್ಲಿಯ ಆಲಯಕ್ಕೂ ಇಲ್ಲದ ಸಂಬಂಧಗಳನ್ನು ಹಾಕಿ, ಹಳ್ಳಿಯ ಸಮತೋಲನವನ್ನು ಏರುಪೇರು ಮಾಡಲು ಆ ಯುವಕರು ಹೇಸುವವರಲ್ಲ. ಒಂದು ಥರದಲ್ಲಿ ಅವರ ನ್ಯೂಸೆನ್ಸ್ ವ್ಯಾಲ್ಯೂವನ್ನು ಕಡಿಮೆ ಮಾಡಲಾದರೂ ಈ ಬಗ್ಗೆ ಪೂಜಾರಪ್ಪನನ್ನು ಸಪೋರ್ಟ್ ಮಾಡುವುದು ಅವಶ್ಯ ಅನ್ನಿಸಿತು. ಸುತ್ತಮುತ್ತಲಿನ ಎಲ್ಲ ಹಳ್ಳಿಗಳಲ್ಲಿ ಮಂದಿರದ ರಾಜಕೀಯ ಪಸರಿಸುತ್ತರುವ ಘಟ್ಟದಲ್ಲಿ ಶುದ್ಧವಾಗಿದ್ದ ಈ ರಾಜಕೀಯ ತನ್ನ ಹಳ್ಳಿಗೆ ಇದು ಬರುವುದು ರೆಡ್ಡಿಗೆ ಖಂಡಿತವಾಗಿಯೂ ಇಷ್ಟವಿರಲಿಲ್ಲ.

ಅದು ಅಪ್ಪಲರೆಡ್ಡಿಯ ಖಾಸಗೀ ಅಭಿಪ್ರಾಯವಾದರೆ, ಇತ್ತ - ಈಗ ಹೀಗೆ ಎದ್ದು ನಿಂತಿರುವ ಅಯೋಧ್ಯೆಯ ಪ್ರಶ್ನೆಗೆ ಹಳ್ಳಿಯ ಕಡೆಯಿಂದ ಯಾವರೀತಿಯ ಯೋಗದಾನ ಹೋಗಬೇಕು ಎಂದು ಪಂಚಾಯಿತಿ, ಆಲಯ ಪುನರ್ನಿರ್ಮಾಣ ಸಮಿತಿಗಳಲ್ಲಿ ಚರ್ಚೆ ಪ್ರಾರಂಭವಾಯಿತು. ಏನು ಮಾಡಬಹುದೆಂಬ ಚರ್ಚೆಯಲ್ಲಿ ಹೊರಬಂದದ್ದೆಂದರೆ - "ನಮ್ಮ ಹಳ್ಳಿಯಿಂದ ಸಾಧ್ಯವಾದಷ್ಟು ಚಂದಾ ವಸೂಲಿ ಮಾಡಿ ಅಯೋಧ್ಯೆಗೆ ಕಳಿಸಬೇಕು - ಜಿಲ್ಲೆಯಲ್ಲೇ ಅತ್ಯಧಿಕ ಚಂದಾ ನಮ್ಮ ಹಳ್ಳಿಯಿಂದಲೇ ಹೋದರೆ, ಅದಕ್ಕಿಂತ ಹೆಮ್ಮೆಯ ವಿಚಾರ ಏನಿದ್ದೀತು?" ಎಂಬ ವಿಚಾರ ಮತ್ತು "ಅಯೋಧ್ಯೆಗೆ ಹೋಗಲಿರುವ ಕಾರ್ ಸೇವಕರಿಗೆ ಬೆಚ್ಚನೆಯ ಬಟ್ಟೆ, ಪ್ರಯಾಣಕ್ಕ, ದಾರಿ ಖರ್ಚಿಗೆ ದುಡ್ಡು ಕೊಡಬೇಕು" ಎಂಬ ವಿಚಾರ ಹೊರಬಂತು. ಹೋದ ವರ್ಷ ನಮ್ಮ ಹಳ್ಳಿಯಿಂದ ಅಯೋಧ್ಯೆಗೆ ಒಂದು ಗಾಡಿ ಇಟ್ಟಿಗೆ ಹೋಗಿತ್ತು. ಅದರ ಗತಿಯೇನಾಯಿತೆಂದು ಯಾರಿಗೂ ಗೊತ್ತಾಗಲಿಲ್ಲವಾದರೂ, ಈ ಬಾರಿ ಮಾತ್ರ ಇಟ್ಟಿಗೆಯಂತಹ ಭಾರಿ ವಸ್ತು ಬೇಡ, ಬದಲಿಗೆ ಮನೆಯಲ್ಲಿರುವ ಪ್ರತಿ ವ್ಯಕ್ತಿಗೆ ಒಂದು ರೂಪಾಯಿಯಂತೆ ಚಂದಾ ಕೊಟ್ಟು ಬಿಡಿ ಸಾಕು ಅಂತ ಅಯೋಧ್ಯಾ ಮಂದಿರ ನಿರ್ಮಾಣದ ಪ್ರತಿನಿಧಿಗಳು ಕೇಳಿಕೊಂಡಿದ್ದರು. ಹೀಗಾಗಿ ಈ ಬಾರಿ ಅಯೋಧ್ಯೆಗೆ ಹಣ ಬಿಟ್ಟು ಬೇರೇನೂ ಕಳಿಸುವಂತಿರಲಿಲಿ.

ಶ್ರೀಪ್ರಕಾಶ್ ಚಂದೇ ಶ್ರೀಮಲ್ ಗೆ ಹೊಸ ಚಂದಾ ಎತ್ತುವುದೂ ಒಂದು ಒಳ್ಳೆಯ ಕೆಲಸವಾಗಿ ಕಾಣಿಸಿತು. ಸಹಕಾರ ಸಂಘದ ಸಾಲ ತೀರಿಸಲು ಜನರ ಬಳಿ ಎಷ್ಟರ ಮಟ್ಟಿಗೆ ಹಣ ಕಡಿಮೆ ಆದರೆ ಅಷ್ಟೇ ಒಳ್ಳೆಯದಿತ್ತು. ಅಪ್ಪಲರೆಡ್ಡಿಗೂ ಊರಿನ ಆಲಯ, ಮತ್ತು ಅದರ ಜೊತೆ ಜೊತೆಗೆ ಬಂದ ಅಯೋಧ್ಯೆಯ ಮಂದಿರದಂತಹ ನಾಜೂಕು ವಿಷಯಗಳು ಅಜೆಂಡಾದಿಂದ ಎಷ್ಟು ಬೇಗ ಹೊರಹೋದರೆ ಅಷ್ಟು ಒಳ್ಳೆಯದು ಅನ್ನಿಸಿತು. ಎಂದಿನಂತೆ ಸಮಾಜವಾದದ ಬಗ್ಗೆ ಮಾತಾಡಿ ಚುನುವಣೆ ಗೆಲ್ಲಲ್ಲು ಸಾಧ್ಯವಾದರೆ - ಅದಕ್ಕಿಂತ ಸುಖ ಬೇರೇನು ಬೇಕು ಎಂದು ಯೋಚಿಸುತ್ತಾ ಕೈಚೆಲ್ಲಿ ಕೂತ.

ಅತ್ತ ಆಲಯ ಪುನರ್ನಿರ್ಮಾಣ ಸಮಿತಿಯವರು ಅಯೋಧ್ಯೆಯ ಬಗ್ಗೆ ನಿಲುವು ತಾಳಲು ಸಭೆ ಸೇರಿದರು. ಸಭೆಗೆ ಮುನ್ನ ಶ್ರೀಮಲ್ ಒಮ್ಮೆ ಅಪ್ಪಲರೆಡ್ಡಿಯವರನ್ನು ಕಂಡು ಬಂದ. ಅಂದಿನವರೆಗೆ ದೇನಸ್ಥಾನದ ಸೂರಿಗೆಂದು ಸುಮಾರು ಹದಿನೇಳು ಸಾವಿರ ರೂಪಾಯಿಗಳು ಚಂದಾ ರೂಪದಲ್ಲಿ ಶೇಖರಿಸಲಾಗಿತ್ತು. ಈ ಹಣದಲ್ಲಿ ಹೇಗೂ ಆಲಯಕ್ಕೊಂದು ಸೂರು ಹಾಕುವುದು ಸಾಧ್ಯವಿದ್ದಿಲ್ಲ. ಅದಕ್ಕೇ ಈ ಹಣವನ್ನು ಚಂದಾ ಎಂದು ಅಯೋಧ್ಯೆಗೆ ಕಳಿಸಿಬಿಡೋಣವೇ ಎಂದು ಸಮಿತಿಯ ಸದಸ್ಯರೊಬ್ಬರು ಪ್ರಸ್ತಾವಿಸಿದರು. "ಅದೇನೋ ಸರಿ, ಆದರೆ ಕಾಕಾ ಏನಾದರೂ ಕಾರ್ ಸೇವಾಗೆ ಹೋಗ್ತಾನಾಂತ ಮೊದಲು ಕೇಳಿಕೊಂಡು ಬಿಡಿ.. ಕಾಕಾ ಹೋಗೋದಾದರೆ, ಆಲಯ ಸಮಿತಿಯ ವತಿಯಿಂದ ಅವನನ್ನು ಅಯೋಧ್ಯೆಗೆ ಕಳಿಸಬಹುದು.." ಎಂದು ಮತ್ತೂಬ್ಬ ಸದಸ್ಯರು ಸೂಚಿಸಿದರು. "ಹೌದು, ಒಮ್ಮೆ ಆ ಭಜಂತ್ರಿಯನ್ನ ಕೇಳಿಬಿಡೋದು ಒಳ್ಳೇದು" ಅಂತ ಶ್ರೀಮಲ್ ಕೂಡಾ ಧ್ವನಿ ಸೇರಿಸಿದ.

ಕಾಕಾನನ್ನು ಸಭೆಯೆದುರಿಗೆ ಕರೆಸಲಾಯಿತು. ಕಾಕಾ ಭಾಷಣ ಬಿಗಿಯುತ್ತಲೇ ಬಂದ. ಬಂದು ಕೂಡಲೇ ಅಯೋಧ್ಯೆಯ ವಿಚಾರ ಅವನಿಗೆ ಹೇಳಿದರು. ಅಂದಿನವರೆಗೂ ಶಾಂತನಾಗಿ ಎಲ್ಲವನ್ನೂ ನೋಡುತ್ತಾ ಸುಮ್ಮನಿರುತ್ತಿದ್ದ ಕಾಕಾ ಅಂದೇಕೋ ವಿಪರೀತ ಸಿಡಿದುಬಿದ್ದ. ಹುಚ್ಚಾಪಟ್ಟೆ ರೇಗಾಡಿದ:

"ಎಲ್ಲರೂ ಸೂಳೇಮಕ್ಕಳು.. ಕಳ್ಳ ಸೂಳೆಮಕ್ಕಳು.. ಪ್ರಭುವಿನ ಆದೇಶ ಹೊತ್ತು ಇಲ್ಲಿ ಆಲಯ ನಿರ್ಮಾಣಕ್ಕೆಂದು ನಾನು ಬಂದಿದ್ದರೆ - ನನ್ನನ್ನು ಇಲ್ಲಿಂದ ಎಲ್ಲೋ ದೂರದ ಊರಿಗೆ ಸಾಗುಹಾಕಲು ಪಿತೂರಿ ನಡೆಸಿದ್ದೀರಾ? ನಾನು ಬಂದ ದಿನವೇ ಹೇಳಿರುವೆ: ನಾನು ಪ್ರಭುವಿನ ಆದೇಶದ ಮೇರೆಗೆ ನಡೆಯುವವನು. ಎರಡು ವರ್ಷಗಳ ಕಾಲದಲ್ಲಿ ಇಲ್ಲಿನ ಮಂದಿರ ನಿರ್ಮಾಣವಾಗದಿದ್ದರೆ - ಶಾಪ ಹಾಕಿ ಹೋಗುತ್ತೇನೆ ಎಂದೂ ಹೇಳಿದ್ದೇನೆ. ಈಗ ಮತ್ತೊಮ್ಮೆ ಹೇಳುವೆ - ಅಲ್ಲೆಲ್ಲೋ ಅಯೋಧ್ಯೆಗೆ ಹೋಗಲು ನನಗೆ ಪ್ರಭುವಿನ ಆದೇಶವಿಲ್ಲ. ನೀವುಗಳು ಎಂದಿಗೂ ಉದ್ಧಾರ ಆಗುವವರಲ್ಲ. ನಾನು ಒಂದಲ್ಲ ಒಂದು ದಿನ ಈ ಊರಿಗೆ ಶಾಪ ಹಾಕುವವನೇ."

ರೆಡ್ಡಪ್ಪ ಮಾಸ್ತರು ಕಾಕಾನ ಈ ರೌದ್ರಾವತಾರವನ್ನು ನೋಡಿ ಏನೂ ತೋರದವರಾಗಿ ಗೋಡೆಯತ್ತ ನೋಡಿದರು. "ಯಾರು ಬೇರೆಯವರಿಗಾಗಿ ಜೀವಿಸುವರೋ, ಅವರೇ ನಿಜವಾದ ಮಾನವರು" ಎಂಬ ಸೂಕ್ತಿ ಕಂಡಿತು. ಅದು ಕಂಡದ್ದೇ ಮಾಸ್ತರು ಮಾತು ಪ್ರಾರಂಭಿಸಿದರು - "ನೋಡಿ, ಮೇಲೆ ಬರೆದಿರೋ ಸೂಕ್ತಯಯ ಹಾಗೆ ತ್ಯಾಗ ಜೀವನ ನಡೆಸಿಕೊಂಡು ಬರುತ್ತಾ ಇರೋ ನಿಜ ಮಾನವ ಈ ಕಾಕಾ. ಅವನು ಹೇಳುವುದರಲ್ಲಿ ನಿಜದ ಅಂಶ ಇದೆ. ಎಂದೂ ಕಾಣಲಾಗದ ದೂರದ ಮಂದಿರಕ್ಕೆ ನಾವುಗಳು ಕಾಣಿಕೆ ಕಳಿಸೋದಕ್ಕಿಂತ ದಿವವೂ ಪೂಜಿಸೋ ಈ ದೇವರಿಗೊಂದು ಗತಿ ತೋರಿಸುವುದು ಒಳ್ಳೆಯದಲ್ಲವೇ? ಕಾಕಾನ ಮನಸ್ಸಿಗೆ ಇಷ್ಟು ನೋವು ಮಾಡಿ ಅವನ ಶಾಪ ಸ್ವೀಕರಿಸುವ ಸ್ಥಿತಿಗೆ ನಾವ್ಯಾಕೆ ಇಳೀಬೇಕು?"

"ಓ ಮಾಸ್ತರೇ..." ಕಾಕಾ ಗುಡುಗಿದ - "ನಿಮ್ಮ ಹಳ್ಳಿಯ ಕಥೆ ಚೆನ್ನಾಗಿ ಅರಿತವನು ನಾನು. ನೀವೂ ಈಗ ಅಲ್ಲಿ ಮೇಲೆ ಓದಿ ಹೇಳಿದ ಸೂಕ್ತಿ ಈ ಹಳ್ಳಿಯ ಹೆಂಗಸರಿಗೆ ಮಾತ್ರ ವರ್ತಿಸುತ್ತದೆ ಅಷ್ಟೇ. ಇಲ್ಲಿನ ಹೆಂಗಸರು ಬೇರೆಯವರಿಗಾಗಿಯೇ ಜೀವಿಸುವವರು. ಇಂಥ ಹಳ್ಳಿಯ ನಾಮರ್ದ ಗಂಡಸರಿಂದ ಗಂಡಸ್ತನ ನಿರೀಕ್ಷಿಸುವುದೇ ನಾನು ಮಾಡಿದ ತಪ್ಪು. ನೀವು ನಿಮ್ಮ ಕರ್ಮಕ್ಕನುಸಾರವಾಗಿ ಏನಾದರೂ ಮಾಡಿಕೊಳ್ಳಿ." ಎಂದು ಬುಸುಗುಡುತ್ತಾ ಅಲ್ಲಿಂದ ಹೊರಟುಬಿಟ್ಟ.

ಅವನು ಆ ಕಡೆ ಹೋದಂತೆ - ಸಮಿತಿಯ ಸದಸ್ಯರು ಏನೂ ಆಗಿಲ್ಲವೆಂಬಂತೆ ಮುಂದಿನ ಚರ್ಚೆಗೆ ಇಳಿದರು:

"ಹಾಗಾದರೆ ಈ ಭಜಂತ್ರಿ ಅಯೋಧ್ಯೆಗೆ ಹೋಗೋದಿಲ್ಲಾಂತ ಆಯಿತು. ಸರಿ ಹಾಗಾದರೆ... ನಾವು ನಮ್ಮ ಹಳ್ಳಿಯ ವತಿಯಿಂದ ರಾಮಮಂದಿರದ ಶಾಸ್ತ್ರಿಗಳನ್ನು ಕಳಿಸಿಕೊಡೋಣ. ಅವರ ಜೊತೆಗೆ ಆಲಯಕ್ಕೆಂದು ಸಂಗ್ರಹಿಸಿರೋ 17000 ರೂಪಾಯಿ ಚಂದಾ ಹಣವನ್ನೂ ಅಯೋಧ್ಯಗೆ ಕಳಿಸೋಣ. ಎಷ್ಟೇ ಆದರೂ ಆ ದೇವಸ್ಥಾನ ರಾಷ್ಟ್ರ ಮಟ್ಟದ ಖ್ಯಾತಿ ಗಳಿಸುವುದಲ್ಲವೇ. ಅದರಲ್ಲಿ ನಮ್ಮ ಅಳಿಲ ಕಾಣಿಕೆ ಇರುವುದೂ ಒಳ್ಳೆಯದು."

ಇಷ್ಟು ಮಾತಾದಾಗ ಪಾಪ, ರೆಡ್ಡಪ್ಪ ಮಾಸ್ತರಿಗೆ ಯಾಕೋ ತುಂಬಾ ಸಿಟ್ಟು ಬಂತು. ಸಮಿತಿಯ ಬೈಠಕ್ ನಿಂದ ಎದ್ದು ಹೋಗಬೇಕು ಅನ್ನಸಿದರೂ ಯಾಕೋ ದ್ವಂದ್ವ ತಡೆಯಿತು. ಇವರುಗಳು ಕಡೆಗೆ ಏನು ಠರಾವು ಮಾಡುತ್ತಾರೋ ನೋಡೇಬಿಡೋಣವೆಂದು ಅಲ್ಲೇ ಕೂತರು.

ಚರ್ಚೆ ಹೆಚ್ಚು ಹೊತ್ತು ಮುಂದುವರೆಯಲಿಲ್ಲ. ರಾಮಮಂದಿರದ ಶಾಸ್ತ್ರಿಗಳಿಗೆ ಒಂದು ಸಣ್ಣ ಸನ್ಮಾನ ಕಾರ್ಯಕ್ರಮ ಮಾಡಿ ಎಲ್ಲ ಹಣವನ್ನೂ ಅವರಿಗೆ ಕೊಡುವುದು - ದಾರಿ ಖರ್ಚು ನೋಡಿಕೊಂಡು ಮಿಕ್ಕ ರಖಮನ್ನು ಅವರು ಅಯೋಧ್ಯೆಯಲ್ಲಿ ಕಾಣಿಕೆಯಾಗಿ ಕೊಟ್ಟು ಬರುವುದೆಂದು ಠರಾವು ಆಯಿತು. ಜತೆಜತೆಗೆ, ಊರ ಶಿವಾಲಯದ ಕೆಲಸವನ್ನು ಒಂದು ವರ್ಷದ ಮಟ್ಟಿಗೆ ಸ್ಥಗಿತಗೊಳಿಸುವುದು, ಹಾಗೂ ಶಾಸ್ತ್ರಿಗಳು ಅಯೋಧ್ಯೆಗೆ ಹೊರಡುವವರೆಗೂ ಏನೇ ಚಂದಾ ಸೇರಿದರೂ, ಅವರೊಡನೆ ಕಳಿಸಿಕೊಡುವುದೆಂದೂ ಠರಾವು ಪಾಸಾಯಿತು.

ರೆಡ್ಡಪ್ಪ ಮಾಸ್ತರಿಗೆ ಕಡೆಗೂ ತಡೆಯಲು ಸಾಧ್ಯವಾಗದೇ ಬಾಯು ತೆರೆದರು:
"ಕನಿಷ್ಠ ಸನ್ಮಾನ ಕಾರ್ಯಕ್ರಮದಲ್ಲಾದರೂ ನಮ್ಮ ಕಾಕಾನಿಗೆ ಒಂದಿಷ್ಟು ಗೌರವ ಕೊಟ್ಟು ಒಂದು ಜೊತೆ ಹೊಸ ಬಟ್ಟೆ ಕೊಡಲು ಸಾಧ್ಯವೇ..... ಎಷ್ಟೆಂದರೂ ಈ ಎಲ್ಲಕ್ಕೂ ಮೂಲ ಕಾರಣಕರ್ತ ಅವನೇ ತಾನೇ?"

ಈ ಬಗ್ಗೆ ಒಂದಿಷ್ಟು ಚರ್ಚೆ ಆಯಿತಾದರೂ ಮಾಸ್ತರ ಪ್ರಸ್ತಾಪಕ್ಕೆ ಒಪ್ಪಿಗೆ ದೊರೆಯಿತು. ನಾಲ್ಕು ದಿನಗಳ ನಂತರ ಸನ್ಮಾನ ಮಾಡುವುದೆಂದೂ ಇದಕ್ಕೆ ಹೈದರಾಬಾದಿನಿಂದ ಸನಾತನ ಸ್ವಾಮಿಗಳನ್ನು ಮುಖ್ಯ ಅತಿಥಿಯಾಗಿ ಕರೆಸಬೇಕೆಂದೂ ತೀರ್ಮಾನ ಮಾಡಲಾಯಿತು.

ನಾಲ್ಕು ದಿನಗಳ ನಂತರ ಸನ್ಮಾನ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ಆದರೆ ರೆಡ್ಡಪ್ಪ ಮಾಸ್ತರಿಗೆ ತುಂಬಾ ಬೇಸರವಾಗುವ ಘಟನೆಯೂ ಅಂದೇ ನಡೆಯಲಿತ್ತು. ವೇದಿಕೆಯ ಮೇಲಿಂದ ನಾಲ್ಕಾರು ಬಾರಿ ಮೋಹನ ಪ್ರಭುದಾಸ ಭಜಂತ್ರಿಯ ಹೆಸರು ಕರೆದರೂ ಅವನ ಪತ್ತೆಯಿರಲಿಲ್ಲ. ರಾಮಮಂದಿರದ ಪೂಜಾರಪ್ಪನಿಗೆ ಒಂದೇ ವೇದಿಕೆಯ ಮೇಲೆ ತನಗೂ ಭಜಂತ್ರಿಗೂ ಸನ್ಮಾನ ಆಗಲಿಲ್ಲವಲ್ಲ ಎಂದು ಒಳಗೊಳಗೇ ಸಮಾಧಾನವಾಯಿತು. ಕಾರ್ಯಕ್ರಮ ಮುಗಿದ ಮೇಲೆ ಸಣ್ಣ ಹುಡುಗನೊಬ್ಬ ಬಂದು ತಾನು ಕಾಕಾನನ್ನು ಮುಂಜಾನೆ ಅಷ್ಟು ಹೊತ್ತಿಗೇ ಊರಿಗೆಲ್ಲ ಶಾಪ ಹಾಕುತ್ತಾ ದಕ್ಷಿಣದ ದಿಕ್ಕಿನಲ್ಲಿ ನಡೆದದ್ದನ್ನು ಕಂಡೆ ಎಂದು ವರದಿ ಮಾಡಿದ. ಬಯಲಿಗೆ ಕೂತದ್ದರಿಂದ ಕಾಕಾನನ್ನು ಮಾತನಾಡಿಸಲೂ ಅವನಿಗೆ ಸಾಧ್ಯ ಆಗಲಿಲ್ಲವಂತೆ.

ಅಂದು ರಾತ್ರೆ ವಿಪರೀತವಾಗಿ ಮಳೆ ಸುರಿದು ಆಲಯದ ತಡಿಕೆ, ಹಾಗೂ ಹೊಸಗೋಡೆ ಕುಸಿದು ಬಿತ್ತು. ಈ ಸುದ್ದಿ ಕೇಳಿ ಅಪ್ಪಲರೆಡ್ಡಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದಾಯಿತಾದರೂ ಒಳಗೊಳಗೇ ಸ್ವಲ್ಪ ಖುಷಿಯಾಯಿತು.

"ಸದ್ಯ... ಊರಿಗೆ ದೇವರು, ಆಲಯ, ಮಂದಿರ, ಜಾತಿ, ಪಂಥ, ಎಂಬಂಥ ಶನಿ ಈ ಪೆಟ್ಟಿನಿಂದಾಗಿ ಬಿಟ್ಟು ಹೋದರೆ ಅಷ್ಟೇ ಒಳ್ಳೆಯದು. ಮತ್ತೆಂದೂ ಈ ಮಂದಿರದ ಸುದ್ದಿ ಏಳದಿದ್ದರೆ ಒಂದು ಕರಾಳ ಅಧ್ಯಾಯ ಮುಗಿದಂತೆ." ಅಂತ ಅಂದುಕೊಂಡ.

ಬಳೆಯೆಲ್ಲಾ ಮುಳುಗಿ ನಾಶವಾಗುವ ಸ್ಥಿತಿಯಲ್ಲಿದ್ದುದರಿಂದ ಶ್ರೀಮಲ್-ಗೂ ಒಂದು ಥರ ಸಂತೋಷ ಆಯಿತು. ದೇವರದಯದಿಂದ ಈ ಬಾರಿಯಾದರೂ ಜನ ತನ್ನ ಬಳಿಗೆ ವಾಪಸ್ ಬರುತ್ತಾರೆ ಅಂದುಕೊಂಡು ಮನಸ್ಸಿನಲ್ಲೇ ದೇವರಿಗೊಂದು ನಮಸ್ಕಾರ ಹಾಕಿದ.

ರೆಡ್ಡಪ್ಪ ಮಾಸ್ತರಿಗೆ ಮಾತ್ರ ಶಾಲೆಯ ಆವರಣ ಭಣಭಣಗುಟ್ಟುತ್ತಿತ್ತು. ಮಕ್ಕಳು ಮತ್ತೆ ಧ್ವಜಸ್ಥಂಬದೆದುರು ನಿಂತು ದೇಶಭಕ್ತಿಗೀತಿಯನ್ನೇ ಹಾಡಲಿ ಎಂದು ಮಾಸ್ತರು ಆದೇಶ ಇತ್ತರು. ಪ್ರಿಯವಾದದ್ದನ್ನೇನೋ ಕಳಕೊಂಡಂತೆ ಶಾಲೆಗೋ ನಿತ್ಯ ಬರುತ್ತಿದ್ದವರಿಗೆ ಅನ್ನಿಸಿತು. ಅದು ಕಾಕಾನ ಅಸ್ತಿತ್ವವೋ ಅಥವಾ ದೇವಾಲಯದ ಚಟುವಟಿಕೆಯೋ ಬಿಡಿಸಿ ಹೇಳುವುದು ಕಷ್ಟವಿತ್ತು. ಕಾಕಾ ಅಷ್ಟರ ಮಟ್ಟಿಗೆ ಆಲಯದ ಒಂದು ಭಾಗವಾಗಿಬಿಟ್ಟಿದ್ದ.

ಶಾಲೆಯ ಆವರಣದಲ್ಲಿ ಸ್ವಲ್ಪ ನೀರು ನಿಂತು ಆಲಯದ ಸುತ್ತ ರಾಡಿಯಾಗಿತ್ತು. ಏನು ಮಾಡುವುದೋ ತೋರದ ರೆಡ್ಡಪ್ಪ ಮಾಸ್ತರು ಕೆಳಗೆ ಬಿದ್ದ ಇಟ್ಟಿಗೆಯ ರಾಶಿಯಿಂದ ಒಂದೊಂದೇ ಇಟ್ಟಿಗೆ ಜೋಡಿಸತೊಡಗಿದರು. ದಿನವೂ ನಾಲ್ಕು ಹುಡುಗರನ್ನ ಈ ಕೆಲಸಕ್ಕೆ ಹಾಕಿದರೆ ಒಂದು ವಾರದಲ್ಲಿ ಶಿವಲಿಂಗದ ಸುತ್ತಲಿನ ಜಾಗ ಶುಭ್ರವಾದೀತು ಅಂತ ಅವರ ಮನಸ್ಸು ಲೆಕ್ಕ ಹಾಕುತ್ತಿತ್ತು.

ಆಗಸ್ಟ್ 1994.

Wednesday, December 16, 2009

ಅವರವರ ಸತ್ಯ




"Grant an idea or belief to be true.
What concrete difference will its being
true make in anyone's actual life?
How will the truth be realised?
What experiences will be
different if the belief were false?
What, in short is the truth's cash
value in experimental terms?"

William James in Pragmatism


ಭಾಸ್ಕರರಾಯರು ಚಿಂತಿತರಾದರು.

ಅದೇನೂ ಹೊಸ ವಿಷಯವಾಗಿರಲಿಲ್ಲ. ಮೈಸೂರು ಬೆಂಗಳೂರುಗಳ ನಡುವೆ ಎಡತಾಕುವಾಗಲೂ, ಹಾಗೂ ಈಗಲೂ ಮಕ್ಕಳ ನಡುವೆ ಹಂಚಿಹೋದ ಭಾಸ್ಕರರಾಯರು ಈಗೀಗ ಎಲ್ಲಕ್ಕೂ ಮೂಕ ಪ್ರೇಕ್ಷಕರು. ಸದಾನಿರಂತರ ಚಿಂತಿತರು. ಎಪ್ಪತ್ತೈದರ ವಯಸ್ಸು ಸಾಮಾನ್ಯದ್ದೇನೂ ಅಲ್ಲ. ಅದು ಚಿಂತಿಸುವ ಚಿಂತೆಯುಂಟುಮಾಡುವ ವಯಸ್ಸು.

ಈ ಶ್ರಾವಣನಿಗೆ ಮೊದಲೇ ಹೆಳಿದ್ದುಂಟು. ಬೇಡವೆಂದು. ಈ ಹೈದರಾಬಾದು ಬೇಡಲೇ ಬೇಡ ಎಂದು. ಎಲ್ಲೋ ದೂರದೂರಿನಲ್ಲಿ ತೆಲುಗರ ತುರುಕರ ನಡುವೆ ಹಂಚಿಹೋಗಿ "ಪರದೇಶಿ" ಆಗುವುದು ಬೇಡ - ಅದರಲ್ಲೂ ಬೆಂಗಳೂರು ಮೈಸೂರುಗಳಲ್ಲಿ ಬೆಚ್ಚನೆಯ ಸರಕಾರಿ ಕಾರಕೂನಕಿ ದೊರೆಯುವಾಗ ಸಿಕ್ಕಸಿಕ್ಕಲ್ಲೆಲ್ಲ ಓಡಾಡುವುದು ಬೇಡವೆಂದು ಟಿಪಿಕಲ್ ಹಳೇ ಮೈಸೂರು ಶೈಲಿಯಲ್ಲಿ ಹೇಳಿದರೂ ಅವನು ಕೇಳಿರಲಿಲ್ಲ. ಬಂದೇ ಬಂದು ಇಲ್ಲೊಂದು ಮನೆಯ ಮಾಡಿದ. ಅದೂ ಎಲ್ಲಿ, ಚಾದರಘಾಟ್ ಸೇತುವೆ ದಾಟಿ ಹಳೇ ನಗರಕ್ಕಂಟಿನಿಂತ ಹೊಸ ಪ್ರಾಂತವೊಂದರಲ್ಲಿ.

ಹೀಗೆಲ್ಲಾ ದೂರದ ಮಗನನ್ನು ನೆನೆಸಿ ನೊಂದು ಕುಳಿತಿದ್ದ ಭಾಸ್ಕರರಾಯರು ಇದೀಗ - ಕೆಲದಿನಗಳ ಮಟ್ಟಿಗೆಂದು - ಅವನಲ್ಲಿಗೇ ಬಂದಿದ್ದರು. ಹಾಗೂ ಬಂದ ದಿನದಿಂದಲೇ ಪ್ರತಿದಿನವೂ ವಾಪಸ್ಸು ಹೋಗುವ ಆಸೆಯಲ್ಲಿ ಸೂಟ್‍ಕೇಸ್ ಕಟ್ಟುವ ಕೆಲಸ ಪ್ರಾರಂಭ ಮಾಡಿದ್ದರು. ಸರ್ವೀಸಿನಲ್ಲಿದ್ದಾಗಲೂ ಅಷ್ಟೇ - ಯಾವುದಾದರೂ ಊರಿಗೆ ವರ್ಗವಾದ ಕೂಡಲೇ ಭಾಸ್ಕರರಾಯರು ರುಜು ಹಾಕುತ್ತಿದ್ದ ಮೊದಲ ಕಾಗದವೆಂದರೆ - ಮೈಸೂರಿಗೆ ಮರುವರ್ಗ ಕೋರುವ ಅರ್ಜಿ! ಹೀಗಾಗಿ ಈ ಪರಕೀಯತೆ ಅವರಿಗೆ ಹೊಸದೇನೂ ಅಲ್ಲ. ಹಾಗೆಯೇ ಇದನ್ನು ಬಿಟ್ಟು ಓಡಿ, ಆ ಮೂಲಕ ವಿಜಯ ಸಾಧಿಸುವ ಆಶಾವಾದವೂ ಹೊಸದಾಗಿರಲಿಲ್ಲ.
ಆಗ, ಸೇತುವೆಯಾಚೆಯ ಅಕಬರಬಾಗಿನಲ್ಲಿ ಮನೆಮಾಡಿದಾಗಲೇ ಇಲ್ಲಿನ ಒಂಟಿತನ ಖಾಲಿತನ ಭಾಸ್ಕರರಾಯರಿಗೆ ಬೇಸರ ತರಿಸಿತ್ತು. ಅವನಿಲ್ಲಿ ಮನೆ ಮಾಡಿದಾಗ ಸುತ್ತಮುತ್ತ ಒಂದು ಮನೆಯೂ ಇದ್ದಿದ್ದಿಲ್ಲ. ಅದು ಹದಿನೈದು ವರ್ಷಗಳಿಗೂ ಹಿಂದಿನ ಮಾತು. ಕಡೆಗೆ ಮನಸ್ಸಿಗೊಂದು ಧೈರ್ಯದ ಭಾವನೆ ನೀಡುವ ಕಾಂಪೌಂಡೂ ಮನೆಯ ಸುತ್ತ ಇರಲಿಲ್ಲ. ಆದರೂ ಆಗ ಈ ಎಲ್ಲ ವಿಷಯಗಳು ರಾಯರನ್ನು ಆಳವಾಗಿ ಕಲಕಿರಲಿಲ್ಲ ಎಂದು ಈಗ ಯೋಚಿಸಿದಾಗ ಅನ್ನಿಸುತ್ತದೆ. ಕಾರಣ:ಆಗಿನ್ನೂ ಭಾಸ್ಕರರಾಯರು ಸರ್ವೀಸಿನಲ್ಲಿದ್ದಂತೆ ನೆನೆಪು. ಇದೀಗ ಅವರು ನಿವೃತ್ತಿ ತಂದ ಅನೇಕ ತೊಂದರೆಗಳಲ್ಲಿ ತಮ್ಮನ್ನು ತಾವೇ ಸಿಲುಕಿಸಿಕೊಂಡಿದ್ದಾರೆ. ಇರುವ ಮೂರು ಮಕ್ಕಳ ನಡುವೆ ಹಂಚಿಹೋಗಿರುವುದು, ’ಅನಿಕೇತನ’ನಾಗಿ ಮಗನಿಂದ ಮಗನಿಗೆ, ಊರಿಂದ ಊರಿಗೆ ಪ್ರಯಾಣ ಬೆಳೆಸಿ ಇಳಿವಯಸ್ಸಿನ ಸಕಲ ಕಷ್ಟಗಳನ್ನೂ ಅನುಭವಿಸುತ್ತಿದ್ದಾರೆ. ಎಪ್ಪತ್ತೈದೆಂದರೆ, ತಾಪತ್ರಯವೂ ಅಷ್ಟೇ. ವಯಸ್ಸಿಗೊಂದೊಂದು ವರ್ಷ ಸೇರಿದಂತೆ, ಒಂದೊಂದು ತೊಂದರೆ, ಒಂದೊಂದು ಹೊಸ ರೋಗ, ಹೊಸ ಮಾತ್ರೆ, ಹೊಸ ಚಿಂತೆ.... ಹಳೆತೆಂದರೆ ದೇಹವೊಂದೇ.

***

ಅಪ್ಪ ಬಂದಂದಿನಿಂದಲೂ ಶ್ರಾವಣ ಅವರ ಬಗ್ಗೆ ಅನೇಕ ಬಾರಿ ಯೋಚಿಸಿದ್ದಾನೆ. ಸುಮ್ಮನೆ ಮೌನವಾಗಿ ಪುಸ್ತಕ ಓದುವ ಅಪ್ಪನಿಗೆ ಕಾಲಹರಣಕ್ಕಾಗಿ ಏನಾದರೂ ಒದಗಿಸಬೇಕು. ಮೈಸೂರಿನಿಂದ ಇಲ್ಲಿಗೆ ಬಂದಾಗಲೆಲ್ಲ ಅಪ್ಪ ಹೀಗೇ. ಏಕೋ ವಿಲಿವಿಲಿ ಒದ್ದಾಡುತ್ತಾರೆ. ಆದರೂ, ಎಷ್ಟುದಿನವೆಂದು ಅಪ್ಪನನ್ನು ಮಹೇಶನ ಬಳಿಯೇ ಬಿಟ್ಟಿರುವುದು. ತನ್ನ ಜವಾಬ್ದಾರಿ ಇಲ್ಲವೇ? ಹಾಗೆ ನೋಡಿದರೆ ಅಪ್ಪ ಎಂದಿಗೂ ಯಾವ ಮಕ್ಕಳಿಗೂ ತೊಂದರೆ ಕೊಟ್ಟವರೇ ಅಲ್ಲ. ಅವರಿಗೆ ಈ ತನ್ನ ಮನೆಯಲ್ಲಿರುವುದಕ್ಕೆ ಇಷ್ಟವೇ ಆದರೂ, ಅಕಬರಬಾಗಿನ ವಾತಾವರಣ ಹಿಡಿಸುವುದಿಲ್ಲ ಎನ್ನಿಸುತ್ತದೆ. ಅಪ್ಪ ಬಂದರೆ ಅವರಿಗೂ ನೆಮ್ಮದಿಯಿರಲೆಂದೇ ತಿರುಮಲಗಿರಿಯಲ್ಲಿ ತಾನೊಂದು ಸೈಟು ಕೊಂಡದ್ದೂ ಆಗಿದೆ. ಸೈಟು ಕೊಳ್ಳಲು ಅಪ್ಪ ಒಂದೇ ಕಾರಣವಲ್ಲವಾದರೂ ಆ ನಿರ್ಧಾರ ಮಾಡಿದಾಗ ಅಪ್ಪ ತನ್ನ ಮನಸ್ಸಿನಲ್ಲಿದ್ದದ್ದು ನಿಜ. ಈಗ ಹೇಗಾದರೂ ಮಾಡಿ ಅಲ್ಲೊಂದು ಮನೆ ಕಟ್ಟಿಬಿಟ್ಟರೆ, ಸ್ವಲ್ಪ ಶಾಂತಿಯಿಂದಿರಬಹುದು. ಜನ ಕಮ್ಮಿಯಿದ್ದಷ್ಟೂ ಮೈಸೂರಿನ ವಾತಾವರಣಕ್ಕೆ ಹತ್ತಿರವಾಗುವುದೆಂದು ಶ್ರಾವಣ ಭಾವಿಸಿದ್ದಾನೆ. ಆಗಾಗ ಅನ್ನಿಸುತ್ತದೆ - ಈ ಅಕಬರಬಾಗಿನಲ್ಲಿ ಮನೆ ಮಾಡುವುದಕ್ಕೆ ಮೊದಲು ಈ ಎಲ್ಲ ಆಯಾಮಗಳನ್ನೂ ಯೋಚಿಸಬೇಕಿತ್ತು ಎಂದು. ಆದರೂ ಇದನ್ನು ಕೊಂಡಾಗ ಕೈಲಿದ್ದ ಹಣದಲ್ಲಿ ಬೇರೇನು ಮಾಡಬಹುದಿತ್ತು ಎಂಬ ಸಮಜಾಯಿಷಿಯ ಸಮಾಧಾನವನ್ನೂ ಶ್ರಾವಣ ತನಗೆ ತಾನೇ ಹೇಳಿಕೊಳ್ಳುವನು. ಈ ಬಾರಿ ಸಮಯವಾದಾಗ, ಅಪ್ಪನ ಮೂಡನ್ನು ನೋಡಿ ಎಲ್ಲವನ್ನೂ ವಿವರಿಸಿ ಹೇಳಬೇಕು. ಚಿಂತೆ ಮಾಡಬೇಡ ಎಂದೂ. ಈ ಮನೆಯನ್ನು ಖಾಲಿ ಮಾಡುವು ವಿಷಯ ಅವರಿಗೆ ಸಾಕಷ್ಟು ಸಮಾಧಾನವನ್ನು ತಂದೀತು. ಆದರೂ ಈಚೀಚೆಗೇಕೋ ಅಪ್ಪನೊಂದಿಗೆ ಸಂವಹನವೇ ಸಾಧ್ಯವಾಗುತ್ತಿಲ್ಲ ಎಂದು ಅನ್ನಿಸುತ್ತದೆ. ತಾನು ಹೇಳಿದ್ದನ್ನು ಅಪ್ಪ ಅನುಮಾನದ ದೃಷ್ಟಿಯಿಅಂದ ನೋಡುತ್ತಾರೆ ಎಂಬ ಅನುಮಾನವೇ ಶ್ರಾವಣನನ್ನು ಆವರಿಸಿಬಿಟ್ಟಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ; ಹಿಂದೆ ಅಪ್ಪ ಹೇಳಿದ ಒಂದು ಮಾತಿಗೂ ತಾನು ಸೀರಿಯಸ್ಸಾಗಿ ಕಿವಿಗೊಟ್ಟಿಲ್ಲ. ಈ ಮನೆಯನ್ನು ಕೊಡಿಸಿದ ಷಫೀಕ್ ಸಾಬರ ನೆರವಿನಿಂದಲೇ ಇದು ಮಾರಾಟವೂ ಆಗಿಬಿಟ್ಟಿರೆ - ಹೊಸ ಮನೆಯೊಂದನ್ನು ನಿರ್ಮಿಸಬಹುದೆಂದೆಲ್ಲಾ ಶ್ರಾವಣ ಕನಸು ಹೆಣೆಯುತ್ತಾನೆ. ಅಪ್ಪ ಈಚೀಚೆಗೆ ಯಾಕೋ ಜನರನ್ನು ಕಂಡರೆ ಅಂಜಿ ರೂಮಿಗೋಡುತ್ತಾರೆ. ಯಾಕೋ ಕ್ಲಾಸ್ಟ್ರೋಫೊಬಿಕ್ ಆಗುತ್ತಿದ್ದಾರೆ ಎನ್ನಿಸುವ ಅವರ ವರ್ತನೆ ತನಗರ್ಥವಾಗಿಲ್ಲ. ಬಹುಶಃ ಇದಕ್ಕೆಲ್ಲ ಹೊಸಮನೆಯೇ ಉತ್ತರ ಎಂದು ಕನಸುವ ಶ್ರಾವಣನಿಗೆ ತಾನು ನಲವತ್ತು ದಾಟಿದ ನಂತರವೂ ಇನ್ನೂ ಕನಸು ಕಟ್ಟುವ ಕೆಲಸವನ್ನು ಬಿಟ್ಟಿಲ್ಲವಲ್ಲ ಎಂದು ನೆನಪಾದಾಗ ನಗೆಯುಕ್ಕಿ ಅದು ತನ್ನ್ ಯೌವನ ಇನ್ನೂ ಬತ್ತಿಲ್ಲ ಎಂಬುದರ ಸಂಕೇತವಿರಬಹುದು ಅನ್ನಿಸಿ ಅತೀವ ಆನಂದವೂ ಆಗುವುದು.

ಆದರೆ ಇದೀಗ ಭಾಸ್ಕರರಾಯರ ಚಿಂತೆಯ ವಿಷಯ ಇಂತೆಂದು ಹೇಳುವುದು ಕಷ್ಟವಿತ್ತು. ಅವರಿಗೆ ಆಗಾಗ ಅನಿಸುತ್ತದೆ: ಹೀಗಾಗಬಾರದಿತ್ತು ಎಂದು. ಅಥವಾ ಅದು ಹೀಗೆಯೇ ಆಗುವುದಿತ್ತೇನೋ. ಎಲ್ಲವೂ ಹುಟ್ಟಿನಿಂದ ಪಡೆದು ಬಂದದ್ದೆಂಬ ವಿಧಿವಿಲಾಸವಾದವನ್ನು ಮೈಗೂಡಿಸಿಕೊಂಡು ನಿರ್ಲಿಪ್ತವಾಗಿದ್ದುಬಿಡುವುದೂ ಸರಳವಾಗಿರಲಿಲ್ಲ. ಈಚೀಚೆಗೆ ಬಿಡಿಸಿಕೊಳ್ಳಲು ಸಾಧ್ಯವೇ ಆಗದ ದುರಭ್ಯಾಸವೊಂತು ಅಂಟಿಕೊಂಡಿದೆ. ಹಿಂದೆ ಅಜ್ಜ ಬಂದು "ಏಳು ಮುದ್ದಿನ ಗಿಣಿಯೆ ಏಳು ಮಾತಿನ ಖಣಿಯೆ ಏಳೂ ಬೆಳಗಾಯಿತು" ಎಂದು ಎಬ್ಬಿಸುತ್ತಿದ್ದ ಬಾಲ್ಯದ ನೆನಪು ಈಗ ನೆನಪು ಮಾತ್ರ. ಈಗ ಹಾಗೆ ಮೊಮ್ಮಗನನ್ನು ಎಬ್ಬಿಸುವುದೂ ಸಾಧ್ಯವಿಲ್ಲ! ರಾತ್ರೆ ನಿದ್ರೆ ಬರುವುದೂ ತಡ.. ಅದೂ ಸರಿಯಾಗಿ ಬರುವುದಿಲ್ಲ. ಎಲ್ಲರೂ ದೂರದರ್ಶನ ನೋಡಿ ರಾತ್ರೆ ಹನ್ನೂಂದಕ್ಕೆ ಹಾಲು ಸುರಿವ ಹಾಲಿನವನೊಂದಿಗೆ ರಾಜಕೀಯ ಚರ್ಚಿಸಿ ನಂತರ ದೀಪ ನಂದಿಸಿ ಮಲಗುವವರೆಗೂ ಏನೂ ತೋಚುವುದಿಲ್ಲ. ರಾತ್ರೋ ರಾತ್ರಿ ಹಾಲು ಸುರಿಯುವುದೂ ಈ ಅಕಬರಬಾಗಿಗೇ ಪ್ರತ್ಯೇಕವೆನ್ನಿಸುತ್ತದೆ. ಅದನ್ನೇ ದೊನವೂ ಚಕಿತರಾಗಿ ಯೋಚಿಸುವ ರಾಯರಿಗೆ ಮಲಗಿದ ನಂತರವೂ ನಿದ್ರೆ ಸರಳವಾಗಿ ಬರುವುದೆಂದೇನೂ ಅಲ್ಲ! ಯಾವಾಗಲೋ ಸಮಯ ತಿಳಿಯದೆಯೇ ಕಣ್ಣಿಗೆ ರೆಪ್ಪೆ ಅಂಟುವುದು. ಆ ನಂತರ ಏಳುವುದು ಮುಂಜಾನೆ ಯಾವಾಗಲೋ.. ಎದ್ದ ಮೇಲೂ ಒಂದು ಥರದ ಮೌನ. ಮಾತಿಗೆ ಅವಕಾಶವೇ ಇಲ್ಲ. ಮುದುಕನ ಮಾತನ್ನು ಕೇಳುವ, ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ್ದು ಬೆಳಗಿಗಷ್ಟೇ ಸೀಮಿತವೂ ಅಲ್ಲ.

ಹಿಂದಿನ ಮನೆಯ ರಂಗಾರೆಡ್ಡಿ ಈಗ ಭಾಸ್ಕರರಾಯರ ಚಿಂತೆಗೆ ಕಾರಣರದ ಅನೇಕರಲ್ಲೊಬ್ಬನಿರಬಹುದು. ಅಥವಾ ಅದು ಪಕ್ಕದ ಮನೆಯ ಷಫೀಕ್ ಅಲಿ ಆಗಲೀ, ಅಡ್ವೊಕೇಟ್ ಸುಬ್ಬಾರಾವು ಆಗಲೀ, ಸ್ವತಃ ತಮ್ಮ ಮೊಮ್ಮಗನೇ ಆಗಲೀ ಇರಬಹುದು. ತಮ್ಮ ಮಗ ಶ್ರಾವಣನೇನೂ ಸುಮ್ಮನಿರುವ ಪೈಕಿ ಅಲ್ಲ. ಏನಾದರೊಂದು ಕಾರುಬಾರು ಮಾಡುತ್ತಲೇ ಇರುವ ಪಿಪೀಲಿಕ. ಹೀಗಾಗಿ ಭಾಸ್ಕರರಾಯರ ಮನಸ್ಸು ಸದಾ ಜಾಗೃತವಾಗಿರಲು ಅವನೊಂದಿದಿನ ವಾಸ್ತವ್ಯವೇ ಸಾಕಿತ್ತು.

ಈಚೆಗಷ್ಟೇ ಹಿಂದಿನ ಮನೆಯ ರಂಗಾರೆಡ್ಡಿ ನೇರವಾಗಿ ಶ್ರಾವಣನ ಕಾಂಪೌಂಡಿಗಂಟಿಕೊಂಡೇ ಒಂದು ಕಂಭ ಎಬ್ಬಿಸಿದ್ದು, ಪಕ್ಕದ ಮನೆಯ ಷಫೀಕ್ ಅಲಿ ಆಗಾಗ ಒಂದಿಷ್ಟು ಜನರನ್ನು ಕರೆತಂದು ಮನೆ ತೋರಿಸಿದ್ದು - ಹಾಗೂ ಈ ಎಲ್ಲ ನಡೆಯುತ್ತಿದ್ದ ಕಾಲದಲ್ಲೇ ಹೈದರಾಬಾದಿನಲ್ಲಿ ನಡೆದ ಭೀಕರ ಕೋಮು ಗಲಭೆ - ಈ ಎಲ್ಲವೂ ಏಕಕಾಲಕ್ಕೆ ರಾಯರನ್ನು ಆವರಿಸಿ ಹೈರಾಣು ಮಾಡಿಬಿಟ್ಟಿತ್ತು.

ಇದ್ದ ಹಳೇ ಮನೆಯನ್ನು ಸ್ವಲ್ಪ ದೊಡ್ಡದು ಮಾಡು, ಒಂದು ಪೋರ್ಷನ್ ಬಾಡಿಗೆಗೆ ಕೊಟ್ಟು ಇನ್ನಷ್ಟು ಹಣ ಸಂಪಾದಿಸುವುದು ರಂಗಾರೆಡ್ಡಿಯ ಉದ್ದೇಶವಿದ್ದಿರಬಹುದು. ಆದರೆ ಶ್ರಾವಣ ಸುಮ್ಮನಿರಲಾರದೇ ಅವನಲ್ಲಿಗೆ ಹೋಗಿ ಸಾಕಷ್ಟು ಕಿರಿಕಿರಿಯುಂಟು ಮಾಡಿದನಂತೆ. ಕಾರ್ಪೊರೇಷನ್ ರೂಲ್ಸು - ಬಿಡಲೇ ಬೇಕಾದ ಐದಡಿ ಸೆಟ್ ಆಫ್, ಇಲ್ಲೀಗಲ್ ಕನ್ಸ್ ಟ್ರಕ್ಷಣ್ ಇತ್ಯಾದಿ ಹೇಳಿ ರಂಗಾರೆಡ್ಡಿಯನ್ನು ಕೆರಳಿಸಿ ಬಂದಿದ್ದಾನೆ. ಯಾಕೆ ಬೇಕಿತ್ತು ಇವನಿಗೆ ಈ ಉಸಾಬರಿ? ಸುಮ್ಮನಿರಬಹುದಿತ್ತಪ್ಪ. ಅವನ ಕಾಂಪೌಂಡಿನಲ್ಲಿ ಅವನೇನಾದರೂ ನಡೆಸಲಿ.. ನಮ್ಮ ಜಾಗ ಒತ್ತುವರಿ ಮಾಡದಿದ್ದಷ್ಟು ದಿನ ನಮಗೆ ಯಾಕೆ ಚಿಂತೆಯಾಗಬೇಕು? ಉದ್ದ ಮೂಗಿದೆಯೆಂದು ಸಿಕ್ಕಸಿಕ್ಕಲ್ಲೆಲ್ಲಾ ತೂರಿಸುವುದೇ? ಹೀಗೆ ಆಲೋಚಿಸಿದ ಭಾಸ್ಕರರಾಯರು ಹೆಂಡತಿಯನ್ನೊಮ್ಮೆ ನೆನಪು ಮಾಡಿಕೊಂಡರು. ಶ್ರಾವಣ ಅವನ ಮೂಗನ್ನು ಅವಳಿಂದಲೇ ಬಳುವಳಿ ಪಡೆದಿದ್ದ. ರಂಗಾರೆಡ್ಡಿ ನಡೆಸಿದ್ದು ಸರಿಬರದಿದ್ದರೆ ಅವನನ್ನು ನೋಡಿಕೊಳ್ಳಲು ಕಾರ್ಪೊರೇಷನ್ನಿನವರು ಇರುವಾಗ ಇವನೆಗೇಕೆ ಈ ಲೋಕೋದ್ಧಾರದ ಕೆಲಸ? ಎಂಬ ಆಲೋಚನೆ ಹಂಡತಿಯ ನೆನಪನ್ನು ಹಿಂದಕ್ಕಟ್ಟಿತು.

ಆದರೂ ಶ್ರಾವಣನಿಗೆ ಹೇಳುವವರು ಯಾರು? ಭಾಸ್ಕರರಾಯರಂತೂ ಮೌನಿ. ಯಾವುದನ್ನೂ ಬಾಯಿಬಿಟ್ಟು ಹೇಳುವವರಲ್ಲ. ಹೀಗಾಗಿ ಒಳಗೊಳಗೇ ಕುದಿಯುತ್ತಾರೆ. ಪೋಲೀಸಿನವರೊಂದಿಗೆ ದ್ವೇಷ ಕಟ್ಟಿಕೊಳ್ಳುವುದು ಅವರ ಮನಸ್ತತ್ವಕ್ಕೆ ಒಗ್ಗಿದ್ದಲ್ಲ. ಎಂದಾದರೊ ಸಮಯವೆಂದರೆ ಸಹಾಯ ಮಾಡುವವನೇ ಪೋಲೀಸು ರಂಗಾರೆಡ್ಡಿ ಎಂಬ ನಂಬಿಕೆ ರಾಯರಿಗೆ. ಹೀಗಾಗಿ, ಮನೆಗೆ ಗಿರಾಕಿಗಳನ್ನು ಹಿಡಿದು ತರುವ ಷಫೀಕ್ ಅಲಿಯನ್ನು ಕಂಡರೆ ಅವನು ಮುಸ್ಲಿಮನೆಂಬ ಕಾರಣಕ್ಕೆ ಏನೋ ಅನುಮಾನ ರಾಯರಿಗೆ. ಹಾಗೆ ನೋಡಿದರೆ ತಮ್ಮ ಬಾಲ್ಯದ ಗೆಳೆಯರೇನೂ ಹಿಂದೂಗಳಲ್ಲ - ಹ್ಯಾರಿ ಜ್ಯೋತಿಕುಮಾರ, ಅಬ್ದುಲ್ಲಾ ಎಂಬ ಗೆಳೆಯರು ರಾಯರಿಗಿದ್ದರು. ಅದನ್ನು ನೆನಪು ಮಾಡಿಕೊಂಡಾಗ ಮೈಸೂರಿನ ಮುಸ್ಲಿಮರೇ ಬೇರೆ ಹೈದರಾಬಾದಿನ ಮುಸ್ಲಿಮರೇ ಬೇರೆ ಎಂದೂ ಅನ್ನಿಸಿರುವುದುಂಟು. ಈ ಅನುಮಾನ ಯಾಕೆಂದೂ ರಾಯರಿಗೆ ತಿಳಿಯದು. ಹಾಗೆ ನೋಡಿದರೆ ಕೆಲಮುಖಗಳನ್ನು ಸಂಭಾವಿತರ ಭೂಮಿಕೆಯಲ್ಲಿಟ್ಟು ನೋಡುವುದು ರಾಯರಿಗೆ ಸಾಧ್ಯವೇ ಆಗಿಲ್ಲ. ಅಂಥವರಲ್ಲಿ ಷಫೀಕ್ ಅಲಿಯೂ ಒಬ್ಬ.

*****

ಶ್ರಾವಣನಿಗೆ ರಂಗಾರೆಡ್ಡಿಯನ್ನು ಕಂಡಾಗಲೆಲ್ಲಾ ಮೈ ಉರಿಯುವುದು ಏಕೆಂದು ಅರ್ಥವಾಗಿಲ್ಲ. ಅದೇಕೋ ತೆಲಂಗಾಣಾದ ಜಹಗೀರುದಾರಿಯಿಅನ್ನು ತೋರಿಸುವ, ಗತ್ತಿನ ಈ ವ್ಯಕ್ತಿಯನ್ನು ಅರಗಿಸಿಕೊಳ್ಳಲು ಅವನಿಗೆ ಸಾಧ್ಯವೇ ಆಗಿಲ್ಲ. ಇದು ಸಾಲದ್ದಕ್ಕೆ ಸಹಜ ದರ್ಪದ ರಂಗಾರೆಡ್ಡಿ ಪೋಲೀಸು ಇಲಾಖೆಯಲ್ಲಿರುವುದರಿಂದ ಅವನಿಗಿನ್ನಷ್ಟು ಗತ್ತು ಬಂದಂತಿದೆ.

ಇದಕ್ಕೆ ಶ್ರಾವಣ ಅನೇಕ ಬಾರಿ ಕಾರಣ ಹುಡುಕಲು ಪ್ರಯತ್ನಿಸಿದ್ದಿದೆ. ಬಹುಶಃ ಅವನು ಮಾಡುವ ಕೆಲಸ, ಹಾಗೂ ತನ್ನ ಎಡಪಂಥೀಯ ವಿಚಾರಧಾರೆ ಯಾವುದೇ ದಬ್ಬಾಳಿಕೆಯನ್ನು ಸಹಿಸದಂತೆ ಪ್ರೇರೇಪಿಸಿರಬಹುದು. ಆದರೂ ಅದು |ತೆಲಂಗಾಣಾ ರೆಡ್ಡಿಗಳು| ಎಂದು ಇಡೀ ಜಾತಿಗೇ ವಿಸ್ತಾರಗೊಂಡಿರುವುದು ಅವನ ತರ್ಕಕ್ಕೇ ನಿಲುಕದ ವಿಷಯವಾಗಿದೆ. ಇಂದು ರಂಗಾರೆಡ್ಡಿ ತನ್ನ ಹಳ್ಳಿಯಲ್ಲೇ ಇದ್ದು, ಇಲ್ಲಿ ತೋರುವ ದರ್ಪ ತೋರಿದ್ದರೆ ಡಿಚ್-ಪಲ್ಲಿಯ ಪಿ.ಡಬ್ಲೂ.ಜಿ. ಅವರು ಅವನನ್ನು ಮುಗಿಸಿಬಿಡುತ್ತಿದ್ದರೆನ್ನಿಸುತ್ತದೆ. ಎಂದಾದರೂ ರಂಗಾರೆಡ್ಡಿಗೆ ನಿಜಾಮಾಬಾದ್ ಜಿಲ್ಲೆಗೋ, ಮೆದಕ್, ಕರೀಂನಗರಕ್ಕೋ ವರ್ಗವಾಗಬೇಕೆಂದು ಶ್ರಾವಣ ಒಳಗೊಳಗೇ ಬಯಸುವುದುಂಟು. ಅಲ್ಲಾದರೆ ತನ್ನ ಕಾಮ್ರೇಡುಗಳು ಈ ರೆಡ್ಡಿಯನ್ನೊಂದು ಕೈ ನೋಡಿಕೊಳ್ಳಬಹುದಾದ ರೀತಿಯ ಬಗ್ಗೆಯೂ ತಾನು ಕನಸುತ್ತಿದ್ದುದುಂಟು.

ಈಗಂತೂ ರಂಗಾರೆಡ್ಡಿಯ ಮೇಲೆ ಸಾರಿರುವ ಸಮರ ಶ್ರಾವಣನಿಗೆ ಬಹಳ ಸಾಂಕೇತಿಕ ಮಹತ್ವವುಳ್ಳದ್ದು ಎನ್ನಿಸಿತು. ಬೇರೆಯವರ ಆಸ್ತಿ ಒತ್ತುವರಿ ಮಾಡಿಕೊಳ್ಳಲೂ ಹೇಸದ ರಂಗಾರೆಡ್ಢಿ, ತನ್ನ ಸ್ವಂತ ಜಾಗದಲ್ಲಿ ನಡೆಸುತ್ತಿರುವ ಕಟ್ಟಡ ಕಾರ್ಯವನ್ನೇ ತಾನು ಪ್ರಶ್ನಿಸುತ್ತಿರುವುದು, ಅಕಬರಬಾಗಿನಲ್ಲೇ ಚರಿತ್ರೆ ಸೃಷ್ಟಿಸಬಹುದು. ಹಾಗೂ ಬೀಗುತ್ತಾ ಅಲೆದಾಡುವ ರಂಗಾರೆಡ್ಡಿಗೆ ಕಲಿಸಬೇಕಾದ ಪಾಠವನ್ನು ಯಾರಾದರೂ ಕಲಿಸಿದಂತಾಗುವುದು. ರಂಗಾರೆಡ್ಡಿ ಈಗಾಗಲೇ ಎಬ್ಬಿಸಿರುವ ಕಂಬವನ್ನು ಹೀಗೆ ಕೋರ್ಟಿನ ಆದೇಶದೊಂದಿಗೆ ಇಳಿಸುವ ಕನಸನ್ನು ಶ್ರಾವಣ ಕಟ್ಟುತ್ತಾನೆ. ತಾನೀಗ ರಂಗಾರೆಡ್ಡಿಯ ವಿಷಯದಲ್ಲಿ ನಡೆಸುತ್ತಿರುವ ಕಾರುಬಾರು ಅಪ್ಪನಿಗೆ ತಿಳಿದೇ ಇರಬೇಕು. ಅವರೂ ಈ ವಿಷಯದಲ್ಲಿ ಎಂದಾದರೂ ಏನಾದರೂ ಹೇಳಬಹುದೆಂದು ನಿರೀಶಕ್ಷಿಸಿದ್ದೂ ಉಂಟು. ಆದರೆ ಅವರು ಇನ್ನೂ ಏನೂ ಹೇಳಿಲ್ಲ. ಹೇಳಬಹುದೆಂಬ ಭೀತಿಯೇ, ಅವರು ವಾಸ್ತವದಲ್ಲಿ ಹೇಳಿದ್ದರೆ ಆಗುತ್ತಿದ್ದ ಪರಿಣಾಮಕ್ಕಿಂತ ಬೃಹದಾಕಾರವಾಗಿ ನಿಂತು ಆಗಾಗ ಶ್ರಾವಣನನ್ನು ಕಾಡುವುದುಂಟು. ಹೀಗೆ ತನ್ನೆಲ್ಲ ಕನಸಿನ ನಡುವೆ ಅಪ್ಪನನ್ನು ಒದ್ದಾಡಿಸುವುದಕ್ಕಿಂತ, ಅವರನ್ನು ಮೈಸೂರಿಗೆ ಕಳಿಸಿಬಿಡುವುದೇ ಲೇಸೆಂದು ಆಗಾಗ ಅನ್ನಿಸಿದರೂ, ಯಾಕೋ ಶ್ರಾವಣನಿಗೆ ಆ ಕೆಲಸ ಮಾಡಲು ಮನಸ್ಸೇ ಇಲ್ಲ. ಇದಕ್ಕೆ ಕಾರಣ - ಎಲ್ಲವೂ ಕಡೆಗೆ ತಿರುಮಲಗಿರಿಯಲ್ಲಿ ಪರ್ಯಾವಸನವಾಗುವುದೆಂಬ ಆಶಾವಾದ.

*****

ಭಾಸ್ಕರರಾಯರಿಗೆ, ಈ ಎಲ್ಲದರ ವಿಷಯದಲ್ಲಿ ಮಗನಿಗೊಂದೆರಡು ಉಪದೇಶದ ಮಾತುಗಳನ್ನು ಯಾವಾಗಲಾದರೂ ಹೇಳಬೇಕೆಂದು, ಸಮಾಧಾನವಾಗಿ ಮಾತನಾಡಿ ಮನಶ್ಶಾಂತಿಯ ಮಹತ್ವವನ್ನು ವಿವರಿಸಬೇಕೆಂದು ಆಗಾಗ ಅನ್ನಿಸುತ್ತದೆ. ಹಾಗೆ ತಾವೇನಾದರೂ ಹೇಳಲು ಹೋದರೆ, ಶ್ರಾವಣ ತಮ್ಮ ಮೇಲೆಯೇ ರೇಗಿ ಬೀಳಬಹುದು. ಸಾಲದೆಂಬಂತೆ ಇದನ್ನವನು "This is a protest against Police imperialism" ಎಂದು ಒಂದು ತಾತ್ವಿಕ ಆಯಾಮ ನೀಡಿ ಅವನ ಎಡಪಂಥೀಯ ರೆಟರಿಕ್ಕನ್ನು ಹೊರಹೊಮ್ಮಿಸುವುದನ್ನೂ ರಾಯರು ಊಹಿಸಬಲ್ಲರು. ಪಾಪ ಆ ರಂಗಾರೆಡ್ಡಿ ಪೋಲೀಸು ನೌಕರಿ ಮಾಡುವುದೇ ಒಂದು ಮಹಾಪರಾಧ ಎಂದು ಕಾಣುವಂತೆ ಮಾಡುವ ಚಾಣಾಕ್ಷತನ ಶ್ರಾವಣನಲ್ಲಿದೆ.

ಕಳೆದ ವಾರ ನಡೆದದ್ದೂ ಹಾಗೆಯೇ. ರಂಗಾರೆಡ್ಡಿ ಗೋಡೆಗಂಟಿಕೊಂಡು ಕಂಬವನ್ನೆಬ್ಬಿಸಿದ ದಿನ ಶ್ರಾವಣ ಅವನೊಂದಿಗೆ ಮಾತನಾಡಿದನಂತೆ. ಬಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಮಾತನಾಡಿದ ರಂಗಾರೆಡ್ಡಿ ಕಟ್ಟಡದ ಕೆಲಸವನ್ನು ಕೂಡಲೇ ನಿಲ್ಲಿಸುವುದಾಗಿ ಮಾತುಕೊಟ್ಟನಂತೆ. ಶ್ರಾವಣನೂ ಲಾಯರು, ನೋಟೀಸು ಕೋರ್ಟು ಎಂದೆಲ್ಲಾ ಬೆದರಿಸಿ ಬರುವವನೇ. ಆದರೂ ಇಂಥ ಬೆದರಿಕೆಗೆ ಬಗ್ಗುವ ಕುಳ ಪೋಲೀಸು ರಂಗಾರೆಡ್ಡಿಯಲ್ಲ. ಈ ಮಾತುಕತೆ ನಡೆಯುತ್ತಿದ್ದಾಗ ಒಂದು ಭಾನುವಾರ ಮಧ್ಯಾಹ್ನ ಮಲಗಿದ್ದ ರಾಯರಿಗೆ ಎತ್ತರದ ಧ್ವನಿಯ ಮಾತುಕತೆ ಕೇಳಿ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಒಂದು ಥರದ ಮಂಪರಿನಲ್ಲಿಯೇ ಭಾಸ್ಕರರಾಯರು ನಡೆಯುತ್ತಿದ್ದ ಆ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದರು. ಕಡೆಗೆ ಒಂದು ಸಂಧಾನವಾದಂತೆಯೂ ಅವರಿಗನ್ನಿಸಿತು. ಇದಾದ ಒಂದೈದಾರು ದಿನ ತಣ್ಣಗಾದ ರಂಗಾರೆಡ್ಡಿ ಒಂದು ಶುಭ ಶುಕ್ರವಾರದಂದು ರಾತ್ರೋರಾತ್ರಿ ಗೋಡೆ ಎಬ್ಬಿಸಿ, ಶನಿ ಭಾನುವಾರಗಳಂದು ಆರ್.ಸಿ.ಸಿ ಹಾಕಿಸಿಯೇ ಬಿಟ್ಟ. ನೇರ ಮಾತುಕತೆಯ ಸಂಧಾನವನ್ನು ಗೌರವಿಸದೇ ಹೀಗೆ ಮೋಸದಿಂದ ಪ್ರವರ್ತಿಸಿದ್ದನ್ನು ತಡೆಯಲಾಗದ ಶ್ರಾವಣ ರಂಗಾರೆಡ್ಡಿಯ ಮೇಲಿನ ಸಿಟ್ಟನ್ನು ಮನೆಯವರ ಮೇಲೆಲ್ಲಾ ತೀರಿಸಿಕೊಂಡರೂ ಸಮಾಧಾನವಾಗದೇ, ತನ್ನ ಗೆಳೆಯ ಸುಬ್ಬಾರಾವನ್ನು ನೋಡಿ, ಅವನ ಕೈಯಲ್ಲಿ ಒಂದು ನೋಟಿಸ್ ಕೊಡಿಸಿ, ಕೂಡಲೇ ಕೋರ್ಟಿನಲ್ಲಿ ಒಂದು ಕೇಸನ್ನು ದಾಖಲು ಮಾಡಿಸಿದ. ಆಗಾಗ ಬಿಳಿ ಮಾರುತೀ ವ್ಯಾನಿನಲ್ಲಿ ಬರುವ ಸುಬ್ಬಾರಾವನ್ನು ರಾಯರು ಚೆನ್ನಾಗಿ ಬಲ್ಲರು. ಅದಕ್ಕೆ ಕಾರಣ, ಬಂದಾಗೆಲೆಲ್ಲ ಅವನು ರಾಯರ ಕೋಣೆಗೆ ಬಂದು ತಮ್ಮನ್ನು ಪ್ರತ್ಯೇಕವಾಗಿ ವಿಚಾರಿಸಿಕೊಂಡು ಹೋಗುತ್ತಾನೆ. ಹೆಚ್ಚೂಕಮ್ಮಿ ಸುಬ್ಬಾರಾವು ಬಂದಾಗೆಲ್ಲಾ ಬರುವ ಷಫೀಕ್ ಅಲಿ ರಾಯರನ್ನು ತಲೆಯೆತ್ತಿಯೂ ನೋಡುವುದಿಲ್ಲ. ಬಹುಶಃ ಷಫೀಕನನ್ನು ಕಂಡರೆ ರಾಯರಿಗೆ ಅಸಮಾಧಾನವಿರುವುದಕ್ಕೆ ಇದೂ ಒಂದು ಕಾರಣವಿರಬಹುದು. ಮೂರೂ ಜನ ಕುಳಿತು ಚಹಾ ಹೀರುತ್ತಾ ರಿಜಿಸ್ಟ್ರೇಷನ್, ಟೆನೆಂಸಿ, ಇತ್ಯಾದಿಯಾಗಿ ಏನೇನೋ ಕಾನೂನಿನ, ಆಸ್ತಿಪಾಸ್ತಿಯ ಭಾಷೆಯನ್ನು ಮಾತನಾಡುತ್ತಾರೆ.

ಅಂದು ಸುಬ್ಬಾರಾವು - ಶ್ರಾವಣರ ಪಿತೂರಿಯ ಫಲವಾಗಿ ನೋಟೀಸು ತಲುಪಿದ ದಿನವೂ ರಂಗಾರೆಡ್ಡಿ ಇವರ ಮನೆಗೆ ಬಂದು ಮೆಲುದನಿಯಲ್ಲಿ ಅತಿವಿನಯ ಪ್ರದರ್ಶಿಸಿ ಹೋದದ್ದು ಭಾಸ್ಕರರಾಯರಿಗೆ ಮಸಕು ಮಸಕು ನೆನಪು.

ಈಗ ಈ ಎಲ್ಲ ತರಲೆಗಳ ನಡುವೆ ಈಗ ಭಾಸ್ಕರರಾಯರ ವೃದ್ಧಾಪ್ಯ ಕಳೆಯಬೇಕಿದೆ. ಅವರಂತೂ ಈ ಎಲ್ಲದ್ದರಿಂದ ಓಡಿ ಮೈಸೂರಿನಲ್ಲಿರುವ ಹಿರಿಮಗ ಮಹೇಶಚಂದ್ರನಲ್ಲಿಗೆ ಹೋಗಬೇಕೆಂದು ಗಟ್ಟಿ ನಿರ್ಧಾರ ಮಾಡಿದ್ದಾರೆ. ಆದರೂ ಅವರು ಮಾತ್ರ ಈ ವಿಷಯ ಬಾಯಿ ಬಿಟ್ಟಿಲ್ಲ. ಇಲ್ಲಿನ ಗೊಂದಲ ಒಂದು ಘಟ್ಟ ತಲುಪುವವರೆಗೂ ಇಲ್ಲಿಂದ ದೂರ ಹೋಗುವ ಮನಸ್ಸೂ ಅವರಿಗಿಲ್ಲ. ಯಾವಾಗಲಾದರೂ ಹೃದಯಬಿಚ್ಚಿ ಈ ಎಲ್ಲದರ ಬಗ್ಗೆ ಮಗನೊಂದಿಗೆ ಮಾತನಾಡಬೇಕು ಎಂದುಕೊಳ್ಳುತ್ತಲೇ ರಾಯರು ಪ್ರತಿದಿನವೂ ಸೂಟ್‍ಕೇಸ್ ಕಟ್ಟುತ್ತಾರೆ.

*****

ರಂಗಾರೆಡ್ಡಿಗೆ ನೋಟೀಸು ತಲುಪಿದ ಮಾರನೆಯ ಸಂಜೆಯೇ, ಶ್ರಾವಣ ತಿಂಡಿ ತಿನ್ನುತ್ತಾ ಕುಳಿತಿದ್ದಾಗ ಹೊರಗಿನಿಂದ ಯಾರೋ ಜೋರಾಗಿ ಕೂಗಿದ ಶಬ್ದ ಕೇಳಿಸಿದಂತಾಯಿತು - "ಸಾರ್ ಎಮ್ಮಲ್ಲೆ ಸಮೀರ್ ಕುಮಾರ್ ಬಂದಿದ್ದಾರೆ" ಹೀಗೂಬ್ಬ ಆಗಂತುಕನ ಆಗಮನವನ್ನು ಕೂಗಿ ಹೇಳಿದ ರೀತಿ ಶ್ರಾವಣನಿಗೆ ವಿಪರೀತ ಸಿಟ್ಟು ತರಿಸಿತು. "ಬಹು ಪರಾಕ್ ಬಹು ಪರಾಕ್... ಎಂ.ಎಲ್.ಎ ಸಾಹೇಬರನ್ನು ಕುಳಿತುಕೊಳ್ಳಲು ಹೇಳಿ. ತಿಂಡಿ ತಿಂದು ಬಂದು ಅವರನ್ನು ಕಾಣುತ್ತೇನೆ." ಎಂದು ಒಳಗಿನಿಂದಲೇ ಅರಚಿದ. ಇದು ರಂಗಾರೆಡ್ಡಿಯ ಪಿತೂರಿಯೇ ಇರಬೇಕೆಂಬ ಅವನ ಅನುಮಾನ, ಅವನು ಹೊರಬಂದಕೂಡಲೇ ನಿಜವಾಯಿತು. ಎಷ್ಟು ಬೇಗ ಒಂದು ಸಣ್ಣ ತಗಾದೆ ರಾಜಕೀಯ ಆಯಾಮ ಪಡೆದುಬಿಟ್ಟಿದೆ ಎಂದು ಯೋಚಿಸಿದಾಗ ಶ್ರಾವಣ ಚಕಿತಗೊಂಡ. ಆದರೂ ಈಗ ಸುಮ್ಮನೆ ಸಿಟ್ಟಾಗಿ ದನಿಯೇರಿಸುವುದರಲ್ಲಿ ಅರ್ಥವಿಲ್ಲ ಅನ್ನಿಸಿ ತನಗೆ ತಾನೇ ಸಮಾಧಾನವೂ ಮಾಡಿಕೊಂಡ. ಕೈಯಲ್ಲಿ ಲಾಯರ್ ನೋಟೀಸು ಹಿಡಿದ ರಂಗಾರೆಡ್ಡಿ ಹಾಗೂ ಸಮೀರ್ ಕುಮಾರ, ಶಾಂತಿಯ ಸಹಬಾಳ್ವೆಯ ಮಹತ್ವವನ್ನು - ಅದರಲ್ಲೂ ಒಂದೇ ಧರ್ಮದವರಾದ ಅವರಿಬ್ಬರೂ ಸ್ನೇಹ ಸೌಹಾರ್ದದಿಂದ ಇರಬೇಕಾದ ಅವಶ್ಯಕತೆಯನ್ನೂ ವಿವರಿಸಿದರು. ಈ ಎಲ್ಲವೂ ಷಫಿಕ್ ಸಾಬರನ್ನು ಮನಸ್ಸಿನಲ್ಲಿಟ್ಟು ಹೇಳುತ್ತಿರುವ ಮಾತುಗಳೆಂದು ಶ್ರಾವಣನಿಗೆ ಅರ್ಥವಾಯಿತು. ಏನೂ ಮಾತನಾಡದೇ, ಕಡೆಗೆ ಅವರಿಗೊಂದು ಲೋಟ ಚಹಾ ಕೂಡ ಕೊಡದೇ ಶ್ರಾವಣ ಅವರನ್ನು ಕಳುಹಿಸಿಬಿಟ್ಟ.

ಅವರು ಹೋದಮೇಲೆ, ಶ್ರಾವಣ ಕೂಡಲೇ ಅಪ್ಪನ ಕೋಣೆಗೆ ಹೋಗಿ ಅವರನ್ನು ನೋಡಿದ. ಅಪ್ಪ ಇನ್ನೂ ನಿದ್ರೆಯ ಮಂಪರಿನಲ್ಲಿ ಏಳುವುದೋ ಬೇಡವೋ ಎಂಬಂತೆ ಬಿದ್ದುಕೊಂಡಿದ್ದರು. ಸದ್ಯ - ಈ ಎಲ್ಲವೂ ನಡೆದಾಗ ಅಪ್ಪ ಮಲಗಿದ್ದರಲ್ಲಾ... ಅವರಿಗೇನಾದರೂ ಇಂದಿನ ಈ ಭೇಟಿಯ ಮಹತ್ವ ತಿಳಿದರೆ, ಇನ್ನೂ ಚಿಂತೆಗೊಳಗಾಗಿ ನರಳುವರು ಎನ್ನಿಸಿ, ತಿಳಿಯದಿರುವುದಕ್ಕೆ ನಿರಾಳ ನಿಟ್ಟುಸಿರುಬಿಟ್ಟ. ಹಾಗೆ ಯೋಚಿಸುತ್ತಲೇ - ತನ್ನ ಕನಸಿನ ತಿರುಮಲಗಿರಿಯ ಮನೆಯಾಗುವವರೆಗೂ ಅಪ್ಪನನ್ನು ಇಲ್ಲಿ ಕರೆಸಿಕೊಳ್ಳಬಾರದಿತ್ತು ಎನ್ನಿಸಿತು. ಜತೆಗೆ ಆಳುವ ಪಕ್ಷದ ಎಂ.ಎಲ್.ಎಯನ್ನು ತನ್ನ ಕಡೆಗೆಳೆದುಕೊಂಡು ಸೂಕ್ಷ್ಮವಾಗಿ ಹೆದರಿಸಬಂದ ರಂಗಾರೆಡ್ಡಿಯ ಚಾಣಾಕ್ಷತನಕ್ಕೆ ತಲೆದೂಗಿದ. ಅದಷ್ಟೇ ಅಲ್ಲ, ಅವನಿಗೆ ಒಂದಷ್ಟು ಕ್ಷಣ ನಿಜಕ್ಕೂ ಭಯವಾಯಿತು. ತಿರುಮಲಗಿರಿಯ ಮನೆ ಇತ್ಯದಿಗಳು ನಾಶವಾಗಲಿ, ಮೊದಲು ಇಲ್ಲಿಂದ ಜಾಗ ಖಾಲಿಮಾಡಿ, ಸೇತುವೆಯಾಚೆಯ ಬದಿಯಲ್ಲಿ ಒಂದು ಮನೆ ಬಾಡಿಗೆಗಾದರೂ ಹಿಡಿಯಬೇಕು ಅನ್ನಿಸಿತು. ಇದರಿಂದ ಅಪ್ಪನಿಗೂ ಶಾಂತಿ - ಕಾಲೇಜು, ಏಂಸೆಟ್ ಇತ್ಯಾದಿಗಳೆಂದು ಓಡಾಡುವ ಮಗನಿಗೂ ಅನುಕೂಲ ಎಂದೂ ಅನ್ನಿಸಿತು. ಒಂದೇ ಕ್ಷಣದ ಮಟ್ಟಿಗೆ, ಅಪ್ಪನನ್ನು ಮೈಸೂರಿಗೆ ವಾಪಸ್ಸು ಕಳಿಸಿಕೊಟ್ಟರೆ ಹೇಗೆಂಬ ಆಲೋಚನೆಯೂ ಬಂತು. ಆದರೆ ಮಹೇಶನ ಜತೆ ಜಗಳವಾಡಿ, ಕನಿಷ್ಟ ಮೂರು ತಿಂಗಳಿಗೆಂದು ಕರೆತಂದಿರುವ ಅಪ್ಪನನ್ನು ಒಂದೇ ತಿಂಗಳು ತೀರುವುದಕ್ಕೆ ಮೊದಲೇ ಕಳುಹಿಸಿಕೊಡುವುದು ಹೇಗೆಂದು ತಿಳಿಯದೇ ತನ್ನಾತ್ಮಸಾಕ್ಷಿಗೆ ಬಲಿಯಾದ. ಹಾಗೂ ಈ ಎಲ್ಲ ಗೊಂದಲದ ಆಶಾಕಿರಣವಾಗಿ ಮುಂದುವರೆದದ್ದೆಂದರೆ, ತಿರುಮಲಗಿರಿ ಮಾತ್ರ.


****

ಈ ಎಲ್ಲವೂ ನಡೆಯುತ್ತಿದೆ ಎನ್ನುವಾಗಲೇ ಇದು ಖರೆ ನಡೆಯುತ್ತಿದೆಯೇ ಎಂಬ ಅನುಮಾನವೂ ಭಾಸ್ಕರರಾಯರನ್ನು ಕಾಡುವುದುಂಟು. ಕಾರಣ: ಈ ಎಲ್ಲ ವಿಷಯಗಳ ಚರ್ಚೆ ಬಹಳ ನಿಗೂಢವಾಗಿ ನಡೆಯುತ್ತದೆ. ಹಾಗೂ ಈ ಚರ್ಚೆ ನಡೆಯವಾಗ ಭಾಸ್ಕರರಾಯರಿಗೆ ತಾವು ಸಂಪೂರ್ಣವಾಗಿ ಎಚ್ಚರವಿರುವಂತೆ ಅನ್ನಿಸುವುದೇ ಇಲ್ಲ. ಎಲ್ಲವೂ ಒಂದು ಥರದ ಮಂಪರಿನ ಸ್ಥತಿಯಲ್ಲೇ ನಡೆದುಹೋಗುತ್ತದೆ. ಶ್ರಾವಣ ಬಹುಶಃ ತನ್ನ ಮಗನಿಗೆ ಈ ವಿಷಯ ತಿಳಿಯದಿರಲೆಂದು ಹಾಗೆ ಮಾಡುತ್ತಾನೇನೋ..... ತಿಳಿದರೆ, ಅವನು ಹೆದರಿ ರಂಗಾರೆಡ್ಡಿಯ ಮಕ್ಕಳ ಜೊತೆ ಆಟ ಆಡುವುದನ್ನೂ ಬಿಟ್ಟುಬಿಟ್ಟಾನೆಂಬ ಭೀತಿಯಿದ್ದೀತು.

ಹಾಗೆ ನೋಡಿದರೆ, ತಮ್ಮ ಮೊಮ್ಮಗ ಪೋಲೀಸು ರಂಗಾರೆಡ್ಡಿಯ ಮಕ್ಕಳ ಜೊತೆಗಾಗಲೀ ಪಕ್ಕದ ಮನೆಯ ಷಫೀಕ್ ಅಲಿಯ ಮಕ್ಕಳ ಜತೆಗಾಗಲೀ, ಕ್ರಿಕೆಟ್ ಆಡುವುದು, ಗಾಳಿಪಟ ಹಾರಿಸುವುದೂ, ಭಾಸ್ಕರರಾಯರಿಗೆ ಟೆನ್ಷನ್ ಉಂಟುಮಾಡುವ ವಿಷಯವೇ. ಈಗಿನ ಅವರ ಚಿಂತೆಗೆ ಅದೂ ಒಂದು ಕಾರಣವಿದ್ದೀತು! ಅಕಸ್ಮಾತ್ ಶ್ರಾವಣನ ಮೇಲಿನ ಸಿಟ್ಟನ್ನು ಆ ರಂಗಾರೆಡ್ಡಿ ಈ ಹುಡುಗನ ಮೇಲೆ ತೀರಿಸಿಕೊಂಡುಬಿಟ್ಟರೆ?!

ರಾಯರು ತಮಗೆ ಅಂಟಿಕೊಂಡಿರುವ ರೋಗದ ಬಗ್ಗೆ ಯೋಚಿಸುತ್ತಾರೆ. ಈ ರೋಗ ಮುಂಜಾನೆ ಆರರಿಂದ ಏಳರ ನಡುವೆ ಅವರ ಮೇಲೆ ಧಾಳಿ ಮಾಡುತ್ತದೆ ಎನ್ನಿಸಿದರೂ ಅದರ ಖಚಿತತೆಯ ಬಗ್ಗೆ ಅವರಿಗೆ ಅನುಮಾನವಿದೆ. ಹಾಗೆ ನೋಡಿದರೆ ಅವರಿಗೆ ದಿನವಿಡೀ ಹಾಗೆಯೇ ಎಂದೂ ಹೇಳಬಹುದು. ಆದರೆ ಈ ರೋಗವಂತೂ ಭಾಸ್ಕರರಾಯರನ್ನು ಆವರಿಸಿಬಿಟ್ಟಿದೆ. ಅರ್ಥಾತ್: ಮುಂಜಾನೆ ಆರಕ್ಕೆ ಎಚ್ಚರಗೊಂಡಂತಾದ ಭಾಸ್ಕರರಾಯರು ಒಂದು ಥರದ ಮಂಪರಿನ ಸ್ಥಿತಿಯಲ್ಲಿರುತ್ತಾರೆ. ಅದು ಒಂದು ರೀತಿಯ ನಿದ್ದೆಯಲ್ಲದ ಎಚ್ಚರವಲ್ಲದ ಕನಸಲ್ಲದ ನನಸಲ್ಲದ ಎಲ್ಲಿಗೂ ಸಲ್ಲದ ಸ್ಥಿತಿ. ಈ ಅವಸ್ಥೆಯಲ್ಲಿ ಭಾಸ್ಕರರಾಯರಿಗೆ ಎನೇನೋ ಕಾಣಿಸುತ್ತದೆ. ಯಾವ ವಿಷಯಗಳೋ ಶಬ್ದಗಳೋ ಕೇಳಿಸುತ್ತವೆ, ಹಾಗೂ ಹಾಗೆಯೇ ಅವರು ಕ್ರಮೇಣ ನಿದ್ರೆಗೆ ಜಾರಿಬಿಡುತ್ತಾರೆ. ಮತ್ತೆ ಎದ್ದಾಗ ಎಲ್ಲವೂ ಸುಗಮ. ಯಾವಾಗಲಾದರೂ ಡಾಕ್ಟರಿಗೆ ತೋರಿಸಿಕೊಳ್ಳೋಣವೆಂದರೆ ರೋಗವೆಂದರೇನೆಂದು ತಿಳಿಯದಂತಹ ರೋಗ! ಆಲೋಚನೆಯ ಭ್ರೂಣಗಳು ಕ್ರಿಯಾರೂಪ ತಾಳುವಂತಹ ಪ್ರಕ್ರಿಯೆ.. ಈ ಸಮಯದಲ್ಲಿ ರಾಯರು ಕಾವ್ಯ ಕಟ್ಟುತ್ತಾರೆ. ಕನಸಿನ ಕದ ತಟ್ಟುತ್ತಾರೆ. ತಮಗರಿವಿಲ್ಲದಂತೆಯೇ ನಿದ್ರೆಯ ತೆಕ್ಕೆಗೂ ಸೇರಿಬಿಡುತ್ತಾರೆ. ದಿನಕ್ಕೆ ಈ ರೀತಿ ಹಲವು ಬಾರಿ ಎಚ್ಚರಗೊಳ್ಳುವುದು, ಹಲವುಬಾರಿ ನಿದ್ರೆಗೊಳಗಾಗುವುದು - ಈಚೆಗೆ ಅವರಿಗೆ ಬಿಡಿಸಿಕೊಳ್ಳಲಾಗದ ದುರಭ್ಯಾಸವಾಗಿಬಿಟ್ಟಿದೆ. ಈ ರೀತಿ ನನಸಿನೊಳಗಣ ಕನಸು ಕಾಣುವುದು ಅವರ ಪ್ರಕೃತಿಗೊಗ್ಗದ, ಪ್ರಕೃತಿ ಒಪ್ಪದ ಪರಿಪಾಠವಾಗಿದೆ.

ಹಿಂದಿನ ಮನೆಯ ರಂಗಾರೆಡ್ಡಿ ನಡೆಸಿದ ಈ ಎಲ್ಲ ಕಾರುಬಾರಿನ ವಿಷಯ ತಿಳಿದುಬಂದದ್ದೂ ಬಹುತೇಕ ಶ್ರಾವಣ ತನ್ನ ಹೆಂಡತಿಯೊಂದಿಗೆ ಈ ಸಮಸ್ಯೆ ಚರ್ಚಿಸುತ್ತಿದ್ದ ಸಮಯದಲ್ಲಿಯೇ.

ಆ ನಂತರ ಏನಾಯಿತೆಂದು ಭಾಸ್ಕರರಾಯರಿಗೆ ಸ್ಪಷ್ಟವಾಗಿ ನೆನಪಿಲ್ಲ. ಆದರೆ ಹೀಗೆ ಕಂಡ ಈ ದೃಶ್ಯದ ಚಿಂತೆ ದಿನವಿಡೀ ಮರುಮರುಕಳಿಸಿ ಭಾಸ್ಕರರಾಯರನ್ನು ಸುಸ್ತಾಗಿಸಿಬಿಟ್ಟಿತ್ತು. ಆದರೂ ಈ ರಂಗಾರೆಡ್ಡಿಯ ಪುರಾಣ ನಿಜವಗರಲೇಬೇಕು. ಅಂದು ಮಧ್ಯಹ್ನ ಮಾತುಕತೆ ನಡೆದು ಸಂಧಾನವಾದಂತೆ ಅನ್ನಸಿದ ಮಾರನೆಯ ದಿನವೇ ರಂಗಾರೆಡ್ಡಿ - ಕ್ಯೂರಿಂಗಿಗೆ ಬಿಟ್ಟಿದ್ದ ತನ್ನ ಸೂರಿನ ಮೇಲೇರಿ "ನೀಯಮ್ಮ ಭಾಂಚೋದ್" "ಮಾಕೌಡೇ" ಎಂದೆಲ್ಲ ಶ್ರಾವಣನನ್ನು ಕೆಟ್ಟಕೆಟ್ಟದಾಗಿ ಬೈದದ್ದು ಭಾಸ್ಕರರಾಯರ ಕಿವಿಯನ್ನಿನ್ನೂ ಕೊರೆಯುತ್ತಿದೆ.

ಅಂದು ನಡೆದದ್ದಾದರೂ ಏನು? ಭಾಸ್ಕರರಾಯರು ನೆನಪು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಹೌದು.... ಹಿಂದಿನ ದಿನವೇ, ಅದೂ ಮಧ್ಯಹ್ನದ ಈ ಗಲಾಟೆ, ಸಂಧಾನಕ್ಕೆ ಮೊದಲೇ ಸುಬ್ಬಾರಾವು ಬಂದು ಶ್ರಾವಣನ ಜೊತೆ ಗುಸುಗುಸು ಮಾಡಿಹೋದ.

ಅದರ ಫಲ:
ಶ್ರಾವಣ ಮಧ್ಯಾಹ್ನದ ನಂತರ ಎಲ್ಲ ಶಾಂತವಾಗಿದೆಯೆನ್ನುವಾಗ, ಯಾರೂ ಇಲ್ಲದ ಸಮಯ ನೋಡಿ, ರಂಗಾರೆಡ್ಡಿ ಈಗಾಗಲೇ ಎಬ್ಬಿಸಿರುವ ಗೋಡೆಯ ಚಿತ್ರ ತೆಗೆಯಲು ಕ್ಯಾಮರಾ ಹಿಡಿದು ಹೋದ.

ಉದ್ದೇಶ: ಈಗಾಗಲೇ ಎಬ್ಬಿಸಿರುವ ಗೋಡೆಗಳ ಚಿತ್ರಗಳನ್ನು ತೆಗೆದಿಟ್ಟುಕೊಳ್ಳುವುದು. ನಂತರ ಕೋರ್ಟಿಗೆ ಹೋಗಿ "ರಂಗಾರೆಡ್ಡಿ ಗೋಡೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾನೆ "ಸ್ಟೇ" ಕೊಡಿ" ಎಂದು ಅಪೀಲು ಮಾಡುವುದು.
ಮುಂದಾಲೋಚನೆ ಏನೆಂದರೆ: "ಸ್ಟೇ" ಕೊಟ್ಟ ನಂತರ ಗೋಡೆ ಎಬ್ಬಿಸಿದ್ದಾನೆಂದು ಕಾಂಟೆಂಪ್ಟ್ ಆಫ್ ಕೋರ್ಟ್ ಕೇಸು ಹಾಕುವುದು.

ಈ ಇಂಥ ವಿಚಿತ್ರ ಆಲೋಚನೆಗಳ ದರ್ಶನವಾದಾಗ ರಾಯರಿಗೆ ನಿಜಕ್ಕೂ ಅದು ಕನಸೋ, ವಾಸ್ತವವೋ ಎಂದು ಅನುಮಾನ ಬರುವುದಂತೂ ಖಂಡಿತ. ಖರೆಯಿರಲೇಬೇಕೆಂದು ನೆನಪುಮಾಡಿಕೊಳ್ಳಹೊರಟದ್ದೆಲ್ಲಾ ಹೀಗೆ ಅನುಮಾನದಲ್ಲೇ ಪರ್ಯಾವಸನವಾಗುವುದು ವಿಚಿತ್ರ ಚಡಪಡಿಕೆಗೆ ಕಾರಣವಾಗಿದೆ.

ಭಾಸ್ಕರರಾಯರಿಗೆ ಅನುಮಾನ ಬಂದಾಗಲೆಲ್ಲಾ - ಅನುಮಾನ ಎಂಬ ಪದ ನೆನಪಾದಾಗಲೆಲ್ಲ ಷಫೀಕ್ ಅಲಿಯ ಮುಖ ನೆನಪಾಗುವುದು. ಷಫೇಕನ ನೆನಪಾದಾಗಲೆಲ್ಲ ಶ್ರಾವಣ ತಿರುಮಲಗಿರಿಯಲ್ಲಿ ಸೈಟಿನ ನೆನಪಾಗುವುದು. ಈ ಮನೆಯನ್ನು ಮಾರಿ ದೂರದ ತಿರುಮಲಗಿರಿಗೆ ಹೋಗುವ ಆಲೋಚನೆಯನ್ನೂ ಈ ಷಫೀಕನೇ ಅವನ ತಲೆಯಲ್ಲಿ ಬಿತ್ತಿರಬಹುದೆಂಬ ಅನುಮಾನವೂ ಆವರಿಸಿದಾಗ ಒಂದಾದರೂ ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸಿರುವ ಷಫಾಕನ ಬಗ್ಗೆ ತುಸು ಅಂತಃಕರಣ ಮಿಡಿದರೂ, ಕಡೆಗುಳಿಯುವುದು ಅನುಮಾನವೇ. ತಿರುಮಲಗಿರಿಗೆ ಹೋಗುವ ಆಲೋಚನೆಯೂ ಒಳ್ಳೆಯದೇ. ಸುತ್ತಮುತ್ತೆಲ್ಲಾ ಕೊಳಕಾಗಿರುವ ಈ ಕೊಂಪೆಯಲ್ಲಿರುವುದಕ್ಕಿಂತ ಅಲ್ಲಿಗೆ ಹೋಗುವುದೇ ಲೇಸು... ಆದರೆ ಪಾಪದ ಶ್ರಾವಣನಿಗೆ ಈ ಅಕಬರಬಾಗಿನ ಮನೆಗೆ ಅವನು ನಿರೀಕ್ಷಿಸಿದಷ್ಟು ಬೆಲೆಯೇ ಸಿಗುತ್ತಿಲ್ಲ. ಸೇತುವೆ ದಾಟಿದ ಈ ಬದಿಯ ಏರಿಯಾ ಹಾಗೆಯೇ. ಕಡಿಮೆ ಬೆಲೆಯನ್ನು ಪಡೆಯುತ್ತದೆ. ಈ ಮನೆ ಹೇಗಾದರೂ ಮಾರಾಟವಾದರೆ ಅದರಲ್ಲಿ ಬಂದ ಹಣ ಹೂಡಿ ಒಂದು "ಆರ್ಕಿಟೆಕ್ಟ್ ಡಿಸೈನ್ಡ್ ಹೌಸ್" ಕಟ್ಟಬೇಕೆಂಬ ಕನಸು ಶ್ರಾವಣನಿಗುಂಟು. ಇದು ಮಾತ್ರ ಅವನ ಎಡಪಂಥೀಯ ರೆಟಾರಿಕ್ಕಿಗೊಳಗಾಗದೇ, ಮಧ್ಯತರಗತಿಯ ಬೂರ್ಜ್ವಾಗಳ ಶೈಲಿಯಲ್ಲಿ "ವೆಲ್ ವೆಂಟಿಲೇಟೆಡ್, ಸೆಲ್ಫ್ ಕಂಟೇನ್ಡ್ ಹೌಸ್" ಆಗಬೇಕೆಂದು ಅವನು ಕನಸು ಕಾಣುತ್ತಾನೆ. ಶ್ರಾವಣ ಕಟ್ಟಿರುವ ಈ ಕನಸುಗಳ ದರ್ಶನವೂ ರಾಯರಿಗೆ ತಮ್ಮ ರೋಗದ ಕಾಲದಲ್ಲೇ ಆಗಿದೇ. ಆದರೂ ಇದು ಖರೆಯಿರಲೇಬೇಕು. ದಿನದ ಯಾವುದೇ ಸಮಯದಲ್ಲಿ ಷಫೀಕ್ ಅಲಿ ಯಾರ್ಯಾರನ್ನೋ ಕರೆತಂದು ಮನೆಯನ್ನು ಪರೀಕ್ಷೆಗೊಳಪಡಿಸುವುದು ರಾಯರ ಪ್ರಜ್ಞೆಗೆ ಬಂದಿದೆ. ಮಧ್ಯಹ್ನ ನಿದ್ರೆಗೆಂದು ಮಲಗಿದಾಗ ಎಷ್ಟುಬಾರಿ ಸೊಸೆ ಬಂದು ತಮ್ಮನ್ನು ಎಬ್ಬಿಸಿಲ್ಲ! ಎದ್ದನಂತರ ಅವರಿಗೆ ಪ್ಲಿಂತ್ ಏರಿಯಾ, ಡೈಮೆಂಷನ್, ಸ್ಕ್ವೇರ್ ಯಾರ್ಡ್ ಇತ್ಯಾದಿಯಾಗಿ, ಸೈಟು ಮನೆಗಳಿಗೆ ಸಂಬಂಧಿಸಿದ ಅನೇಕ ವಿಷಯಗಳು ಕೇಳಿಸುತ್ತವೆ. ಭಾಸ್ಕರರಾಯರಿಗೆ ಇಲ್ಲಿ ಮನೆ ಕೊಂಡದ್ದೇ ತಪ್ಪು ಎನ್ನುಸುವಂಥ ಸಂದರ್ಭದಲ್ಲಿ ಈ ಮಾರಾಟದ ಮಾತು ಸಂತೋಷ ನೀಡಿದರೂ ಮತ್ತೆ ತಿರುಮಲಗಿರಿ ಇತ್ಯಾದಿಯಾಗಿ ಇಲ್ಲೇ ಸೆಟಲ್ ಆಗುವುದಕ್ಕಿಂತ ಮೈಸೂರಿಗೆ ಬಂದು ಒಂದು ಸೈಟು ಕೊಳ್ಳುವುದು ಉತ್ತಮವೆನ್ನಿಸುತ್ತದೆ. ಹುಣಸೂರು ರಸ್ತೆಯಲ್ಲಿ ಸಿಐಟಿಬಿಯವರ ಸೈಟುಗಳು ಮಾರಾಟಕ್ಕಿವೆಯಂತೆ. ಆದರೆ ಈ ಮಾತುಗಳನ್ನು ಹೇಳಲು ಪರಾವಲಂಬಿ ಭಾಸ್ಕರರಾಯರಿಗೆ ಬಾಯಿ ಬರುವುದಿಲ್ಲ. ಹೇಳಿದರೂ ಯಾರೂ ಕೇಳುವುದಿಲ್ಲ. ಈ ಇಂಥ ಆಲೋಚನೆಗಳು ಬಂದಾಗ, ಅವರು ಭಗವದ್ ಗೀತೆ ಹಿಡಿದು ಕುಳಿತುಬಿಡುತ್ತಾರೆ. ಅದನ್ನೆಂದೂ ಅವರು ಅಂತರ್ಗತ ಮಾಡಿಕೊಳ್ಳಲು ಪ್ರಯತ್ನಿಸಿಲ್ಲವಾದರೂ, ಈಗವರಿಗೆ ಅದೊಂದೇ ಕಾಲಹರಣ ಮಾಧ್ಯಮವಾಗಿದೆ.

ಮಾರಲು ನಿಶ್ಚಯಿಸಿರುವ ಈ ಮನೆಗಾಗಿ, ಸುಮ್ಮನೆ ರಂಗಾರೆಡ್ಡಿಯ ದ್ವೇಷ ಕಟ್ಟಿಕೊಳ್ಳುವುದು ಬೇಡವೆಂದು ಹೇಳಲೂ ಭಾಸ್ಕರರಾಯರ ಮನ ಹಾತೊರೆಯುವುದು. ಹೇಗಿದ್ದರೂ ಮಾರಾಟಮಾಡುವುದೇ ಆದಲ್ಲಿ ಮುಂಬರುವ ಮಾಲೀಕನಿಗೆ ಈ ಲಿಟಿಗೇಷನ್ನಿನ ಪರಂಪರೆಯನ್ನು ಏಕೆ ಬಳುವಳಿಯಾಗಿ ನೀಡಬೇಕು?

ಆದರೂ ಮಕ್ಕಳಿಗೆ ಇಪ್ಪತ್ತು ದಾಟಿದ ನಂತರ ಬುದ್ಧಿಮಾತು ಹೇಳುವುದು ಸರಿಯಲ್ಲ. ನಲವತ್ತು ದಾಟಿದ ನಂತರ ಅವರ ಬುದ್ಧಿಮಾತನ್ನೇ ಕೇಳುವ ಸ್ಥಿತಿ ಪ್ರಾಪ್ತವಾಗುತ್ತದೆ. ಶ್ರಾವಣನಿಗೆ ನಲವತ್ತರ ನಂತರ ಐದು ವರ್ಷಗಳಾಗಿವೆ.

******

ಶ್ರಾವಣನಿಗೂ ಈ ಕೋರ್ಟು ಇತ್ಯಾದಿಗಳು ತನ್ನ ಖಾಸಗೀ ಸಮಯವನ್ನು ಕಬಳಿಸುತ್ತಿರುವುದು ಚಡಪಡಿಕೆಯುಂಟು ಮಾಡಿದೆ. ಅವನಿಗೂ ಆಗಾಗ ಅನ್ನಿಸುತ್ತದೆ - ಮನೆ ಮಾರಲು ನಿಶ್ಚಯಿಸಿರುವಾಗ ಸುಮ್ಮಸುಮ್ಮನೆ ತಾನೇಕೆ ಹುಚ್ಚನಂತೆ ಕೂರ್ಟು ಕಛೇರಿಗಳೆಂದು ಅಲೆಯುತ್ತಿರುವುದು? ಆದರೂ ಹಿಡಿದ ಪಟ್ಟನ್ನು ಬಿಡಲು ಅವನ ಮನಸ್ಸೊಪ್ಪದು. ಜತೆಗೆ ಈಗ ಈ ಮನೆ ಮಾರಾಟವಾಗುವ ಖಾತ್ರಿಯಿದೆಯೇ? ಇದೂ ಸಾಲದೆಂಬಂತೆ, ರಂಗಾರೆಡ್ಡಿಯ ಮೇಲೆ ತಾನೀಗ ಹೂಡಿರುವ ಸಮರ ನೋಟೀಸುಗಳನ್ನು ಹಂಚುವ ಪೋಸ್ಟ್ ಮೆನ್ ನಿಂದಾಗಿ ಇಡೀ ಏರಿಯಾಕ್ಕೇ ತಿಳಿದಿರುವಾಗ, ಇದೊಂದು ಹಮ್ಮಿನ ಪ್ರಶ್ನೆಯೂ ಆಗಿಬಿಟ್ಟಿರುವುದು ಸಹಜ. ಸಮೀರ್ ಕುಮಾರ್ ಬಾಜಾ ಬಜಂತ್ರಿಗಳ ಸಮೇತ ತನ್ನ ಮನೆಗೆ ಬಂದದ್ದು, ಈ ಎಲ್ಲಕ್ಕೂ ಒಂದು ಹೊಸ ಆಯಾಮ ಸೇರಿಸಿ ಇನ್ನೂ ವಿಸ್ತ್ರುತ ರೂಪ ಕೊಟ್ಟುಬಿಟ್ಟಿದೆ. ಈಗ ಹಿಂಜರಿದರೆ ಮಾನ ಹರಾಜಾದಂತೆಯೇ ಲೆಕ್ಕ. ತಿರುಮಲಗಿರಿಯಲ್ಲೊಂದು ಮನೆ ಕಟ್ಟಿ ಅಲ್ಲಿಗೆ ಹೊರಟುಬಿಟ್ಟಿದ್ದರೆ, ಈ ಎಲ್ಲಕ್ಕೂ ಒಂದು ಮಂಗಳ ಹಾಡಿಬಿಡಬಹುದಿತ್ತು. ಆದರೂ ತಾನೀಗಿರುವ ವರ್ತುಲದಲ್ಲಿ ಮನೆ ಮಾರಾಟವಾದ ಹೊರತು ತಿರುಮಲಗಿರಿಯ ಮನೆ ಕಟ್ಟುವುದಕ್ಕಾಗುವುದಿಲ್ಲ - ಹುಚ್ಚು ಬಿಡುವವರೆಗೂ ಮದುವೆಯಾಗುವುದಿಲ್ಲ.

******

ಹೀಗೊಂದು ದಿನ ರಾತ್ರೆ ಎಲ್ಲರೂ ನಿದ್ರೆಯಲ್ಲಿದ್ದಾಗ ಭಾಸ್ಕರರಾಯರು ಇದ್ದಕ್ಕಿದ್ದಂತೆ ಧಿಗ್ಗನೆದ್ದು ಕುಳಿತರು. ಹಾಗೆ ಇದ್ದಕ್ಕಿದ್ದಂತೆ ಎಂದೂ ಅವರು ಬೆಚ್ಚಿಬಿದ್ದು ಎದ್ದವರಲ್ಲ. ಕಳೆದೆರಡು ದಿನಗಳಿಂದಲೂ ಹೈದರಾಬಾದು ಹತ್ತಿ ಉರಿಯುತ್ತಿತ್ತು. ಅರ್ಥಾತ್: ಹಿಂದೂಗಳಿಗೂ ಮುಸಲ್ಮಾನರಿಗೂ ಜೋರು ಕಾಳಗ ನಡೆಯುತ್ತಿತ್ತು. ಯಾವುದೋ ರಾಜಕೀಯ ಕಾರಣಕ್ಕೆ ಇದು ನಡೆಯುತ್ತಿದೆ, ಇದರ ಬಿಸಿ ಜನಸಾಮಾನ್ಯರಿಗೆ ತಟ್ಟುವುದಿಲ್ಲ ಎಂಬ ಮಾತನ್ನು ರಾಯರು ನಂಬಲಿಲ್ಲ. ಅವರಿಡೀ ದೇಹವನ್ನು ಭಯವೇ ಆವರಿಸಿತ್ತು. ಬದುಕಿನಷ್ಟೇ ಅಸಂಗತವಾಗಿ ಕಂಡ ಈ ಘಟನಾವಳಿಯನ್ನು ನೋಡಿ, ಭಾಸ್ಕರರಾಯರು ಏನು ಮಾಡಲೂ ತೋಚದವರಾಗಿ ಚಿಂತೆಗೊಳಗಾದರು. ಯಾವುದೋ ಆಸ್ತಿಯ ವಿಷಯಕ್ಕೆ ನಡೆಯಿತೆನ್ನಲಾದ ಒಂದು ಸಣ್ಣ ಘಟನೆ ಹಿಂದೂ ಮುಸಲ್ಮನರ ನಡುವಿನ ಜಟಾಪಟಿಯಾಗಿ ಈ ವಿಸ್ತೃತ ವಿಕರಾಳ ರೂಪ ಪಡೆದಿತ್ತು. ಇಲ್ಲಿಯೂ, ಅಂದರೆ, ರಂಗಾರೆಡ್ಡಿಯ ವಿಷಯದಲ್ಲಿಯೂ ಆಸ್ತಿಗೆ ಸಂಬಂಧಿಸಿದ ಜಟಾಪಟಿಯೇ ನಡೆಯುತ್ತಿದೆ ಎಂಬುದಕ್ಕೆ ಭಾಸ್ಕರರಾಯರು ಅವಶ್ಯಕತೆಗಿಂತ ಹೆಚ್ಚಿನ ಅರ್ಥ ಕಲ್ಪಿಸಿದರೆನ್ನಿಸುತ್ತದೆ. ಅರ್ಥರಹಿತವಾಗಿ, ನಿಷ್ಕಾರಣವಾಗಿ ಪ್ರೀತಿಗೂ ಅಲ್ಲದೇ, ದ್ವೇಷಕ್ಕೂ ಅಲ್ಲದೆ ಜನರನ್ನು ಕೊಲ್ಲುವ ಈ ಪ್ರಕ್ರಿಯೆ ಭಾಸ್ಕರರಾಯರಿಗೆ ಆಘಾತ ಉಂಟುಮಾಡಿತ್ತು.

ಶ್ರಾವಣನಂತೂ, ರಂಗಾರೆಡ್ಡಿಯ ಕೂದಲನ್ನೂ ಕೊಂಕಿಸಲಾಗದ ತನ್ನ ಅಸಹಾಯಕತೆಯನ್ನು ಒಂದು ಹಠವಾಗಿಸಿಕೊಂಡು, ಮನೆಯವರ ಮೇಲೆಲ್ಲಾ ಕೆಂಡಕಾರುತ್ತಾ, ಕಟ್ಟಿರುವ ಕಟ್ಟಡವನ್ನು ಉರುಳಿಸುವ ಶಪಥಂಗೈದು ಓಡಾಡುತ್ತಿದ್ದ. ಇದನ್ನವನು ಒಂದು ತಾತ್ವಿಕ ಪ್ರಶ್ನೆಯನ್ನಾಗಿ ಮಾಡಿಕೊಂಡು ಹೋರಾಡಬೇಕೆಂಬ ಛಲ ಹಿಡಿದು ಮುಂದುವರೆದದ್ದು - ರಾಯರಿಗೆ - ಈಗ ಈ ಕೊಲೆಸುಲಿಗೆ ನಡೆಯುತ್ತಿರುವ ಇಂಥ ಸಮಯದಲ್ಲಿ ತತ್ವಕ್ಕಾಗಿ, ದಬ್ಬಾಳಿಕೆಯ ವಿರುದ್ಧ ಹೋರಾಡುತ್ತೇನೆಂಬ ಶ್ರಾವಣನ ಹಠದಷ್ಟೇ ಅರ್ಥರಹಿತವಾಗಿ ಜಾತಿಗನುಸಾರವಾಗಿ ಜನರನ್ನು ಕೊಲ್ಲುವುದೂ ಭಾಸ್ಕರರಾಯರಿಗೆ ಅರ್ಥಹೀನವಾಗಿ ಕಂಡಿತ್ತು. ಎರಡು ದಿನದ ಹಿಂದಿನಿಂದಲೂ, ಸುಪ್ತ ಜಾಗೃತ ಅವಸ್ಥೆಗಳ ಮಧ್ಯೆ ಓಲಾಡುತ್ತಾ, ಸಮಯದ ಪ್ರಜ್ಞೆಯೇ ಇಲ್ಲದೆ ಭಾಂಗ್ ಸೇವಿಸಿದವರ ರೀತಿಯಲ್ಲಿ ಭಾಸ್ಕರರಾಯರು ಬಿದ್ದುಕೊಂಡಿದ್ದರು.

ಸಣ್ಣಂದಿನಿಂದಲೂ ಶ್ರಾವಣ ಸ್ವಲ್ಪ ಹಠಮಾರಿಯೇ. ಅವನ ಹಠ ಎಷ್ಟರ ಮಟ್ಟಿಗೆಂದರೆ, ಮಕ್ಕಳು ಯಾವ ಬಟ್ಟೆ ತೊಡಬೇಕು ಎಂಬುದರಿಂದ ಹಿಡಿದು ಯಾವ ಸಮಯಕ್ಕೆ ಉಚ್ಚೆ ಹುಯ್ಯಬೇಕು ಎಂಬುದರವರೆಗೆ ನಿರ್ಧರಿಸಿ, ಕಾರ್ಯಗತವಾಗುವಂತೆ ನೋಡಿಕೊಳ್ಳುವವ ಮತ್ತು ಇದಕ್ಕೆ ಸರಿಯಾದ ಇಂಧನ ಒದಗಿಸುವವನು ಸುಬ್ಬಾರಾವು. ಇಬ್ಬರೂ ಸೇರಿ ರಂಗಾರೆಡ್ಡಿಯ ಹಮ್ಮಿನ ಸಂಕೇತವಾಗಿದ್ದ ಆ ಕಟ್ಟವನ್ನಿಳಿಸಲು, ಗಾಳಿ, ಬೆಳಕು ಸಾಕಾಗುವುದಿಲ್ಲ ಎಂಬ ಕಾರಣದಿಂದ ಹಿಡಿದು ಕಾರ್ಪೊರೇಷನ್ ರೂಲ್ಸಿನವರೆಗೆ ಎಲ್ಲವನ್ನೂ ಉಪಯೋಗಿಸ ಹೊರಟ ಹಠದ ಫಲವಾಗಿ ಮನೆಗೆ ಮ್ಯುನಿಸಿಪಾಲಿಟಿಯವರು, ಕೋರ್ಟಿನವರು, ಷಫೀಕನ ಎಂದಿನ ಗಿರಾಕಿಗಳು - ಹೀಗೆ ಕ್ಷಣಕ್ಕೊಮ್ಮೆ ಜನ ಬರುವ ಹಾಗಾಗಿತ್ತು.

ಹೀಗೆ ಬಂದವರೆಲ್ಲಾ ಶ್ರಾವಣನ ಮನೆಯ ಆತಿಥ್ಯ ಸ್ವೀಕರಿಸಿ, ಇಡೀಮನೆಯನ್ನು, ಹಿಂದಿನ ರಂಗಾರೆಡ್ಡಿಯ ಹೊಸ ಪೋರ್ಷನ್ನನ್ನೂ ಪರಿಶೀಲಿಸಿ ಹೊರಡುವವರೇ. ಹೀಗೆ ಬಂದವರನ್ನೆಲ್ಲಾ ರಂಗಾರೆಡ್ಡಿಯೂ ಯಾವ ತರಲೆಯಿಲ್ಲದೇ ಬರಮಾಡಿಕೊಂಡು ಪ್ರೀತಿಯಿಂದ ಸಹಕರಿಸಿದನಂತೆ!!

*****

ಶ್ರಾವಣನಿಗೆ ಈಗ ಈ ಎರಡು ದಿನದಿಂದ ದೂರದರ್ಶನವನ್ನು ಹಚ್ಚಲೂ ಭಯವಾಗುತ್ತಿದೆ. ಅದಕ್ಕೆ ಕಾರಣವಿಲ್ಲದಿಲ್ಲ. ಇನ್ನು ಅನವಶ್ಯಕವಾಗಿ ತನ್ನ ಮಗ ಕೋಮು ಸಂಬಂಧಿತ ಚರ್ಚೆ ಪ್ರಾರಂಭಿಸಿಬಿಡುತ್ತಾನೆ. ಮನೆಯಲ್ಲಿ - ಅದರಲ್ಲೂ ಸುತ್ತಮುತ್ತೆಲ್ಲಾ ಭಯವೇ ಆವರಿಸಿರುವಾಗ ಈ ವಿಷಯ ಚರ್ಚಿಸುವುದು ತನಗೆ ಹಿಡಿಸುವುದಿಲ್ಲ. ಇದರ ಜತೆಗೇ ಅಪ್ಪನ ಭಯವೂ ಉಂಟು. ಈಗ ನಡೆಯುತ್ತಿರುವ ಈ ಸಾವುನೋವುಗಳ ವಿಷಯ ಚರ್ಚೆಗೊಳಗಾದರೆ, ಅಪ್ಪ ತನಗೆ ಆಫೀಸಿಗೂ ಹೋಗಲು ಬಿಡದಂತೆ ವರಾತ ಹಚ್ಚುತ್ತಾರೆ. ಮೊದಲೇ ಮುಸಲ್ಮಾನರು ತುಂಬಿರುವ ಏರಿಯಾ ಎಂದು ಅಪ್ಪನಿಗೆ ಇಲ್ಲದ ಭಯವಿದೆ. ಈ ಎರಡು ದಿನಗಳಿಂದ ಪತ್ರಿಕೆಯವನೂ ಕೈಕೊಟ್ಟದ್ದು - ಈ ಕಾರಣದಿಂದಲೇ - ಶ್ರಾವಣನಿಗೊಂದು ನಿರಾಳ ಭಾವ ತಂದಿತ್ತು.

ಆದರೂ ಈ ಎಲ್ಲ ವಿಷಯಗಳೂ ಅಪ್ಪನಿಗೆ ತಿಳಿದೇ ಇಲ್ಲವೆಂದೇನೂ ಶ್ರಾವಣ ಭಾವಿಸಿಲ್ಲ. ಅವರಿಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಆದ್ದರಿಂದಲೇ ಆಗಾಗ ತಾನು ಅಪ್ಪನೊಂದಿಗೆ ಮಾತನಾಡಿ, ಇದೆಲ್ಲಾ ಹೈದರಾಬಾದಿನಲ್ಲಿ ಮಾಮೂಲಿ ವಿಷಯ ಎಂದೆಲ್ಲಾ ಹೇಳಿ ಸ್ವಲ್ಪ ಸಮಾಧಾನ ಮಾಡಬೇಕು ಎಂತಲೂ ಅನ್ನಿಸುವುದು. ಆದರೂ ಆ ಅನಿಸಿಕೆಯನ್ನು ಹತ್ತಿಕ್ಕಲು ಒಂದೇ ಒಂದು ಕಾರಣವಿದೆ. ಈ ವಿಷಯ ಚರ್ಚೆಯಾಗುತ್ತಿದ್ದಂತೆಯೇ ಅಪ್ಪ - ಎಲ್ಲರೂ ಮೈಸೂರಿಗೆ ಹೋಗೋಣವೆಂದು ಪ್ರಾರಂಭಿಸಿಬಿಡುತ್ತಾರೆ. ಈಗ ಈ ಎಲ್ಲ ಗೊಂದಲಗಳ ನಡುವೆ ಆ ವಿಷಯವನ್ನು ಚರ್ಚಿಸುವ ತಾಳ್ಮೆಯಂತೂ ತನ್ನಲ್ಲಿಲ್ಲ. ಸೇತುವಾಯಾಚೆ, ತಿರುಮಲಗಿರಿಯಲ್ಲಿ ಹೀಗಲ್ಲಾ ನಡೆಯುವುದಿಲ್ಲ ಎಂದು ಹೇಳಬಯಸಿದರೂ, ಅಪ್ಪನ ದೃಷ್ಟಿಯಲ್ಲಿ ಹೈದರಾಬಾದು ಹೈದರಾಬಾದಾಗಿಯೇ ಉಳಿಯುವುದರಿಂದಾಗಿ ಅವರಿಗೆ ಸಮಾಧಾನ ಹೇಳುವುದೂ ತನ್ನ ಮನಶ್ಶಾಂತಿಗೇ ಕುತ್ತು ಎಂದು ಹೆದರಿ ತನ್ನ ಪಾಡಿಗೆ ತಾನಿದ್ದುಬಿಟ್ಟಿದ್ದಾನೆ.

*****

ಇದೀಗ ರಾತ್ರೋರಾತ್ರಿ ಧಿಗ್ಗನೆದ್ದು ಕುಳಿತ ರಾಯರಿಗೆ ದಿನವೂ ಬಂದು ಹೋಗುತ್ತಿದ್ದ ಜನರ ನೆನಪು ಬಂದದ್ದೇಕೆಂದು ತಿಳಿಯಲಿಲ್ಲ. ಅಥವಾ ಇದು ತಮ್ಮ ಎಂದಿನ ಮಂಪರಿನ ಸ್ಥಿತಿ ಇರಬಹುದೇ ಎಂಬುದೂ ಅರ್ಥವಾಗದೇ ದಿಗ್ಭ್ರಾಂತರಾದರು. ಮೊನ್ನೆ ನಡೆದದ್ದೂ ಹೀಗೆಯೇ - ಮನೆ ಮಾರಾಟಕ್ಕೆಂದು ಮನೆ ನೋಡಲು ಷಫೀಕ್ ಕರೆತರುವ ಜನ, ರಂಗಾರೆಡ್ಡಿಯ ಕಟ್ಟಡದಿಂದ ಇನ್ಸ್ ಪೆಕ್ಷನ್‍ಗಾಗಿ ಬರುವ ಜನ.... ಹೀಗೆ ಜನಾರಣ್ಯದ ಅಭ್ಯಾಸವಾಗಿಬಿಟ್ಟಿದ್ದ ರಾಯರು ತಾವು ಮಧ್ಯಹ್ನ ಮಲಗಿದ್ದಾಗ ಲಯಬದ್ಧವಾಗಿ ಗೇಟ್ ತಟ್ಟಿದ ಶಬ್ದ ಕೇಳಿಸಿತ್ತು. ಅಂದೇಕೋ, ಯಾರೂ ಮನೆಯಲ್ಲಿ ಇರಲಿಲ್ಲ. ರಾಯರು ಬಾಗಿಲು ತೆರೆದು ಹೊರಬಂದು ನೋಡಿದರೆ, ಉರ್ದುವಿನಲ್ಲಿ ಮಾತಾಡುತ್ತಿದ್ದ ದೊಡ್ಡ ಗುಂಪೊಂದು ಹೊರಗೆ ನಿಂತಿತ್ತು. ರಾಯರು ಏನೂ ತೋಚದವರಾಗಿ ಬಯಲಿನಲ್ಲಿ ನಿಂತಿದ್ದರು. ನಂತರ ಕುತೂಹಲದಿಂದ ಗೇಟಿನ ಬಳಗ ಹೋಗಿ ಗೇಟನ್ನೂ ತೆರೆದರು. ಸಮೀಪ ಹೋದಕೂಡಲೇ, ಗುಂಪಿನ ಪ್ರತಿ ವ್ಯಕ್ತಿಯ ಕೈಯಲ್ಲೂ ಕತ್ತಿ, ಖಡ್ಗ, ಸೈಕಲ್ ಚೇನು ಇತ್ಯಾದಿಯಾಗಿ ಆಯುಧಗಳನ್ನು ಕಂಡ ರಾಯುರು ಏನೂ ತೋರದೇ ಕಂಬವಾದರು. ಆ ಗುಂಪಿನಲ್ಲಿ ಷಫೀಕ್ ಅಲಿಯೂ ಇದ್ದಹಾಗಿತ್ತು. .. ಅಥವಾ ಅದು ಕೇವಲ ರಾಯರ ಭ್ರಮೆಯಿದ್ದಿರಲೂ ಬಹುದು. ಗುಂಪಿಗೆ ಏನನ್ನಿಸಿತೋ.. ಯಾರೂ ಮುಂದುವರೆಯಲಿಲ್ಲ. ಭಾಸ್ಕರರಾಯರು ಷಫೀಕ್ ಅಲಿ ಎಂದು ಭಾವಿಸಿದ್ದ ವ್ಯಕ್ತಿ "ಬುಡ್ಡಾ ಛೋಡೋ ಮಿಯಾ.." ಎಂದಂತಾಗಿ, ಗುಂಪು ರಸ್ತೆಯಂಚಿಗೆ ಕರಗಿ ಹೋಯಿತು. ಮುದುಕನಾದದ್ದಕ್ಕೆ ರಾಯರಿಗೆ ಜೀವನದಲ್ಲಿ ಮೊದಲಬಾರಿಗೆ ನಿರಾಳವಾದಂತೆ ಅನ್ನಿಸಿದರೂ, ಏನೂ ತೋಚದೇ ಭಾರ ಹೃದಯದಿಂದ ಬಾಗಿಲು ಹಾಕಿ ಬಂದರು. ಸಂಜೆಗೆ ಶ್ರಾವಣ ಬಂದು ಬಾಗಿಲನ್ನು ಲಯಬದ್ಧವಾಗಿ ಬಡಿದಾಗ, ರಾಯರಿಗೆ ಬಾಗಿಲಬಳಿ ಹೋಗಲೂ ಭಯವಾಯಿತು. ಕಡೆಗೆ ಕನ್ನಡದಲ್ಲಿ ಮಗ ಸೊಸೆ ಮಾತಾಡಿದಾಗಲೇ ರಾಯರು ಬಾಗಿಲು ತೆರೆದದ್ದು.

ಪ್ರಸ್ತುತ ಹೀಗೆ ಧಿಗ್ಗನೆದ್ದು ಕುಳಿತುಕೊಳ್ಳುವುದಕ್ಕೆ ಕಾರಣ ಕನಸೋ ನನಸೋ ತಿಳಿಯದು. ಅಂದು ನಡೆದ ಈ ಘಟನೆಯನ್ನು ರಾಯರು ಯಾಕೋ, ರಾಯರು ಯಾರಿಗೂ ಹೇಳಲಿಲ್ಲ. ಹೇಳದಿರುವುದಕ್ಕೆ ಕಾರಣ ಅದು ನಿಜವಾಗಿ ನಡೆದದ್ದರ ಬಗ್ಗೆ ರಾಯರಿಗಿದ್ದ ಮೂಲಭೂತ ಅನುಮಾನವೇ ಇರಬಹುದು. ಸುತ್ತಲೂ ಮುಸಲರು ತುಂಬಿದ್ದ ಆ ಜಾಗದಲ್ಲಿ ರಾತ್ರೋರಾತ್ರಿ ಜೆಹಾದಿನ ಕರೆ ಬಂತಂತಾಗಿ ರಾಯರು ಬೆಚ್ಚಿದರು. ರಾಯರಿಗೆ ಮೊಮ್ಮಗನ ನೆನಪಾಯಿತು. ಸಮಯ ನೋಡಿದರೆ ಆಗಲೇ ಬೆಳಗಾಗಲಿಕ್ಕೆ ಬಂದಿತ್ತು. ಮುಂಜಾನೆ ಐದೂವರೆಗೇ ಮೊಮ್ಮಗ ಏಂಸೆಟ್ ಶಿಕ್ಷಣಕ್ಕೆಂದು ನಾಂಪಲ್ಲಿಗೆ ಹೋಗಬೇಕು. ಹೊರಗೆಲ್ಲಾ ಗಲಾಟೆ. ಎದ್ದು ನೋಡಿದರೆ ಹಾಸಿಗೆ ಬರಿದಾಗಿತ್ತು. ರಾಯರಿಗೆ ಮಂಪರಿನಲ್ಲಿ ಏನೂ ತೋಚದಾಗಿ ಒಂದು ಕ್ಷಣ ನಿಂತರು.

ಅವರ ಮೈಯಿಂದ ಬೆವರು ಧಾರಾಕಾರ ಹರಿಯಿತು. ಮೇಲೆ ಗಡಿಯಾರದ ಶಬ್ದ ಟಿಕ್ ಟಿಕ್ ಎಂದು ಕಿವಿಗಪ್ಪಳಿಸುವಂತೆ ಹೊಡೆದುಕೊಳ್ಳುತ್ತಿತ್ತು. ಅದರ ಲಯಬದ್ಧತೆಯಿಂದ ರಾಯರು ವಿಚಲಿತರಾದರು. ಕಳೆದೆರಡು ದಿನಗಳಿಂದಲೂ ಅಂದು ಗೇಟ್ ಬಡಿವ ಶಬ್ದ ಕೇಳಿದಂತೆನಿಸಿದಾಗಿನಿಂದಲೂ ರಾಯರಿಗೆ ಯಾವುದೇ ಲಯಬದ್ಧ ಶಬ್ದವನ್ನು ತಡೆದುಕೊಳ್ಳಲು ಕೈಲಾಗುತ್ತಿರಲಿಲ್ಲ. ರಾಯರು ಮೂತ್ರ ವಿಸರ್ಜಿಸಲೆಂದು ಬಾತ್-ರೂಮು ಹೊಕ್ಕರೆ - ಅಲ್ಲಿಯೂ ನಲ್ಲಿಯಿಂದ ತೊಟ್ಟಿಕ್ಕುತ್ತಿದ್ದ ನೀರಿನ ಶಬ್ದ ಕೇಳಿಸಿತು. ಇದನ್ನು ತಡೆಯಲಾಗದ ರಾಯರು ಮೂತ್ರ ವಿಸರ್ಜಿಸುವುದನ್ನೂ, ಮುಖ ತೊಳೆಯುವುದನ್ನೂ ಮರೆತು ನಲ್ಲಿಯನ್ನು ಗಟ್ಟಿಯಾಗಿ ತಿರುಗಿಸಿದರು. ಆದರೂ ಅದು ತೊಟ್ಟಿಕ್ಕುವುದು ನಿಲ್ಲಲಿಲ್ಲ. ಬೇಸರ ಬಂದಂತಾಗಿ ಅದಕ್ಕೊಂದು ಬಟ್ಟೆ ತುರುಕಿದರು. ತುರುಕಿದಾಗ ಆವರಿಸಿದ ಮೌನ ಅಸಹನೀಯವಾದರೂ, ಅದು ಶಬ್ದಕ್ಕಿಂತ ವಾಸಿ ಅನ್ನಿಸಿತು. ಹೊರಬಂದು ನಿರಾಳ ಉಸಿರುಬಿಡುವಷ್ಟರಲ್ಲಿ ಮತ್ತೆ ಶಬ್ದ ಪ್ರಾರಂಭವಾಯಿತು. ಈಗ ಕಟ್ಟಿದ್ದ ಬಟ್ಟೆಯನ್ನೂ ದಾಟಿ ನೀರು ತೊಟ್ಟಿಕ್ಕುತ್ತಿತ್ತು. ಈ ಬಾರಿ ಭಾಸ್ಕರರಾಯರು ತಮ್ಮೆಲ್ಲ ಬಲವನ್ನೂ ಪ್ರಯೋಗಿಸಿ ನಲ್ಲಿಯನ್ನು ಮತ್ತಷ್ಟು ಗಟ್ಟಿಯಾಗಿ ತಿರುಗಿಸಿದಾಗ ವಾಷರ್ ಕಿತ್ತುಬಂದು ನೀರು ಧಾರಾಕಾರವಾಗಿ ಹರಿಯತೊಡಗಿತು. ಶಬ್ದದ ಲಯಬದ್ಧತೆಯನ್ನು ಒಂದೆರಡು ಕ್ಷಣ ಅವರ ಮನಸ್ಸು ಮರೆತರೂ, ಈಗಿನ ಅಸಹಾಯಕ ಪರಿಸ್ಥಿತಿಗೆ ಅವರಿಗೆ ತಮ್ಮ ಮೇಲೆ ತೀವ್ರ ತಿರಸ್ಕಾರ ಉಂಟಾಗಿ, ಕಟ್ಟೆ ಕಟ್ಟಿದ್ದ ಕಣ್ಣೀರ ಮಹಾಪೂರ ಬಂದಂತಾಗಿ, ಹಣೆ ಚಚ್ಚಿಕೊಂಡು ಗೊಳೋ ಎಂದು ಅತ್ತರು. ಅಷ್ಟರಲ್ಲಿ ಶ್ರಾವಣ, ಅವನ ಹೆಂಡತಿ, ಇಬ್ಬರೂ ಎದ್ದರು. ಶ್ರಾವಣ ಅಪ್ಪನ ಮೇಲೆ ವಿಪರೀತ ರೇಗಾಡಿದ. ಮೊಮ್ಮಗನ ಶೋಧದಲ್ಲಿ ಬಂದಿದ್ದ ರಾಯರಿಗೆ, ಅವನು ಅವರಪ್ಪ ಅಮ್ಮನ ಹಾಸಿಗೆಯ ಮೇಲೆ ಮಲಗಿದ್ದಾನೆಂದು ತಿಳಿದಾಗ, ಯಾವುದು ಭ್ರಮೆ ಎಂದು ಅರ್ಥವಾಗದೆ, ಏನೊಂದನ್ನೂ ಕಿವಿಗೆ ಹಾಕಿಕೊಳ್ಳದೆಯೇ ತಮ್ಮ ಹಾಸಿಗೆಗೆ ಹೋಗಿ, ಮುಖದ ಮೇಲೆ ದಿಂಬನ್ನೆಳೆದು ಮಲಗಿಬಿಟ್ಟರು.

ಅವರು ದುಃಖಿಸಿ ದುಃಖಿಸಿ ಯಾವಾಗ ನಿದ್ರೆಗೊಳಗಾದರೋ ತಿಳಿಯದು.

****

ವಿಪರೀತ ಜನರಾಗಮನ, ಹಾಗೂ ಅದೂ ನಡೆಯುತ್ತಿರುವಾಗಲೇ ಎಂದಿಗಿಂತ ಭೀಕರವಾಗಿ ಘಟಿಸಿದ ಈ ಕೋಮುಗಲಭೆ - ನಿಜಕ್ಕೂ ಶ್ರಾವಣನನ್ನು ಹೈರಾಣಾಗಿಸಿಬಿಟ್ಟಿತು. ಒಂದೆಡೆ ಮಗನ ಓಡಾಟಕ್ಕೆ, ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುವಂತಹ ಏರಿಯಾದಲ್ಲಿ ಮನೆಮಾಡಿದ ಚಡಪಡಿಕೆ, ಮತ್ತೊಂದೆಡೆ ಈ ಮನೆಯೇ ಮಾರಾಟವಾಗದಂತಹ ಚಡಪಡಿಕೆ ಮತ್ತು ಇವೆರಡನ್ನೂ ಮೀರಿ ನಿಂತದ್ದು - ರಂಗಾರೆಡ್ಡಿಯ ವಿಜಯಭಾವನೆಯ ಬೀಗುವಿಕೆಯಿಂದ ಉಂಟಾದ ಚಡಪಡಿಕೆ. ತಾನು ಮನೆ ಮಾರಲಿರುವ ವಿಚಾರ ತಿಳಿದ ರಂಗಾರೆಡ್ಡಿ , ಈಗ ಇಡೀ ಅಕಬರಬಾಗಿನಲ್ಲೇ ಬೀಗತೊಡಗಿದ್ದ - ಅವನಿಂದಾಗಿಯೇ ತಾನು ಮನೆ ಮಾರುತ್ತಿದ್ದೇನೆಂದು. ಅದೂ ಸಾಲದೆಂಬಂತೆ ಅವನೇ ಈ ಮನೆಯನ್ನು ಕೊಳ್ಳುತ್ತಿರುವುದಾಗಿಯೂ ವದಂತಿಗಳನ್ನು ಹಬ್ಬಿಸಿದ್ದ. ಈ ವದಂತಿಗಳೇ ಸಾಲದೆಂಬಂತೆ, ಕೋಮುಗಲಭೆಯ ಸಂದರ್ಭದಲ್ಲಿ ಎಂದಿನಂತೆ ವಿನಾಕಾರಣವಾಗಿ ಕಾಡ್ಗಚ್ಚಿನಂತೆ ಹಬ್ಬುತ್ತಿದ್ದ ಕೋಮು ಸಂಬಂಧಿ ವದಂತಿಗಳು. ಆ ವದಂತಿಗಳಲ್ಲಿ ಸೇರಿಹೋಗಿದ್ದ ಷಫೀಕ್ ಸಾಬರ ಹೆಸರು - ಒಟ್ಟಾರೆ ಆವರಿಸಿದ್ದ ಈ ಇಂಥ ವಾತಾವರಣದಲ್ಲಿ ಅಪ್ಪ ಕಿತ್ತ ನಲ್ಲಿಗೆ ಪ್ಲಂಬರನ್ನು ಎಲ್ಲಂದ ಹಿಡಿದುತರುವುದೆಂದು ತಿಳಿಯಲಿಲ್ಲ. ಮನೆಯಲ್ಲಿಲ್ಲದಾಗ ಮೂರನೆಯ ವ್ಯಕ್ತಿ ಮನೆ ಪ್ರವೇಶಿಸುವುದು - ಅದೂ ಈ ಸಂದರ್ಭದಲ್ಲಿ - ಶ್ರಾವಣನಿಗೆ ಸಮಾಧಾನ ನೀಡುವ ಭಾವನೆಯೇನೂ ಆಗಿರಲಿಲ್ಲ. ಕಡೆಗೂ, ಆ ಗಲಭೆಗಳು ನಿಂತು ಪರಿಸ್ಥಿತಿ ಶಾಂತವಾದಾಗ ಈ ಮನೆಗೆ ಬೀಗ ಜಡಿದಾದರೂ ಸರಿ, ಸೇತುವೆಯಾಚೆಗೆ ಹೋಗಲೇಬೇಕೆಂದು ಶ್ರಾವಣ ನಿರ್ಧರಿಸಿದ. ಒಮ್ಮೊಮ್ಮೆ ಅಪ್ಪ ಹೇಳಿದ್ದೂ ಸರಿಯೆನ್ನಿಸುವುದುಂಟು - ಶಾಂತವಾಗಿ ಮೈಸೂರಿಗೆ ಹೋಗಿ ನೆಲೆಸುವ ಬದಲು ಸುಮ್ಮನೆ ಹೀಗೆ ಮಾನಸಿಕ ಆಯಾಸ ಮಾಡಿಕೊಂಡು ಈ ಹೈದರಾಬಾದಿನಲ್ಲೇ ಮುಂದುವರೆಯುವಂಥದ್ದು ಏನಿದೆ

ಆದರೆ ಇಷ್ಟೆಲ್ಲಾ ಆಲೋಚನೆ ಮಾಡಿದಾಗ್ಯೂ, ಕಡೆಗೆ ಈ ಊರು ಬಿಡುವುದಕ್ಕೆ ಅಂತಃಕರಣ ಒಪ್ಪುವುದೇ ಇಲ್ಲ. ಮತ್ತು ಅಂತಃಕರಣ ಒಪ್ಪದಿರುವ ಈ ಪೂರ್ವ ನಿರ್ಧಾರಕ್ಕೆ ತರ್ಕವೂ ದಕ್ಕುತ್ತದೆ - ಅಕಸ್ಮಾತ್ ತಿರುಮಲಗಿರಿಯಲ್ಲಿ ಇದ್ದಿದ್ದರೆ - ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳೇ ಇರುತ್ತಿರಲಿಲ್ಲವಲ್ಲಾ ಎಂದು.

ಈ ಕಾರ್ಪಣ್ಯಗಳ ನಡುವೆ ಅಪ್ಪನನ್ನು ಒದ್ದಾಡಲು ಬಿಟ್ಟಿರುವ ಬಗ್ಗೆಯೂ ಶ್ರಾವಣನಿಗೆ ತೀವ್ರ ಪಾಪಭಾವನೆ ಕಾಡುವುದು. ಪರಿಸ್ಥಿತಿ ಶಾಂತವಾದೊಡನೆ ಅವರನ್ನು ಮೈಸೂರಿಗೆ ಕಳಿಸಿಬಿಡಬೇಕು ಎನ್ನಿಸಿದರೂ, ಮತ್ತೆ ತರ್ಕವೇ ವಿಜಯ ಸಾಧಿಸುವುದು - ಶಾಂತಪರಿಸ್ಥಿತಿಯಲ್ಲಿ ಅಪ್ಪ ಇಲ್ಲಿದ್ದರೇನು - ಮೈಸೂರಿನಲ್ಲಿದ್ದರೇನು?

****

ರಂಗಾರೆಡ್ಡಿಯ ವಿಷಯಕ್ಕೆ ಬಂದಾಗಲೆಲ್ಲಾ ಭಾಸ್ಕರರಾಯರಿಗೆ ಹೊಸ ಗೊಂದಲಗಳು ಉದ್ಭವವಾಗುತ್ತವೆ. ಉದಾಹರಣೆಗೆ ಶ್ರಾವಣ ಮನೆ ಮಾರಲಿರುವ ವಿಷಯ ಅವನಿಗೆ ತಿಳಿದು ಬಂದಂದಿನಿಂದಲೂ, ವಿಶೇಷ ಪ್ರೀತಿ ವಿನಯಗಳನ್ನು ಅವನು ತೋರುತ್ತಿದ್ದಾನೆ. ಇದೆಲ್ಲಾ ಕಂಡಾಗ ಭಾಸ್ಕರರಾಯರಿಗೆ ಈ ಆಧುನಿಕ ಯುಗವೇ ಆಗುವುದಿಲ್ಲ ಅನ್ನಿಸುತ್ತದೆ. ಹಿಂದೆಲ್ಲಾ ಪ್ರೀತಿಯೆಂದರೆ, ಪ್ರೀತಿ - ಮಾತು ಕೃತಿ, ಚಿತ್ತ, ಮನಸ್ಸು, ಆತ್ಮಗಳಲ್ಲಿ ಪ್ರೀತಿ. ದ್ವೇಷವೆಂದರೆ ಮಾತೇ ಆಡಲಾರದಷ್ಟು ದ್ವೇಷ. ಅವರು ಶಾಲೆಯಲ್ಲಿದ್ದಾಗಿನಿಂದಲೂ ಹೀಗೇ. ಎಂದೂ ಲವ್-ಹೇಟ್ ರಿಲೇಷನ್ ಎಂದರೇನೆಂದೇ ಅರ್ಥವಾಗಿರಲಿಲ್ಲ. ಈಗ ಈ ಶ್ರಾವಣನನ್ನು ರಂಗಾರೆಡ್ಡಿ ಎಷ್ಟು ನಯದಿಂದ ಮಾತನಾಡಿಸುತ್ತಾನೆಂದರೆ, ಯಾವುದು ಸತ್ಯ ಯಾವುದು ಮಿಥ್ಯೆ ಎಂಬಂತಹ ಜೀವನದರ್ಶನದ ಪ್ರಶ್ನೆಗಳು ಉದ್ಭವವಾಗಿ ನಿಲ್ಲುತ್ತವೆ. "ಪ್ರೀತಿ ನಿಷ್ಕಾರಣವಾಗಿರಬೇಕು, ದ್ವೇಷ ಸಕಾರಣವಾಗಿರಬೇಕು" ಎಂದು ಜಯಂತ ಕಾಯ್ಕಿಣಿ ಹೇಳಿದ್ದು ಭಾಸ್ಕರರಾಯರಿಗೆ ನೆನಪಾಗುವುದು. ಈಗೀಗ ಪ್ರೀತಿಗೂ ದ್ವೇಷಕ್ಕೂ ಕಾರಣಗಳೇ ಕಾಣುತ್ತಿಲ್ಲ. ರಂಗಾರೆಡ್ಡಿಯೊಂದಿಗಿನ ಒಡನಾಟವೂ ಅಂಥದ್ದೇ ಎಂದು ರಾಯರಿಗನ್ನಿಸುವುದು. ಮಕ್ಕಳು ಪಕ್ಕದ ಕಾಂಪೌಂಡಿಗೆ ಗೋಡೆ ಹಾರಿ ಜಿಗಿದಾಗ ಎಂದೂ ಶ್ರಾವಣ ಬೈದದ್ದಿಲ್ಲ. ಹಾಗೆ ನೋಡಿದರೆ ಈ ರಂಗಾರೆಡ್ಡಿಯ ವೃತ್ತಾಂತ ಮಗನ ಮೇಲೆ ಯಾವುದೇ ಪ್ರಭಾವ ಬೀರದಂತೆ ನೋಡಿಕೊಂಡಿದ್ದಾನೆ. ಈಗ ಮಧ್ಯೆ ಎಬ್ಬಿಸಿರುವ ಗೋಡೆ ಮಕ್ಕಳ ಆಟಕ್ಕೆ ಅಡ್ಡಿಯಾಗುವುದರಿಂದಲೇ ಶ್ರಾವಣ ಇಷ್ಟೆಲ್ಲಾ ರಂಪ ಮಾಡುತ್ತಿರಬಹುದೆಂದು ಒಮ್ಮೊಮ್ಮೆ ಭಾಸ್ಕರರಾಯರಿಗೆ ಅನ್ನಿಸುವುದುಂಟು.

ಈ ನಡುವೆ, ಈಚೆಗೆ ನಡೆದ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ರಂಗಾರೆಡ್ಡಿ ಮಾತುಕತೆಗಾಗಿ ಬಂದ. ಹೇಗಿದ್ದರೂ ಮನೆ ಮಾರುವ ಯೋಚನೆಯಲ್ಲಿದ್ದೀರಿ - ಮಾರುವವರೇ ಆದರೆ, ಸುಮ್ಮನೆ ಯಾಕೆ ಈ ಕೋರ್ಟು ಕಛೇರಿಗಳ ಧಂಧೆಗೆ ಹೋಗುತ್ತೀರಿ ಎಂಬುದು ಒಂದು ಸ್ಥರದ ವಾದವಾದರೆ - ಮತ್ತೊಂದು ಸ್ಥರದಲ್ಲಿ, ಮನೆ ಮಾರುವುದೆಂದು ನಿಶ್ಚಯಿಸಿದ್ದರೆ, ದಯವಿಟ್ಟು ಮುಸಲ್ಮಾನರಿಗೆ ಮಾರಬೇಡಿ ಎಂಬ ಕೋರಿಕೆ ಬೇರೆ. ತನ್ನವರಿಗೇ ಯಾರಿಗಾದರೂ ಮಾರಬಹುದಲ್ಲಾ ಎನ್ನುವ ಸಲಹೆಯನ್ನೂ ರಂಗಾರೆಡ್ಡಿ ಅಟ್ಟಿದ. ಬೇಕಿದ್ದರೆ, ನಿಜಾಮಾಬಾದ್ ಕಡೆಯ ಯಾವುದಾದರೂ ರೆಡ್ಡಿಯನ್ನು ಕರೆತಂದು ಒಳ್ಳೆಯ ಬೆಲೆ ಕೊಡಿಸುವುದಾಗಿಯೂ ಹೇಳಿದ. ಮತಕ್ಷೋಭೆಯಿಂದ ಪೀಡಿತವಾದ ಈ ಅಕಬರಬಾಗಿನ ಮನೆಗೆ ಮುಸಲ್ಮಾನರು ಬಂದರೆ ಸಾಮಾನ್ಯರು ಹೆದರಬೇಕಾದ್ದು ಸಹಜವೆನ್ನಿಸಿದರೂ ಪೋಲೀಸು ನೌಕರಿಯಲ್ಲಿರುವ ರಂಗಾರೆಡ್ಡಿ ಹೆದರುವುದು ಏಕೆಂದು ಭಾಸ್ಕರರಾಯರಿಗೆ ಅರ್ಥವಾಗಲಿಲ್ಲ. ಅಥವಾ ಆಯಿತೋ?

ರಂಗಾರೆಡ್ಡಿ ತಾನೀಗಾಗಲೇ ಎಬ್ಬಿಸಿರು ಗೋಡೆಯನ್ನು ಉಳಿಸಿಕೊಳ್ಳಲೂ ಇದೇ ವಾದವನ್ನು ಬಳಸಿದ. "ಮೊನ್ನೆ ನೋಡಿ ಏನಾಯಿತೆಂದು ನಿಮಗೆ ಗೊತ್ತೇ ಇದೆ. ಈ ಮುಸಲ್ಮಾನರೆಲ್ಲಾ ಬಂದು ನಮ್ಮನ್ನು ಮುಗಿಸಿಬಿಡುವುದರಲ್ಲಿದ್ದರು. ಈಗ ನಾವು ಹಿಂದೂಗಳೆಲ್ಲಾ ಸೇರಿ, ಹೆದರಿ ಮನೆ ಮಾರಿಕೊಂಡು ಹೋಗುವುದು ಸರಿಯಾದ ಮಾತಲ್ಲ. ಹಾಗೆಂದು ನಾವು ನಮ್ಮಲ್ಲೇ ಕಾದಾಡುತ್ತಾ ಇಲ್ಲಿ ಮುಂದುವರೆಯುವುದೂ ಸರಿಯಲ್ಲ. ನಾನೀಗ ಕಟ್ಟಿಸಿರುವ ಔಟ್‍ಹೌಸಿನಲ್ಲಿ ಕಟ್ಟುಮಸ್ತಾದ ಹಿಂದೂ ಕಿರಾಯಿದಾರರನ್ನೇ ಇಟ್ಟುಕೊಳ್ಳುತ್ತೇನೆ. ಅವರುಗಳು ಧೈರ್ಯಸ್ಥರು... ಏನಾದರೂ ಅಪಾಯವಾದಲ್ಲಿ ಪ್ರಾಣ ಕೊಡುವುದಕ್ಕೂ ತೆಗೆಯುವುದಕ್ಕೂ ಹೇಸುವವರಲ್ಲ..."

ಹೀಗೆ ಗೂಂಡಾಗಳ ಮರೆಯಲ್ಲಿ ಅಡಗುವ, ಕೇರಿಯನ್ನೇ ರಣಭೂಮಿ ಮಾಡಹೊರಟ ಪೋಲೀಸು ರಂಗಾರೆಡ್ಡಿಗೆ ಸೊಪ್ಪು ಹಾಕದ ಶ್ರಾವಣನನ್ನು ಕಂಡು ಹೆಮ್ಮೆಯಾದಂತೆನ್ನಿಸಿದರೂ, ಭಾಸ್ಕರರಾಯರ ಚಿಂತೆಯೇನೂ ಕಡಿಮೆಯಾಗಲಿಲ್ಲ. ಒಂದು ಕ್ಷಣ ಈ ಮಾತುಗಳು ರಂಗಾರೆಡ್ಡಿ ಕೊಡುತ್ತಿರುವ ಆಮಿಷವೋ ಬೆದರಿಕೆಯೋ ಅದೂ ತಿಳಿಯಲಿಲ್ಲ. ಕಡೆಗೆ ಮುದುಕನೆಂದು ತಮ್ಮನ್ನು ಬಿಟ್ಟ ಆ ಮುಸಲ್ಮಾನರ ಗುಂಪು ಸಂಭಾವಿತರೋ, ಸಾಮಾನ್ಯ ಜನರೋ, ರೌಡಿಗಳೋ, ಅಥವಾ ಮಫ್ತಿಯಲ್ಲಿದ್ದ ಪೋಲೀಸರ ಗುಂಪೋ ಎಂದೂ ಅನುಮಾನ ಬಂತು. ಏನೇ ಆದರೂ ಭಾಸ್ಕರರಾಯರ ಕನಸಿನ ರಾಜ್ಯದಲ್ಲಂತೂ ಪೋಲೀಸರವನು ಈ ರೀತಿಯ ವಿಚಾರಗಳನ್ನು ವ್ಯಕ್ತಪಡಿಸುವುದಿಲ್ಲ. ರಂಗಾರೆಡ್ಡಿ ತನ್ನ ಜೆಲ್ಲೆಯಾದ ನಿಜಾಮಾಬಾದಿಗೇ ವಾಪಸ್ಸಾಗಬಾರದೇಕೆ ಎಂದೂ ಒಂದು ಕ್ಷಣ ರಾಯರಿಗೆ ಅನ್ನಿಸಿತು. ಅದರ ಜತೆಗೇ ನಕ್ಸಲೀಯರ ಕೋಪಕ್ಕೆ ಕಾರಣವಿಲ್ಲದಿಲ್ಲ ಎಂದೂ ಅನ್ನಿಸಿತು.

ಈ ಎಲ್ಲ ಗಲಭೆಯನಂತರ ಶ್ರಾವಣ ಈ ಮನೆಯನ್ನು ಬೇರಾರಿಗಾದರೂ ಬಾಡಿಗೆಗೆ ಕೊಟ್ಟು, ಅಶೋಕನಗರಕ್ಕೆ ಹೋಗಬೇಕೆಂದು ಶ್ರಾವಣನ ಮನಸ್ಸು ಆಲೋಚಿಸುತ್ತದೆ ಎಂಬುದೂ ರಾಯರ ಪ್ರಜ್ಞೆಗೆ ಬಂತು. ಆದರೂ ಈ ಎಲ್ಲ ಗೊಂದಲಕ್ಕೂ ರಾಯರ ಬಳಿ ಸರಳವಾದ ಉಪಾಯವಿತ್ತು - ಅದೆಂದರೆ ಎಲ್ಲರೂ ಮೈಸೂರಿಗೆ ಹೊರಟುನಿಲ್ಲುವುದು. ಆದರೆ ಅವರು ಏನನ್ನೂ ಹೇಳಲಾರರು. ತಾವಾದರೂ ಈ ಚಿತ್ರಹಿಂಸೆಯಿಂದ ಪಾರಾಗಬೇಕೆಂದು ಪ್ರತಿದಿನ ಸೂಟ್‍ಕೇಸ್ ಕಟ್ಟಿದರೂ ಅದು ಕನಸಾಗಿಯೇ ಉಳಿದು, ಭಾಸ್ಕರರಾಯರು ಭ್ರಮೆಯಲ್ಲೇ ಕಾಲಹಾಕಬೇಕಾಯಿತು.

******

ಪರಿಸ್ಥಿತಿ ಸ್ವಲ್ಪ ಶಾಂತವಾಗುತ್ತಿದೆ ಎನ್ನವಾಗಲೇ, ಸರಕಾರದಿಂದ ಬಂದ ಹಳೇ ನಗರದ ಪ್ರಾಂತದ ಆಸ್ತಿ ಪಾಸ್ತಿ ಸಂಬಂಧಿತ ಯಾವುದೇ ವ್ಯವಹಾರವನ್ನು ರಿಜಿಸ್ತ್ರಿ ಮಾಡಬಾರದೆಂಬ ಸರಕಾರೀ ಸುಗ್ರೀವಾಜ್ಞೆ ಶ್ರಾವಣನನ್ನು ಕಲಕಿಬಿಟ್ಟಿತು. ಈ ನಡುವೆ ಕೋಮುಗಲಭೆ ನಡೆಯುವುದಕ್ಕೆ ಮುನ್ನವೇ ಬಂದು - ಒಂದೇ ಧರ್ಮಕ್ಕೆ ಸೇರಿದ ತಾನು, ರಂಗಾರೆಡ್ಡಿ ಶಾಂತಿಯಿಂದ ಸಹಬಾಳ್ವೆ ನಡೆಸಬೇಕಾದ ಅವಶ್ಯಕತೆಯನ್ನು ಒತ್ತಿಹೇಳಿದ್ದ ಸಮೀರ್ ಕುಮಾರನ ಮಾತುಗಳಿಗೆ ಈ ಹಿನ್ನೋಟದಿಂದ ವಿಶೇಷ ಮಹತ್ವ ಬಂದಂತಾಗಿ, ಅದರ ಆಯಾಮಗಳನ್ನು ಊಹಿಸಿಕೊಳ್ಳಲಾಗದೇ ಶ್ರಾವಣ ನಡುಗಿದ.

ಷಫಾಕ್ ಸಾಬರಂತೂ ತನಗೆ ಸಹಾಯ ಮಾಡಲೋ ಎಂಬಂತೆ, ಈ ಮನೆ ಸದ್ಯಕ್ಕೆ ಮಾರಾಟವಾಗುವುದಿಲ್ಲವಾದ್ದರಿಂದ, ತಾನು ಸೇತುವೆ ದಾಟಿ ಅಶೊಕನಗರದಲ್ಲಿ ಮನೆ ಬಾಡಿಗೆಗೆ ಹಿಡಿಯುವುದಾದರೆ, ಅವರು ಈ ಮನೆಗೆ ಯಾವುದಾದರೂ ಮುಸ್ಲಿಂ ಬಾಡಿಗೆದಾರರನ್ನು ಹಿಡಿದುಕೊಡುವುದಾಗಿ ಹೇಳಿದರು. ತಮಗೆ ಗೊತ್ತಿರುವ ನಂಬುಗಸ್ಥ ಮುಸ್ಲಿಂ ಒಬ್ಬನಿದ್ದಾನೆಂದು ಷಫೀಕ್ ಹೇಳಿದಾಗ ಗಲಭೆಯ ಸಮಯದಲ್ಲಿ ಹಬ್ಬಿದ್ದ ವದಂತಿಗಳಲ್ಲಿ ಸಿಲುಕಿಬಿಟ್ಟಿದ್ದ ಅವರ ಹೆಸರು ಮತ್ತೆ ಮರುಕಳಿಸಿದಂತಾಗಿ, ಶ್ರಾವಣ ಅವರನ್ನು ನಂಬಬೇಕೋ ಬೇಡವೋ ಎಂಬ ಗೊಂದಲದಲ್ಲಿ - ನಂಬಿದ್ದೇ ಆದರೆ ಅವರ ಋಣ ಹೇಗೆ ತೀರಿಸುವುದೆಂಬ ಗೋಜಲಿನಲ್ಲಿ ಯಾವೊಂದು ನಿರ್ಧಾರವೂ ಮಾಡಲು ಕೈಲಾಗದವನಾಗಿ, ಇದ್ದಂತಿದ್ದುಬಿಡುವುದೆಂದು ಸುಮ್ಮನಾದ. ಜೊತೆಗೇ ನುಣ್ಣಗಿದ್ದ ದೂರದ ತಿರುಮಲಗಿರಿಯ ಕನಸು ಕಾಣುತ್ತಾ - ಬಂದದ್ದೆಲ್ಲಾ ಬರಲೆಂಬ ವಿಧಿವಿಲಾಸವಾದಿಯಾಗಿ ಕೂತುಬಿಟ್ಟ.

******

ಪಕ್ಕದ ಮನೆಯ ಷಫೀಕ್ ಸಾಬರು ಬಂದಾಗ ಭಾಸ್ಕರರಾಯರು ಹೆದರಲಿಲ್ಲ. ಎಂದೂ ಇಲ್ಲದವನು ಇಂದು ಮಾತ್ರ ಬಂದು ರಾಯರನ್ನು ಮೃದುವಾಗಿ ಮಾತನಾಡಿಸಿದಾಗ ಸ್ವಲ್ಪ ಸಂತೋಷವೇ ಆಯಿತು. ಷಫೀಕರು ಅನೇಕ ಸಂದರ್ಭಗಳಲ್ಲಿ ತನಗೆ ಸಹಾಯ ಮಾಡಿದ್ದಾನೆಂದು ಹಿಂದೆ ಶ್ರಾವಣ ಹೇಳಿದ್ದ ಮಾತನ್ನು ನಂಬಬೇಕು ಎಂದು ರಾಯರಿಗೇಕೋ ಅನ್ನಿಸಿತು.

ಅಂದು ಬಂದಿದ್ದ ಗುಂಪಿನಲ್ಲಿ ಷಫೀಕ್ ಸಾಬರು ಇದ್ದೇ ಇದ್ದರೆಂಬ ಹಾಗೂ "ಬುಡ್ಡಾ ಉನೇ ಕ್ಯಾಕರ್ತೇ ಛೋಡೋ ಮಿಯಾ" ಎಂದು ಹೇಳಿ ತಮ್ಮನ್ನು ರಕ್ಷಿಸಲೆಂದೇ ಬಂದಿದ್ದರು ಎಂಬ ಆಲೋಚನೆ ಗಟ್ಟಿರೂಪ ಪಡೆಯುತ್ತಾ ಹೋಯಿತು. ಇದ್ದಕ್ಕಿದ್ದ ಹಾಗೆ ಹೀಗೆ ಷಫೀಕ ಸಾಬರ ಮೇಲೆ ಹುಟ್ಟಿದ ಅಕಾರಣ ನಂಬಿಕೆ, ಹಾಗೂ ಪ್ರೀತಿ ಪಡೆದ ರೂಪವೇ ಬೇರಾಯಿತು. ಈ ಮನೆ ಬಿಟ್ಟರೆ, ಮೈಸೂರಿಗೆ ಮಾತ್ರ ಹೋಗಬೇಕು, ಇನ್ನೆಲ್ಲಿಗೂ ಅಲ್ಲವೆಂಬ ಭಾವನೆಯನ್ನು ತಮ್ಮೊಳಗೇ ಇರಿಸಿಕೊಂಡು ರಾಯರು ತಮ್ಮ ಮೌನ ಮುಂದುವರೆಸಿದರು.

ಶ್ರಾವಣ ಎಂದಾದರೊಂದು ದಿನ ಮೈಸೂರಿನ ಮಹತ್ವ ಅರಿಯಲಾರನೇ ಮತ್ತು ಅದಕ್ಕೂ ಮೊದಲು ತಮ್ಮನ್ನು ಕಳುಹಿಸಿಕೊಡಲಾರನೇ ಎಂಬ ದೂರದ ಭ್ರಮೆ ರಾಯರನ್ನು ಕಾಡದೇ ಇರಲಿಲ್ಲ. ಹೀಗಾಗಿ ಆ ಭ್ರಮೆ ವರ್ತಮಾನಕ್ಕೂ ಆವರಿಸಿ, ಎಂದಿನ ಅಭ್ಯಾಸದಂತೆ ಇಂದೂ ಬಟ್ಟೆ ಮಡಚಿ ಪೆಟ್ಟಿಗೆಯಲ್ಲಿಟ್ಟು ಸೂಟ್‍ಕೇಸ್ ಮುಚ್ಚಿದರು.

ಇದೇ ಮೊದಲಬಾರಿಗೆ ಈ ಪ್ಯಾಕಿಂಗ್ ಕ್ರಿಯೆಯನ್ನು ಕಂಡ ಶ್ರಾವಣ ತಾವೀಗ ಎಲ್ಲೂ ಹೋಗುವುದಿಲ್ಲವೆಂದೂ, ಇಲ್ಲೇ ಇರುವ ನಿರ್ಧಾರ ಮಾಡಿರುವುದಾಗಿಯೂ ತಿಳಿಸಿದ. ಷಫೀಕ್ ಸಾಬರು ಅಕಬರಬಾಗಿಗೊಂದು ಶಾಂತಿ ಸಮಿತಿ ಏರ್ಪಾಡು ಮಾಡುವ ಸನ್ನಹದಲ್ಲಿದ್ದಾರೆಂದೂ ಭಾಸ್ಕರರಾಯರಿಗೆ ಕೇಳಿಬಂತು.

ಹೀಗೆ ಶ್ರಾವಣ ಬಂದು ತಮ್ಮೊಂದಿಗೆ ಮಾತನಾಡಿದಾಗ, ಭಾಸ್ಕರರಾಯರು ಬಾಯಿಂದ ಏನೂ ಹೊರಡಿಸದೇ ನಕ್ಕು ಬಿಟ್ಟರು. ಕಳೆದ ಹದಿನೈದು ದಿನಗಳಿಂದ ಅವರು ಒಂದಕ್ಷರವನ್ನೂ ಮಾತನಾಡಿರಲಿಲ್ಲವೆಂಬುದನ್ನು ಯಾರೂ ಗಮನಿಸಿಯೇ ಇರಲಿಲ್ಲ. ಭಾಸ್ಕರರಾಯರು ಮಲಗಬೇಕೆನ್ನುವಾಗಲೇ ರಂಗಾರೆಡ್ಡಿಯ ಮನೆಯ ಸೂರಿಗೆ ಸುರಕಿ ಹಾಕುವ ತಯಾರಿಯಲ್ಲಿ ಧಮ್ಮಸ್ಸು ಮಾಡುವ ಲಯಬದ್ಧ ಶಬ್ದ ಕೇಳಿಸಿತು. ಆ ಶಬ್ದದೊಂದಿಗೇ ಗೇಟು ಬಡಿದ, ಕೈಯಲ್ಲಿ ಕತ್ತಿ ಹಿಡಿದ ಷಫೀಕನ ಚಿತ್ರ. ರಾಯರ ಹೃದಯಬಡಿತ ಜೋರಾಗಿ ಅದೂ ಅವರ ಕಿವಿಯನ್ನು ಲಯಬದ್ಧವಾಗಿ ಅಪ್ಪಳಿಸಿತು. ಸೂರು ನೋಡುತ್ತಾ ಕಣ್ತೆರೆದೇ ಮಲಗಿದ್ದ ರಾಯರಿಗೆ ತಮ್ಮ ಅಸ್ತಿತ್ವವೇ ಕನಸೋ ನನಸೋ ತಿಳಿಯಂದಂತಾಗಿ ----

ಭಾಸ್ಕರರಾಯರು ಚಿಂತಿತರಾದರು.
ಅದೇನೂ ಹೊಸ ವಿಷಯವಾಗಿರಲಿಲ್ಲ. ಮೈಸೂರು ಬೆಂಗಳೂರುಗಳ ನಡುವೆ ಎಡತಾಕುವಾಗಲೂ, ಹಾಗೂ ಈಗಲೂ ಮಕ್ಕಳ ನಡುವೆ ಹಂಚಿಹೋದ ಭಾಸ್ಕರರಾಯರು ಈಗೀಗ ಎಲ್ಲಕ್ಕೂ ಮೂಕ ಪ್ರೇಕ್ಷಕರು. ಸದಾನಿರಂತರ ಚಿಂತಿತರು. ಎಪ್ಪತ್ತೈದರ ವಯಸ್ಸು ಸಾಮಾನ್ಯದ್ದೇನೂ ಅಲ್ಲ. ಅದು ಚಿಂತಿಸುವ ಚಿಂತೆಯುಂಟುಮಾಡುವ ವಯಸ್ಸು............


ಜೂನ್ ೧೯೯೧